ಮುದ್ದೇಬಿಹಾಳ : ಕಾಶ್ಮೀರದ ಪಹೆಲ್ಗಾಮ್ದಲ್ಲಿ ದೇಶದ ಅಮಾಯಕ ಪ್ರಜೆಗಳನ್ನು ಬಲಿಪಡೆದಿರುವ ಉಗ್ರಗಾಮಿಗಳನ್ನು ನಿರ್ನಾಮ ಮಾಡುವ ವಿಷಯದಲ್ಲಿ ಯಾವುದೇ ರಾಜಕೀಯ ಬೆರೆಸಬಾರದು ಎಂದು ರಾಷ್ಟ್ರೀಯ ಮೀನುಗಾರರ ಸಂಘದ ಉಪಾಧ್ಯಕ್ಷ ಡಾ.ಗೌತಮ ಚೌಧರಿ ರಾಜಕೀಯ ಪಕ್ಷಗಳ ಮುಖಂಡರಿಗೆ ಸಲಹೆ ಮಾಡಿದ್ದಾರೆ.
ಮುದ್ದೇಬಿಹಾಳದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಶ್ಮೀರದಲ್ಲಿ ನಡೆದ ದಾಳಿಯನ್ನು ಖಂಡಿಸಿದರು.
ಪ್ರವಾಸಕ್ಕೆಂದು ತೆರಳಿದ್ದ ದೇಶವಾಸಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿ ಕೊಂದಿರುವ ದುಷ್ಟರನ್ನು ಸದೆ ಬಡೆಯುವುದಕ್ಕೆ ಕೇಂದ್ರ ಸರ್ಕಾರ, ಭಾರತೀಯ ಸೇನೆ ಕಾರ್ಯಪ್ರವೃತ್ತವಾಗಿದ್ದು ಈ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಕ್ರೂರವಾಗಿ ಮಾನವೀತೆಯನ್ನೇ ಉಗ್ರರು ಕೊಂದಿದ್ದಾರೆ. ಇಂತಹ ಹೇಯ ಕೃತ್ಯ ಮಾಡಿದವರನ್ನು ಯಾವುದೇ ಜಾತಿ, ಸಮುದಾಯದವರು ಸಮರ್ಥಿಸಿಕೊಳ್ಳದೇ ಭಯೋತ್ಪಾದಕರನ್ನು ಹೊಡೆದೋಡಿಸಲು ಪಾಕಿಸ್ತಾನದ ಮೇಲೆ ಯುದ್ಧ ಮಾಡಿದರೂ ಸರಿ ಉಗ್ರರನ್ನು ಮಟ್ಟ ಹಾಕಬೇಕು. ದೇಶಕ್ಕಾಗಿ ನಾವು ತ್ಯಾಗ ಮಾಡಲು ಸಿದ್ಧರಿರಬೇಕು. ದೇಶದ್ರೋಹಿಗಳು ಯಾವುದೇ ಸಮುದಾಯದಲ್ಲಿದ್ದರೂ ಅವರನ್ನು ನಿರ್ನಾಮ ಮಾಡಬೇಕು ಎಂದು ತಿಳಿಸಿದರು.
ದೇಶದ ಭದ್ರತೆ ವಿಷಯ ಬಂದಾಗ ನಿಷ್ಕಾಳಜಿಯಿಂದ ಮಾತನಾಡದೇ ಎಲ್ಲರೂ ಒಗ್ಗಟ್ಟಾಗಿ ದೇಶದ ಸರ್ಕಾರವನ್ನು ಬಲಪಡಿಸಬೇಕು. ಇಂತಹ ಹೇಯ ಕೃತ್ಯಗಳನ್ನು ಮಾಡುವವರನ್ನು ನಿರ್ನಾಮ ಮಾಡಲು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಕಾಶ್ಮೀರದಲ್ಲಿರುವ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತಂದಿರುವ ರಾಜ್ಯ ಸರ್ಕಾರಕ್ಕೂ ಅಭಿನಂದಿಸುವುದಾಗಿ ಡಾ.ಚೌಧರಿ ತಿಳಿಸಿದರು.