ಮುದ್ದೇಬಿಹಾಳ : ಸಿಇಟಿ ಪರೀಕ್ಷೆ ಬರೆಯುವುದಕ್ಕೆ ತೆರಳಿದ್ದ ಜನಿವಾರ ಸಮಾಜದವರೊಂದಿಗೆ ಅನುಚಿತವಾಗಿ ನಡೆದುಕೊಂಡ ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಪರಮೇಶ್ವರ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನಿವಾರ ವಿಪ್ರ ಸಮಾಜವೂ ಸೇರಿ ಹಲವು ಸಮಾಜದವರ ಪ್ರಾತಿನಿಧಿಕ ಸಂಕೇತವಾಗಿದ್ದು ಅದಕ್ಕೆ ಪವಿತ್ರ ಭಾವನೆಯಿಂದ ಕಾಣಲಾಗುತ್ತಿದೆ. ಆದರೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತಗೆಯಿಸಿರುವ ಕ್ರಮ ತೀವ್ರ ಖಂಡನೀಯವಾಗಿದ್ದು ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವ ಬೀದರ್, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಹಿಂದೂ ಧರ್ಮೀಯರ ಆಚರಣೆಗಳು, ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಅವಮಾನಕರ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದ್ದು ಅದನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಹಿಂದೂಗಳೇನು ಭಯೋತ್ಪಾದಕರೇ ಎಂದು ಖಾರವಾಗಿಅಂತಹ ಘಟನೆಗಳಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸೈನಿಕ ಎಸ್. ಆರ್. ಕುಲಕರ್ಣಿ ಮಾತನಾಡಿ, ಜನಿವಾರವನ್ನು ತಗೆದಿರುವ ಉದ್ದೇಶವನ್ನು ವಿಚಾರಿಸಿದಾಗ ಅದರಿಂದ ಪರೀಕ್ಷೆಯಲ್ಲಿ ನೇಣು ಹಾಕಿಕೊಂಡರೆ ಎಂದು ಅಪಹಾಸ್ಯ ಮಾಡುವಂತಹ ದಾಷ್ಟತ್ಯೆ ಅಲ್ಲಿನ ಸಿಬ್ಬಂದಿ ತೋರಿದ್ದು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಬಿ. ಪಿ. ಕುಲಕರ್ಣಿ, ವಾಸುದೇವ ಶಾಸ್ತ್ರಿ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಆನಂದ ತುಪ್ಪದ, ಜನಿವಾರ ಸಮಾಜ ಪ್ರತಿನಿಧಿಸುವ 18 ಸಮಾಜಗಳ ಪ್ರತಿನಿಧಿಗಳು ಇದ್ದರು.