ಮುದ್ದೇಬಿಹಾಳ : ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸಿದ ಶಿಕ್ಷಕಿಯೊಬ್ಬರಿಗೆ ಕೊಟ್ಟಿರುವ ಸೇವಾ ಪ್ರಮಾಣ ಪತ್ರವನ್ನೇ ತಿದ್ದುಪಡಿ ಮಾಡಿ ಅದರ ಆಧಾರದ ಮೇಲೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಶಾಲೆಯ ಮಾನ್ಯತೆ ರದ್ದುಗೊಳಿಸುವಂತೆ ಕಿರುಕಳ ನೀಡುತ್ತಿರುವ ಹೋರಾಟಗಾರನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲ್ಲೂಕಿನ ಢವಳಗಿ ಬಸವ ಬಾಲ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಶನಿವಾರ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರ ಎಂ. ಎ. ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಯ ವಿರುದ್ಧ ನಿರಂತರವಾಗಿ ತಮಗೆ ಅನ್ಯಾಯವಾಗಿದೆ ಎಂದು ಹಲವು ರೀತಿಯಲ್ಲಿ ಚೇತನ ಶಿವಶಿಂಪಿ ಎಂಬುವರು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಲ್ಲಿಕರ್ಜುನ ಸಿದರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆಯಡಿ ನಡೆಯುತ್ತಿರುವ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಭೂದೇವಿ ಹುನಗುಂದ 1994 ರಿಂದ 1997ರವರೆಗೆ ಸೇವೆ ಸಲ್ಲಿಸಿದ್ದಾರೆ. ಆದರೆ ಇವರಿಗೆ ಕೊಟ್ಟಿರುವ ಸೇವಾ ಪ್ರಮಾಣ ಪತ್ರವನ್ನು ಅವರ ಪುತ್ರ ಚೇತನ ಶಿವಶಿಂಪಿ ಹಾಗೂ ಶಿಕ್ಷಕಿ ಭೂದೇವಿ ಹುನಗುಂದ ಅವರು ಸೇರಿಕೊಂಡು 1994 ರಿಂದ 2003 ಎಂದು ತಿದ್ದುಪಡಿ ಮಾಡಿಕೊಂಡು ಶಾಲೆಯಲ್ಲಿ 11 ರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದು ಸುಳ್ಳು ಹೇಳುತ್ತಾ ಸೇವಾ ಪ್ರಮಾಣ ಪತ್ರವನ್ನು ತಿದ್ದುಪಡಿ ಮಾಡಿ ವಿವಿಧ ಇಲಾಖೆಗಳಿಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಮೇಲಧಿಕಾರಿಗಳ ಆದೇಶವಿಲ್ಲದೇ ಶಿಕ್ಷಕರ ವೇತನ ತಡೆ ಹಿಡಿಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದು ಸದರಿ ವ್ಯಕ್ತಿಯನ್ನು ಕರೆದು ಕೂಲಂಕುಷವಾಗಿ ತನಿಖೆ ನಡೆಸಿ 10 ದಿನದೊಳಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಏ.28ರಂದು ತಹಸೀಲ್ದಾರ್ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಎಂ. ಜಿ.ಬಿ ರಾದಾರ (ಬಾಂಬೆಗೌಡ), ಪದಾಧಿಕಾರಿಗಳಾದ ನಾನಾಗೌಡ ಕೊಣ್ಣೂರ, ಬಾಪುಗೌಡ ಪಾಟೀಲ, ಬಾಪುಗೌಡ ಬಿರಾದಾರ, ವಿಜಯಕುಮಾರ ಪಾಟೀಲ, ಗುರುನಾಥ ಸಜ್ಜನ, ಮಡಿವಾಳಪ್ಪಗೌಡ ಬಿರಾದಾರ ಇದ್ದರು.