ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಮೇಲೆ ಗರಂ ಆದ ಪ್ರಸಂಗ ನಡೆದಿದೆ.
ಸಿಎಂ ಭಾಷಣ ಮಾಡುತ್ತಿರುವಾಗ, ಸಮಾವೇಶದಲ್ಲಿ ಕೆಲ ಬಿಜೆಪಿಗರು, ಕಾಂಗ್ರೆಸ್ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿಎಂ ಭಾಷಣದ ವೇಳೆ ಗದ್ದಲ ಸೃಷ್ಟಿಸಲು ಕೆಲ ಗುಂಪು ಮುಂದಾದಾಗ ಸಿಎಂ ಪೊಲೀಸರು ಏನು ಮಾಡುತ್ತಿದ್ದೀರಿ? ಯಾವನೋ ಅವನು ಎಸ್ಪಿ? ಬಾ ಇಲ್ಲಿ ? ಅಲ್ಲಿ ಏನು ನಡೆಯುತ್ತಿದೆ ಗೊತ್ತಾಗಲ್ವಾ ಎಂದು ಏಕವಚನದಲ್ಲಿ ಗದರಿದ ಸಿಎಂ, ಸಿಟ್ಟಿನಿಂದ ಹೊಡೆಯುವಂತೆ ಕೈ ಎತ್ತಿದ್ದಾರೆ.
ಸಮಾವೇಶದಲ್ಲಿ ಯಾವನು ಅಲ್ಲಿ ಗಲಾಟೆ ಮಾಡುತ್ತಿರುವುದು? ಪರಿಸ್ಥಿತಿ ಮೇಲೆ ನಿಗಾ ಇಡಲು ಆಗಲ್ವಾ ಎಂದು ಸಿಎಂ ಏರು ಧ್ವನಿಯಲ್ಲಿ ಸಿಟ್ಟಾದರು. ಈ ವೇಳೆ ಸಚಿವ ಹೆಚ್ಕೆ ಪಾಟೀಲ್, ಎಂಬಿ ಪಾಟೀಲ್ ಅವರು ಸಿಎಂ ಅವರನ್ನು ಸಮಾಧಾನ ಪಡಿಸಿದರು.