ಮುದ್ದೇಬಿಹಾಳ : ಕಾಮಣಿ(ಕಾಮಾಲೆ) ರೋಗದ ಬಗ್ಗೆ ಗ್ರಾಮೀಣ ಪ್ರದೇಶದ ಜನರು ಹೊಂದಿರುವ ಮೂಢನಂಬಿಕೆಯನ್ನು ಬಿಟ್ಟು ವೈದ್ಯಕೀಯ ಉಪಚಾರವನ್ನು ಪಡೆದುಕೊಂಡರೆ ರೋಗಪೀಡಿತ ಮಕ್ಕಳನ್ನು ಬೇಗನೇ ಆರೋಗ್ಯವಂತರನ್ನಾಗಿಸಲು ಸಾಧ್ಯವಿದೆ ಎಂದು ಚಿಕ್ಕಮಕ್ಕಳ ವೈದ್ಯ ಡಾ.ಪರಶುರಾಮ ವಡ್ಡರ ಹೇಳಿದರು.
ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಮದರಿಯ ಚೈತ್ರಾ ಆರೋಗ್ಯ ಮತ್ತು ಶೈಕ್ಷಣಿಕ ಸೇವಾ ಟ್ರಸ್ಟ್ ನಿಂದ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಹೈಪಟೈಸಟ್ ಕಾಯಿಲೆ ಬಂದಾಗ ತಕ್ಷಣ ವೈದ್ಯರಲ್ಲಿ ತೋರಿಸಬೇಕು. ಗಿಡಮೂಲಿಕೆಯಿಂದ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆಯನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ, ತ್ವರಿತವಾಗಿ ಮಗುವಿನ ಜೀವಕ್ಕೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕಾದರೆ ವೈದ್ಯರಲ್ಲಿ ತೋರಿಸುವುದು ಉತ್ತಮ ಎಂದು ಸಲಹೆ ನೀಡಿದರು.
ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ ಮಾತನಾಡಿ, ನಮ್ಮ ಭಾಗದಲ್ಲಿ ಚಿಕ್ಕಮಕ್ಕಳು ಅನಾರೋಗ್ಯಕ್ಕೀಡಾದರೆ ವಿಜಯಪುರ ಇಲ್ಲವೇ ಬಾಗಲಕೋಟೆಗೆ ತೆರಳಬೇಕಿತ್ತು. ಆ ಸಮಸ್ಯೆಯನ್ನು ನೀಗಿಸಿದ ಕೆಲಸವನ್ನು ಯಮನಪ್ಪ ವಡ್ಡರ ಕುಟುಂಬದವರು ಮಾಡಿದ್ದಾರೆ. ಉತ್ಸಾಹಿ ವೈದ್ಯ ಡಾ. ಪರಶುರಾಮ ಅವರು ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಆಶಾ ಕಾರ್ಯಕರ್ತೆಯರ ಕಾರ್ಯ ಮಹತ್ವದ್ದಾಗಿದ್ದು ತಾಯಂದಿರ ಆರೈಕೆ, ಪೋಷಣೆ ಕುರಿತಾದ ಕಾರ್ಯಗಳಿಂದ ಮನೆ ಮಾತಾಗಿದ್ದಾರೆ. ಅವರಿಗೆ ಸರ್ಕಾರದಿಂದ ಇನ್ನಷ್ಟು ಸ್ಪಂದನೆ ಅಗತ್ಯವಾಗಿದೆ ಎಂದರು.
ವೈದ್ಯೆ ಡಾ. ನಿಸರ್ಗ ಕೊಟಮುಚಗಿ, ದಲಿತ ಮುಖಂಡ ಹರೀಶ ನಾಟೀಕಾರ, ಬಿಜೆಪಿ ಮುಖಂಡ ಪ್ರಭು ಕಡಿ, ಕುಮಾರ ವಡ್ಡರ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಯಮನಪ್ಪ ವಡ್ಡರ ಅಧ್ಯಕ್ಷತೆ ವಹಿಸಿದ್ದರು. ಭೋವಿ ವಡ್ಡರ ಸಮಾಜದ ಮುಖಂಡ ಪರಶುರಾಮ ನಾಲತವಾಡ ಆಸ್ಪತ್ರೆಯ ಸಿಬ್ಬಂದಿ ಇದ್ದರು.