ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪರೀಕ್ಷೆ-1ರಲ್ಲಿ ಕನ್ನಡ ಮಾಧ್ಯಮದಲ್ಲಿ 623 ಅಂಕ ಪಡೆದಿರುವ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ಆಸಂಗಿ ಅವಳ ಪಿಯುಸಿ ಎರಡು ವರ್ಷದ ಶಿಕ್ಷಣವನ್ನು ಸಂಸ್ಥೆಯಿಂದ ಉಚಿತವಾಗಿ ನೀಡಲಾಗುವುದು ಎಂದು ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆ ಚೇರಮನ್ ಬಿ.ಜಿ.ಮಠ ಹೇಳಿದರು.
ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಡಿ.ಕೆ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಕನ್ನಡ ಮಾಧ್ಯಮದಲ್ಲಿ ತಾಲ್ಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳೇ ಪಡೆದುಕೊಂಡಿರುವುದು ಖುಷಿ ತಂದಿದೆ. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಆದ್ಯತೆ ಮೇರೆಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದರು.
ವಿದ್ಯಾರ್ಥಿನಿ ಅಕ್ಷತಾ ಆಸಂಗಿ ಮಾತನಾಡಿ, ಹೆತ್ತವರ ಪ್ರೋತ್ಸಾಹ, ತಮ್ಮ ಕುಟುಂಬದ ಸದಸ್ಯರಂತೆ ಕಾಣುವ ಶಿಕ್ಷಣ ಸಂಸ್ಥೆಯವರ ಪ್ರೀತಿ, ಕಾಳಜಿ ಹಾಗೂ ಶಿಕ್ಷಕರ ಅಮೂಲ್ಯ ಮಾರ್ಗದರ್ಶನದಿಂದ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಎಸ್.ಎಸ್.ಎಲ್.ಸಿ ಟಾಪರ್ ಹೇಳಿದರು.
ವಿದ್ಯಾರ್ಥಿನಿಯ ತಂದೆ ಜಗದೀಶ ಆಸಂಗಿ, ತಾಯಿ ಹೇಮಾ ಆಸಂಗಿ, ಮುಖ್ಯ ಶಿಕ್ಷಕ ಹೀರೂ ನಾಯಕ ಮಾತನಾಡಿದರು. ಸಂಸ್ಥೆಯ ಸದಸ್ಯ ಲಾಲಸಾ ನದಾಫ, ಶಿಕ್ಷಕರು, ಸಿಬ್ಬಂದಿ ಇದ್ದರು.
ಕಣ್ಣೀರು ಹಾಕಿದ ತಾಯಿ:
ತಮ್ಮ ಮಗಳ ಸಾಧನೆ ಕುರಿತು ಅಕ್ಷತಾ ಆಸಂಗಿ ಅವರ ತಾಯಿ ಮಾತನಾಡುವಾಗ ತಮ್ಮನ್ನು ಅಗಲಿದ್ದ ಪುತ್ರನನ್ನು ನೆನೆಸಿಕೊಂಡು ಗದ್ಗದಿತರಾದರು. ಮಗ ಇಲ್ಲ ಎಂಬ ನೋವನ್ನು ಮಗಳು ತನ್ನ ಸಾಧನೆಯ ಮೂಲಕ ಮರೆಸಿದ್ದಾಳೆ ಎಂದು ಹೇಳಿ ಕಣ್ಣೀರಾದರು.