ಬಾಗಲಕೋಟೆ: ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ 6 ವಿಷಯಗಳಲ್ಲಿ ಫೇಲ್ ಆದ ಮಗನಿಗೆ ಕೇಕ್ ತಿನ್ನಿಸಿ ಪೋಷಕರು ಧೈರ್ಯ ತುಂಬಿರಿವ ಘಟನೆ ನಗರದಲ್ಲಿ ನಡೆದಿದೆ. ಬಾಗಲಕೋಟೆ ನವನಗರದ ನಿವಾಸಿಯಾಗಿರುವ ಅಭಿಷೇಕ್ ಚೊಳಚಗುಡ್ಡ ಆರು ವಿಷಯಗಳಲ್ಲಿ ಫೇಲ್ ಆಗಿದ್ದರಿಂದ ದುಖಃದಲ್ಲಿದ್ದ. ಆತನಿಗೆ ಕುಟುಂಬದ ಸದಸ್ಯರು ಕೇಕ್ ಕಟ್ ಮಾಡಿಸಿ, ತಿನ್ನಿಸುವ ಮೂಲಕ ಧೈರ್ಯ ಹೇಳಿದ್ದಾರೆ.
ನಗರದ ಬಸವೇಶ್ವರ ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದ ಅಭಿಷೇಕ 625ಕ್ಕೆ 200 ಅಂಕ ಪಡೆದು ಶೇ.32 ಅಂಕ ಪಡೆದು ಅನುತೀರ್ಣವಾಗಿ ದುಃಖದಲ್ಲಿರುವ ಮಗನಿಗೆ ತಂದೆ ಯಲ್ಲಪ್ಪ ಅವರು, ಸಿಹಿ ತಿನ್ನಿಸಿ ಮುತ್ತು ಕೊಟ್ಟು, ಪರೀಕ್ಷೆ ಒಂದೇ ಜೀವನವಲ್ಲ, ಮತ್ತೆ ಪ್ರಯತ್ನ ಮಾಡು ಎಂದು ಹೆಗಲ ಮೇಲೆ ಕೈ ಇಟ್ಟು ಧೈರ್ಯ ತುಂಬಿದ್ದಾರೆ.
ಅಭಿಷೇಕ್, ಹದಿನೈದು ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ನೆನಪಿನ ಶಕ್ತಿ ಕಳೆದುಕೊಂಡಿದ್ದ. ಹೀಗಾಗಿ ಉತ್ತರ ನೆನಪಿಟ್ಟುಕೊಂಡು ಬರೆಯಲು ವಿದ್ಯಾರ್ಥಿ ವಿಫಲವಾಗಿದ್ದಾನೆ.
ಫೇಲ್ ಆಗಿದ್ದರಿಂದ ಬಹಳ ಬೇಜಾರಾಗಿತ್ತು. ನಮ್ಮ ತಂದೆ ತಾಯಿ ಎಲ್ಲರೂ ಧೈರ್ಯ ಹೇಳಿದರು. ಫೇಲ್ ಆದರೂ ಧೈರ್ಯ ಹೇಳಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗ್ತೀನಿ. ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಸಾಧಿಸಿ ತೋರಿಸ್ತೀನಿ ಎಂದು ಅಭಿಷೇಕ್ ಹೇಳಿದ್ದಾನೆ.