ಕುಳಗೇರಿ: ಗೊಲಕೊಪ್ಪ, ಬಿರನೂರು, ತಳಕವಾಡ, ಆಲೂರು ಎಸ್. ಕೆ, ಹಾಗನೂರು, ತರಲಕೊಪ್ಪ ಗ್ರಾಮಗಳಿಗೆ ಜನವರಿ ತಿಂಗಳಿನಿಂದ ಸರಿಯಾದ ಸಮಯದಲ್ಲಿ ವಿದ್ಯುತ್ ನೀಡದೆ ಸತಾಯಿಸುತ್ತಿರುವ ಕುಳಗೇರಿ ಕೆಇಬಿ ಘಟಕದ ಮುಂದೆ ಇಂದು ರೈತರು ಪ್ರತಿಭಟನೆ ಮಾಡಿದ್ದಾರೆ. ಕೆಇಬಿ ಮುಂದೆ ರೈತರು ಕಟ್ಟಿಗೆಗೆ ಬೆಂಕಿ ಹಾಕುವ ಮೂಲಕ ಪ್ರತಿಭಟಿಸಿ, ಸರಿಯಾಗಿ ವಿದ್ಯುತ್ ನೀಡದಿದ್ದರೆ ಓರ್ವ ರೈತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ರೈತ ಕಾಮಣ್ಣ ಧರಿಯಪ್ಪ ಹೆಬ್ಬಳಿ ಎಂಬ ರೈತನೋರ್ವ, ಇನ್ನಮುಂದೆ ತಮ್ಮ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಘಟಪ್ರಭಾ ನದಿ ತೀರದಲ್ಲಿರುವ ಗ್ರಾಮಗಳಿಗೆ ವಿದ್ಯುತ್ ಸಮಸ್ಯೆಯಿಂದಾಗಿ ದಿನನಿತ್ಯ ಬಳಕೆಗೆ ನೀರಿನ ಅಭಾವ ಉಂಟಾಗಿದೆ. ಜನಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಬೆಳೆಗಳಿಗೆ ನೀರು ಉಣಿಸಲು ಆಗುತ್ತಿಲ್ಲ ಎಂದು ರೈತ ಯಲ್ಲಪ್ಪಗೌಡ ಸಿದ್ದನಗೌಡ ದೇಸಾಯಿಗೌಡ್ರ ನೋವು ತೋಡಿಕೊಂಡರು.
ಸರಿಯಾದ ಸಮಯದಲ್ಲಿ ವಿದ್ಯುತ್ ನೀಡದಿರುವುದರಿಂದ ಸಣ್ಣಮಕ್ಕಳಿಗೆ ರಾತ್ರಿ ಸಮಯದಲ್ಲಿ ಸಮಸ್ಯೆಯಾಗುತ್ತಿದೆ. ಬೇಸಿಗೆ ಸಮಯದಲ್ಲಿ ವಯಸ್ಕರಿಗೂ ತೊಂದರೆ ಆಗುತ್ತಿದೆ. ಆದಕಾರಣ, ನಮ್ಮ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ನೀಡಿ, ನಮ್ಮ ಗ್ರಾಮದ ಲೈನ್ ಮನ್ ಯಾರು ಅವರ ನಂಬರ್ ಹಾಗೂ ಮಾಹಿತಿ ಕೊಡಿ ಎಂದು ರೈತ ಸಂಗನಗೌಡ ಮರಿತಮನಗೌಡ ಶಿವನಗೌಡ್ರ ತಮ್ಮ ಆಕ್ರೋಶವನ್ನು ಹೊರಹಾಕಿದರು.
ವಿದ್ಯುತ್ ಸಮಸ್ಯೆಯಾಗದಂತೆ, ಇನ್ನಮುಂದೆ ಸರಿಯಾದ ಸಮಯದಲ್ಲಿ ವಿದ್ಯುತ್ ನೀಡಲಾಗುವುದು ಎಂದು ಬಾದಾಮಿ ಕೆಇಬಿ ಅಧಿಕಾರಿ ಭರವಸೆ ನೀಡಿದರು.