ಮುದ್ದೇಬಿಹಾಳ : ತಾಲ್ಲೂಕಿನ ನಾಗಬೇನಾಳ ಗ್ರಾಮ ಪಂಚಾಯಿತಿ ಪಿಡಿಒ ಮುರಿಗೆಮ್ಮ ಪೀರಾಪುರ ಪಂಚಾಯತ್ ನಲ್ಲಿ ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುತ್ತಿದ್ದು ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಲು ಹೋದರೆ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮದ ಮುಖಂಡ ಸಂಗಪ್ಪ ಸುಲ್ತಾನಪೂರ, ಜಗದೀಶ ಪತ್ತಾರ ತಾಲ್ಲೂಕು ಪಂಚಾಯಿತಿ ಇಒಗೆ ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಕುರಿತು ಸಲ್ಲಿಸಿದ ಲಿಖಿತ ಮನವಿ ಪತ್ರದಲ್ಲಿ ಬಸವ ವಸತಿ ಯೋಜನೆಯು ನಿರ್ಗತಿಕ ಬಡವರಿಗೆ ಮನೆ ಹಾಕಬೇಕು. ಆದರೆ ಉಳ್ಳವರಿಗೆ ಮನೆ ಹಾಕಿರುತ್ತಾರೆ.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡದೇ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಮೂಲಸೌಕರ್ಯಗಳ ಕುರಿತು ಕೇಳಿದರೆ ಬೇಜವಾಬ್ದಾರಿ ಉತ್ತರ ಕೊಡುವ ಜೊತೆಗೆ ರಾಜಕಾರಣಿಗಳ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಲಾಗಿದೆ.
ವಸತಿ ಯೋಜನೆಯ ಗ್ರಾಮಸಭೆಯ ಠರಾವು, ವಿಡಿಯೋ ಚಿತ್ರೀಕರಣ, ಫಲಾನುಭವಿಗಳ ಸಹಿ ಪುಸ್ತಕದ ವಾಸ್ತವ ಪರಿಶೀಲನೆ ಮತ್ತು ಪ್ರಸ್ತಾವನೆ ನಿರ್ವಹಣೆಯಲ್ಲಿ ಶಿಸ್ತು ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ.14, 15 ಹಾಗೂ ವರ್ಗ-1 ರಡಿ ಬಿಡುಗಡೆ ಆದ ಅನುದಾನದಲ್ಲಿ ದುರುಪಯೋಗವಾಗಿದ್ದು ಅವರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.