ಮುದ್ದೇಬಿಹಾಳ : ದೇಶದ ಜಾತಿ, ಜನಗಣತಿ ಆಗಬೇಕು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿರುವುದಕ್ಕೆ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸ್ವಾಗತಿಸಿದ್ದಾರೆ.
ಪಟ್ಟಣದ ದಾಸೋಹ ನಿಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿದ್ದ ಜಾತಿ ಜನಗಣತಿ ಇದುವರೆಗೂ ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಯಾವುದೇ ವರ್ಗಕ್ಕೆ ಅನ್ಯಾಯವಾಗದ ರೀತಿ ಜಾತಿ ಗಣತಿಗೆ ಮುಂದಾಗಲಿದ್ದಾರೆ. ಜಾತಿ ಜನಗಣತಿ ಮಾಡುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು ರಾಜ್ಯ ಸರ್ಕಾರಕ್ಕೆ ಈ ಅಧಿಕಾರ ಇಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಸರ್ಕಾರ ವೋಟ್ ಬ್ಯಾಂಕ್ಗಾಗಿ, ಸ್ವಾರ್ಥಕ್ಕಾಗಿ ಜಾತಿ ಜನಗಣತಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ದೇಶವನ್ನು 65 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ರಾಜಕೀಯ ಅಸ್ತ್ರವನ್ನಾಗಿ ಜಾತಿ ಗಣತಿಯನ್ನು ಬಳಕೆ ಮಾಡಿಕೊಂಡಿತ್ತು. ಜಾತಿ ಉಪಜಾತಿಗಳ ಸಮೀಕ್ಷೆಯ ನೆಪದಲ್ಲಿ ಹಿಂದೂ ಹಿಂದೂಗಳ ಮಧ್ಯೆ ವ್ಯತ್ಯಾಸವನ್ನು ತಂದಿಟ್ಟು ಸಮಾಜದಲ್ಲಿ ಒಡಕನ್ನುಂಟು ತಂದು ರಾಜಕೀಯ ಕುತಂತ್ರವನ್ನು ಮಾಡಿದೆ ಎಂದು ಆರೋಪಿಸಿದರು.
ಹಿಂದೂ ಸಮಾಜವನ್ನು ಒಗ್ಗೂಡಿಸಬೇಕು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಣಗಣತಿಯೊಂದಿಗೆ ಜಾತಿ ಗಣತಿ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಇದು ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗಂಗಾಧರ ನಾಡಗೌಡ, ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಸೋಮನಗೌಡ ಬಿರಾದಾರ, ವಕೀಲ ಎಂ. ಆರ್. ಪಾಟೀಲ, ಹಣಮಂತ ನಲವಡೆ, ರಾಜಶೇಖರ ಹೊಳಿ, ಸಂಜೀವ ಬಾಗೇವಾಡಿ ಇದ್ದರು.
ದೇಶದಲ್ಲಿರುವುದು ಪಾಕಿಸ್ತಾನ ಕಾಂಗ್ರೆಸ್- ನಡಹಳ್ಳಿ ಟೀಕೆ
ಪೆಹಲ್ಗಾಮ್ ಘಟನೆ ಬಳಿಕ ಕಾಶ್ಮೀರದಲ್ಲಿರುವ ಮುಸ್ಲಿಂ ಜನಾಂಗದವರೇ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿದ್ದು ಉಗ್ರರನ್ನು ಸದೆಬಡೆಯುವಂತೆ ಒತ್ತಾಯಿಸುತ್ತಿದ್ದಾರೆ.ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ಧರಾಮಯ್ಯ ಯುದ್ಧ ಬೇಡ ಎನ್ನುತ್ತಿದ್ದರೆ ಸಚಿವ ಲಾಡ್, ಬಿ. ಕೆ. ಹರಿಪ್ರಸಾದ, ಸಚಿವ ತಿಮ್ಮಾಪೂರ ತಮ್ಮದೇ ಧಾಟಿಯಲ್ಲಿ ಈ ದಾಳಿಯ ಕುರಿತು ಮಾತನಾಡಿ ತಮ್ಮ ಸಣ್ಣತವನ್ನು ತೋರಿಸುತ್ತಿದ್ದಾರೆ ಎಂದು ನಡಹಳ್ಳಿ ಟೀಕಿಸಿದರು. ಸಿಎಂ ಆಗಿರುವ ಸಿದ್ಧರಾಮಯ್ಯನವರಂತಹ ಹಿರಿಯ ರಾಜಕಾರಣಿ ಇಂತಹ ಹೇಳಿಕೆಗಳನ್ನು ಕೊಡುವುದು ದೇಶದ್ರೋಹವಾಗುತ್ತದೆ ಎಂದು ಹೇಳಿದರು.
ದೇಶದಲ್ಲಿರುವ ಮುಸ್ಲಿಂ ಬಾಂಧವರು ಪಾಕಿಸ್ತಾನದವರು ಮಾಡುತ್ತಿರುವ ಭಯೋತ್ಪಾದಕ ದಾಳಿಗಳನ್ನು ಬೀದಿಗಿಳಿದು ಖಂಡಿಸಬೇಕು. ಕೇಂದ್ರ ಸರ್ಕಾರಕ್ಕೆ ಭಯೋತ್ಪಾದನೆ ಮಟ್ಟ ಹಾಕಲುಬೇಕಾದ ನೈತಿಕ ಬೆಂಬಲ ಮುಸ್ಲಿಂರು ನೀಡಬೇಕು.
ದೇಶದಲ್ಲಿರುವ ಕಾಂಗ್ರೆಸ್ ಭಾರತದ ಕಾಂಗ್ರೆಸ್ ಆಗಿ ಉಳಿದಿಲ್ಲ. ಅದು ಪಾಕಿಸ್ತಾನಿಯರ ಕಾಂಗ್ರೆಸ್ ಆಗಿದೆ ಎಂದು ನಡಹಳ್ಳಿ ಟೀಕಿಸಿದರಲ್ಲದೇ, ಪೆಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ ಉಗ್ರರಿಗೆ ಸೇರಿದಂತೆ ಇಷ್ಟು ವರ್ಷಗಳಲ್ಲಿ ಪಾಕಿಸ್ತಾನ ಮಾಡಿರುವ ಉಗ್ರರ ದಾಳಿಗಳಿಗೆ ಪ್ರತಿಯಾಗಿ ಎಲ್ಲವನ್ನೂ ಲೆಕ್ಕ ಹಾಕಿ ಬಡ್ಡಿ ಸಮೇತ ಕೇಂದ್ರ ಸರ್ಕಾರ, ಸೇನೆ ವಾಪಸ್ ತೀರಿಸಬೇಕು ಎಂದು ಹೇಳಿದರು.