ಪಹಲ್ಗಾಮ್ ದಾಳಿಗೆ ತಕ್ಕ ಪ್ರತೀಕಾರವನ್ನು ಭಾರತ ಪಡೆಯಲೇ ಬೇಕು
ಹುಬ್ಬಳ್ಳಿ, ಮೇ 1: ಪಹಲ್ಗಾಮ್ ದಾಳಿಯಲ್ಲಿ ನಮ್ಮ ದೇಶದ ಜನರು ಪ್ರಾಣ ಕಳೆದುಕೊಂಡರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಿರಿ. ಪಾಕಿಸ್ತಾನದ ಮನೆಮನೆಗೆ ನುಗ್ಗಿ ಹೊಡೆಯಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗುಡುಗಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ವತಿಯಿಂದ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಬುದ್ಧಿಕಲಿಸಬೇಕು ಎಂದು ಹೇಳಿದರು.
ಪಹಲ್ಗಾಮ್ ಘಟನೆಗೆ ರಾಹುಲ್ ಗಾಂಧಿ ಅವರು ಮೋದಿಜಿ ಅವರು ಕೈಗೊಳ್ಳುವ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಡೀ ದೇಶದ ನೂರನಲವತ್ತು ಕೋಟಿ ಜನರು ಮೋದಿ ಅವರ ಜೊತೆಗಿದೆ. ದಯಮಾಡಿ ತಾವು ಪಾಕಿಸ್ತಾನದ ಒಳಗಡೆ ನುಗ್ಗಿ ಆತಂಕವಾದವನ್ನು ಬೆಂಬಲಿಸುವ ಆ ದೇಶಕ್ಕೆ ಬುದ್ಧಿ ಕಲಿಸಿ ಎಂದು ಹೇಳಿದರು.
ಭಾರತದ ಮೇಲೆ ದಾಳಿ ಮಾಡಿರುವ ಪಾಕಿಸ್ತಾನಕ್ಕೆ ದಾಳಿ ಮಾಡಿ. ನಮ್ಮ ದೇಶದಲ್ಲಿ ಭಯೋತ್ಪಾದನಾ ಕೃತ್ಯ ಮಾಡಿರುವ ಅವರಿಗೆ ತಕ್ಕ ಉತ್ತರ ನೀಡಬೇಕು. ಪಹಲ್ಗಾಮ್ ನಲ್ಲಿ ನಮ್ಮ ಜನರನ್ನು ಕೊಂದಿದ್ದಾರೆ. ಅವರ ಪರವಾಗಿ ನಮ್ಮ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು, ಡಿ ಕೆ ಶಿವಕುಮಾರ್ ಅವರು ಸೇರಿದಂತೆ ನಾವೆಲ್ಲರೂ ಮೋದಿಜಿ ಅವರಿಗೆ ಬೆಂಬಲ ನೀಡಿದ್ದೇವೆ. ಈ ದೇಶದ ಸಮಸ್ತ ಭಾರತೀಯರು ನಿಮ್ಮ ಜೊತೆ ಇದ್ದೇವೆ ಎಂದರು.