ಮುದ್ದೇಬಿಹಾಳ : ಹೆಸ್ಕಾಂನ ಗ್ರಾಮೀಣ ವಲಯದ ಸೆಕ್ಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ತಾಲ್ಲೂಕಿನ ಕುಂಟೋಜಿ ಗ್ರಾಮದ ಶಿವಪ್ಪ ಎಂ. ಆರೇಶಂಕರ ಅವರ ಶವ ಬುಧವಾರ ಕುಂಟೋಜಿ ಸೀಮೆಯಲ್ಲಿ ಬರುವ ಬಸವ ಇಂಟರ್ನ್ಯಾಶನಲ್ ಸ್ಕೂಲ್ ಹಿಂಭಾಗದ ಜಮೀನೊಂದರ ಗಿಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಕಳೆದ ನಾಲ್ಕು ವರ್ಷಗಳಿಂದ ಹೆಸ್ಕಾಂನಲ್ಲಿ ಗ್ರಾಮೀಣ ಭಾಗದ ಸೆಕ್ಷನ್ ಅಧಿಕಾರಿಯಾಗಿ ಒಳ್ಳೆಯ ಹೆಸರು ಮಾಡಿದ್ದ ಆರೇಶಂಕರ ಸಾವನ್ನಪ್ಪಿದ್ದ ಸುದ್ದಿ ತಿಳಿದ ಅವರ ಸ್ನೇಹಿತರು, ಬಂಧುಗಳು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಏತನ್ಮಧ್ಯೆ ಶಿವಪ್ಪ ಸಾವನ್ನಪ್ಪುವ ಮುನ್ನ ತನ್ನ ಸ್ನೇಹಿತರಿಗೆ, ಸಹೋದರರಿಗೆ ವಾಟ್ಸಾಪ್ನಲ್ಲಿ ಕೆಲವು ಸಂದೇಶ ಹಾಕಿದ್ದ ಎನ್ನಲಾಗಿದ್ದು ಪೊಲೀಸ್ ತನಿಖೆಯಿಂದಲೇ ಸಾವಿಗೆ ನೈಜ ಕಾರಣ ತಿಳಿದು ಬರಬೇಕಿದೆ.
ಶಿವಪ್ಪ ಆರೇಶಂಕರ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಗ್ರಾಮದ ಯಾವುದೇ ಜಾತ್ರೆ, ಉತ್ಸವಗಳು ಬಂದರೆ ಅಲ್ಲಿ ತಮ್ಮ ಕೈಲಾದಷ್ಟು ಮಟ್ಟಿಗೆ ದೇಣಿಗೆಯನ್ನು ಕೊಟ್ಟು ಜನರ ಪ್ರೀತಿ ಸಂಪಾದಿಸಿದ್ದರು. ಇದೀಗ ಅವರ ಸಾವು ಅವರ ಸ್ನೇಹಿತರು, ಆಪ್ತರಿಗೆ ದಿಗ್ಭ್ರಮೆ ಮೂಡಿಸಿದೆ.ಆರೇಶಂಕರ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.