ಮುದ್ದೇಬಿಹಾಳ : ಸರ್ಕಾರಿ ಜಾಗೆಯನ್ನು ಕಬಳಿಸಲು ಮುಂದಾಗಿದ್ದ ವ್ಯಕ್ತಿಗಳೇ ಹೆಸ್ಕಾಂ ಅಧಿಕಾರಿ ಶಿವಪ್ಪ ಆರೇಶಂಕರ ಅವರನ್ನು ದ್ವೇಷದಿಂದ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತ ಆರೇಶಂಕರ ಅವರ ಪತ್ನಿ ಗೌರಮ್ಮ ಆರೇಶಂಕರ ನಾಲ್ವರ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೇ.1 ರಂದು ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ : ಕುಂಟೋಜಿ ಗ್ರಾಮದ ಒಂದು ಸರಕಾರಿ ಜಾಗೆಯನ್ನು ಪ್ರಬಲ ವ್ಯಕ್ತಿಗಳು ತಮ್ಮ ವಶಕ್ಕೆ ಪಡೆದುಕೊಳ್ಳುವ ತವಕದಲ್ಲಿದ್ದಾಗ ತಮ್ಮ ಪತಿ ಶಿವಪ್ಪ ಆರೇಶಂಕರ (45) ಇವರು ಇತರೆ ಗ್ರಾಮಸ್ಥರೊಂದಿಗೆ ಸೇರಿ ತನ್ನ ಮುಂದಾಳತ್ವದಲ್ಲಿ ಸದರಿ ಜಾಗೆಯಲ್ಲಿ ಏ.26 ರಂದು ರಾಮಮಂದಿರದ ಕಟ್ಟೆಯನ್ನು ನಿರ್ಮಿಸಿದ್ದರಿಂದ ಅವರ ಮೇಲೆ ಸಿಟ್ಟಾಗಿದ್ದರು.
ನನ್ನ ಪತಿಯ ಮೊಬೈಲ್ ಸಂಖ್ಯೆಗೆ ಸಂಬಂಧಿಯ ಹಾಗೂ ಸ್ನೇಹಿತರ ಮೊಬೈಲ್ ಸಂಖ್ಯೆಗೆ ಟೆಕ್ಸ್ಟ್ ಮೆಸೆಜ್ ಹಾಗೂ ವ್ಹಾಯಿಸ್ ಮೆಸೆಜ್ಗಳನ್ನು ಹಾಕಿದ್ದನ್ನು ಗಮನಿಸಿದಾಗ ಊರಲ್ಲಿ ರಾಮಂದಿರದ ಕಟ್ಟೆಯನ್ನು ಕಟ್ಟಿಸಿದ್ದರ ವಿಷಯವಾಗಿ ಕುಂಟೋಜಿಯ ಸಂಗಮೇಶ ಗುರಪ್ಪ ಅಂಗಡಿ, ಶರಣಪ್ಪ ನಾಗಪ್ಪ ಬಳೂತಿ, ಮುದ್ದೇಬಿಹಾಳದ ಶಿವಪ್ಪ ಮುಳವಾಡ, ರಾಜು ಕುಂಬಾರ ಇವರೆಲ್ಲರೂ ಸೇರಿ ನನ್ನ ಗಂಡನಿಗೆ ಚಿತ್ರಹಿಂಸೆ ನೀಡಿ ಕೊಲೆಗೈದು ಕವಡಿಮಟ್ಟಿ ಸೀಮೆಯ ಬಳಿ ಬರುವ ಹೊಲದಲ್ಲಿ ಬೇವಿನ ಮರಕ್ಕೆ ನೇಣು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಧಿವಿಜ್ಞಾನ ತಂಡ ಭೇಟಿ: ಮೃತ ಹೆಸ್ಕಾಂ ನೌಕರ ಶಿವಪ್ಪ ಆರೇಶಂಕರ ಅವರ ಶವದ ಮರಣೋತ್ತರ ಪರೀಕ್ಷೆ ಗುರುವಾರ ಮದ್ಯಾಹ್ನ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಡೆಯಿತು. ಬೆಳಗ್ಗೆ ವಿಜಯಪುರದಿಂದ ಆಗಮಿಸಿದ್ದ ವಿಧಿ ವಿಜ್ಞಾನ ತಂಡದ ಅಧಿಕಾರಿಗಳು ಶವದ ಮೇಲಿರುವ ಕಲೆಗಳು, ಘಟನಾ ಸ್ಥಳದ ಬಗ್ಗೆ ಕುರಿತು ಪೊಲೀಸರಿಂದ ಮಾಹಿತಿ ಕಲೆ ಹಾಕಿದರು. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪಿಎಸ್ಐ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ.
ದೂರು ಸ್ವೀಕರಿಸಲು ವಿಳಂಬ: ಘಟನೆ ನಡೆದ 24 ತಾಸುಗಳವರೆಗೂ ದೂರು ಸ್ವೀಕರಿಸಿ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರಿಂದ ವಿಳಂಬ ಮಾಡಲಾಗಿದೆ ಎಂಬ ಆರೋಪಗಳನ್ನು ಕುಟುಂಬಸ್ಥರು ಹಾಗೂ ಆರೇಶಂಕರ ಸ್ನೇಹಿತರಿಂದ ಕೇಳಿ ಬಂದಿವೆ. ಏತನ್ಮಧ್ಯೆ ಹೆಸ್ಕಾಂ ಅಧಿಕಾರಿ ಸಾವು ಕೊಲೆಯೋ ಆತ್ಮಹತ್ಯೆಯೋ ಎಂಬುದು ಗೊತ್ತಾಗಬೇಕಿದ್ದು ಸರ್ಕಾರಿ ಜಾಗೆ ಉಳಿಸಲು ಮುಂದಾಗಿದ್ದಕ್ಕೆ ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲಾಯಿತೇ? ರಾಮ ಮಂದಿರದ ಕಟ್ಟೆ ಕಟ್ಟಿದ್ದರಿಂದಲೇ ನನಗೆ ಚಿತ್ರಹಿಂಸೆ ಕೊಟ್ಟಿದ್ದು ನರಳಿ ಸತ್ತಿದ್ದೇನೆ ಎಂದು ಸ್ನೇಹಿತರಿಗೆ, ಸಂಬಂಧಿಕರಿಗೆ ವಾಟ್ಸಾಪ್ ಮೆಸೆಜ್ ಮಾಡಿರುವುದು ಹಲವು ಚರ್ಚೆಗಳಿಗೆ ಇಂಬು ನೀಡಿದೆ. ಪೊಲೀಸರು ತನಿಖೆಯನ್ನು ನಡೆಸಿ ಸತ್ಯಾಂಶ ಬಿಚ್ಚಿಡುವ ಕೆಲಸ ಮಾಡಬೇಕಾಗಿದೆ.
ಪಿಎಸ್ಐ ತಿಪರೆಡ್ಡಿ ವಿರುದ್ಧ ನಡಹಳ್ಳಿ ವಾಗ್ದಾಳಿ
‘ಪಿಎಸ್ಐ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾನೆ’
ಮುದ್ದೇಬಿಹಾಳ : ಇಲ್ಲಿನ ಪಿಎಸ್ಐ ಕಾನೂನು ರಕ್ಷಣೆಯನ್ನು ಮಾಡುವುದನ್ನು ಬಿಟ್ಟು ಉಳಿದ ಎಲ್ಲ ಅಕ್ರಮ ಕೆಲಸಗಳನ್ನು ಮಾಡುತ್ತಿದ್ದಾನೆ ಎಂದು ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಏಕವಚನದಲ್ಲಿ ಪಿಎಸ್ಐ ಸಂಜಯ ತಿಪರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಟೋಜಿಯಲ್ಲಿ ಹೆಸ್ಕಾಂ ಅಧಿಕಾರಿ ಆರೇಶಂಕರ ಅವರ ಸಾವಿನ ಕುರಿತು ಕುಟುಂಬದವರು ಘಟನೆ ನಡೆದ ಕೂಡಲೇ ಪೊಲೀಸ್ ಠಾಣೆಗೆ ಬಂದರೂ ಅವರಿಂದ ದೂರು ಪಡೆದುಕೊಳ್ಳದೇ ಮೇ.1 ಬೆಳಗಿನ ಜಾವ 4.50 ಕ್ಕೆ ದೂರು ಪಡೆದುಕೊಂಡಿದ್ದಾರೆ. ಇವರು ಪ್ರಕರಣದಲ್ಲಿ ಯಾವ ಸಾಕ್ಷಿಗಳನ್ನು ಮುಚ್ಚಿ ಹಾಕಲು ಮುಂದಾಗಿದ್ದರು ಎಂದು ನಡಹಳ್ಳಿ ಪ್ರಶ್ನಿಸಿದರು.
ಇಲ್ಲಿನ ಪಿಎಸ್ಐ, ಪೊಲೀಸರು ಯಾವುದು ಆತ್ಮಹತ್ಯೆ, ಯಾವುದು ಮರ್ಡರ್ ಎಂಬುದು ಗೊತ್ತಾಗದಂತೆ ಇದ್ದಾರೆ. ಮುದ್ನಾಳದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಘಟನೆ, ನಾಲತವಾಡದಲ್ಲಿ ಪರಿಶಿಷ್ಟ ಜಾತಿ ಬಾಲಕಿ ಮೇಲೆ ದೌರ್ಜನ್ಯ, ಕುಂಟೋಜಿಯಲ್ಲಿ ಹೆಸ್ಕಾಂ ಅಧಿಕಾರಿ ಸಾವಿನ ಘಟನೆ ನಡೆದಿದೆ. ಈ ಅಯೋಗ್ಯನನ್ನು ಎಷ್ಟು ದಿನ ಇಲ್ಲಿರಿಸಿಕೊಳ್ಳುತ್ತಾರೆ ಎಂದು ನಾನು ನೋಡುತ್ತೇನೆ ಎಂದ ನಡಹಳ್ಳಿ, ಯಾವುದೇ ಘಟನೆ ನಡೆದರೂ ಪೊಲೀಸರು ಸಿರಿಯಸ್ ಆಗಿ ತಗೆದುಕೊಳ್ಳುತ್ತಿಲ್ಲ. ತಾಲ್ಲೂಕಿನಲ್ಲಿ ಕಾನೂನು ಬಾಹಿರವಾಗಿ ನಡೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಿಎಸ್ಐ ಇಸ್ಪೀಟ್ ಕ್ಲಬ್, ಮಟ್ಕಾ ಆಡಿಸುತ್ತಿದ್ದಾನೆ. ಪ್ರತಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಕುಟುಂಬದವರೆ ಸಾವಿನಲ್ಲಿ ಸಂಶಯ ವ್ಯಕ್ತಪಡಿಸುತ್ತಿದ್ದರೂ ಅದಕ್ಕೆ ಪಿಎಸ್ಐ ಎಫ್.ಐ.ಆರ್ ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದಾರೆ. ಕೊಲೆಗಡುಕರಿಗೆ, ಕಳ್ಳತನ ಮಾಡುವರಿಗೆ, ಮಟ್ಕಾ ಆಡುವವರಿಗೆ, ಮರಳು ದಂಧೆ ಮಾಡುವವರಿಗೆ ಪಿಎಸ್ಐ ಬೆಂಬಲವಾಗಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಪಿಎಸ್ಐ ಅವರನ್ನು ವಾಪಸ್ ಕರೆಯಿಸಿಕೊಂಡು ಬೇರೆ ಅಧಿಕಾರಿಯನ್ನು ನಿಯೋಜಿಸಬೇಕು. ಇವರ ಇತಿಹಾಸವನ್ನು ತನಿಖೆ ಮಾಡಬೇಕು. ಸ್ಥಳೀಯ ಶಾಸಕರು ಇಂತಹ ಅಧಿಕಾರಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ದೂರಿದರು.