ಮುದ್ದೇಬಿಹಾಳ : ಪ್ರೀತಿ, ಸೇವೆ, ತ್ಯಾಗ,ಮಮತೆ ಮುಂತಾದ ಮಾನವೀಯ ಗುಣಗಳನ್ನು ಒಳಗೊಂಡಿರುವ ಪೋಲೇಶಿ ಶಿಕ್ಷಕರು ಬದುಕಿನುದ್ದಕ್ಕೂ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಮೂಲಕ ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲ್ಲೂಕು ನೆರಬೆಂಚಿಯ ಎಚ್ಚರೇಶ್ವರ ದೇವಸ್ಥಾನದಲ್ಲಿ ನಿವೃತ್ತ ಶಿಕ್ಷಕ ನಾಗಪ್ಪ ಪೊಲೇಶ ಅವರ ಶಿಕ್ಷಣ ಶಿಲ್ಪಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಶಿಕ್ಷಣ ಶಿಲ್ಪಿ ಅಭಿನಂದನಾ ಗ್ರಂಥ ಸಂಶೋಧಕರಿಗೆ ಆಕರ ಗ್ರಂಥವಾಗಿದೆ. ಆದರ್ಶ ಶಿಕ್ಷಕರಾದ ನಾಗಪ್ಪ ಪೋಲೇಶಿ ಶಿಕ್ಷಕರ ಬದುಕು ಯುವ ಜನಾಂಗಕ್ಕೆ ಮಾದರಿಯಾದದು ಎಂದು ಹೇಳಿದರು.
ಮುದ್ದೇಬಿಹಾಳ ಎಸ್.ಜಿ.ವ್ಹಿ.ಸಿ ವಿದ್ಯಾ ಪ್ರಸಾರಕ ವಿಶ್ವಸ್ಥ ನಿಧಿಯ ಕಾರ್ಯದರ್ಶಿ ಅಶೋಕ ತಡಸದ ಕಾರ್ಯಕ್ರಮ ಉದ್ಘಾಟಿಸಿ, ಜಗತ್ತಿನಲ್ಲಿ ಶಿಕ್ಷಕರಿಗೆ ಕೊಡುವ ಗೌರವ ಅಪಾರವಾದದ್ದು, ಇಂಥವರ ಬದುಕಿನ ಬಗ್ಗೆ ಗ್ರಂಥ ಮಾಡಿ ಸಾಹಿತ್ಯ ಕ್ಷೇತ್ರಕ್ಕೆ ಕೊಡಮಾಡಿದ ಪ್ರಕಾಶ ನರಗುಂದ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಧಾರವಾಡದ ಸಾಹಿತಿ ಸಂಗಮನಾಥ ಲೋಕಾಪುರ ಮಾತನಾಡಿ, ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಹಲವಾರು ಮಹನೀಯರ ಕೊಡುಗೆ ಇದೆ. ಬದುಕಿನುದ್ದಕ್ಕೂ ಹಲವಾರು ಕಷ್ಟಗಳನ್ನು ಅನುಭವಿಸಿ ವಿದ್ಯಾರ್ಥಿಗಳಿಗೆ ನೈತಿಕತೆಯ ಬೋಧನೆ ಮಾಡುವುದರ ಮೂಲಕ ವಿದ್ಯಾರ್ಥಿಗಳನ್ನು ದೇಶದ ಸತ್ಪ್ರಜೆಯನ್ನಾಗಿ ರೂಪಿಸಿದ್ದಾರೆ ಎಂದರು.
ಗ್ರಂಥದ ಸಂಪಾದಕರಾದ ಎಂ.ಜಿ.ವಿ.ಸಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರಕಾಶ ನರಗುಂದ ಶಿಕ್ಷಣ ಶಿಲ್ಪಿ ಕೃತಿಯ ಬಗ್ಗೆ ವಿವರಿಸಿದರು. ಇಟಗಿ ಗುರುಶಾಂತವೀರ ಶಿವಾಚಾರ್ಯರು, ತಾಲ್ಲೂಕು ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರ ಹಿರೇಗೌಡರ, ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಹಾಲಗಂಗಾಧರಮಠ, ಆಲೂರಿನ ಗುರುಲಿಂಗಪ್ಪಗೌಡ ಹಿರೇಗೌಡರ, ಪ್ರೊ. ಎಸ್. ಎಸ್. ಹೂಗಾರ, ನಿವೃತ್ತ ಶಿಕ್ಷಕ ನಾಗಪ್ಪ ಪೊಲೇಶಿ, ಎಂ. ಜಿ. ವಿ. ಸಿ ಕಾಲೇಜಿನ ಪ್ರಾಚಾರ್ಯ ಎಸ್. ಎನ್. ಪೊಲೇಶಿ, ನಾಲತವಾಡದ ನಿವೃತ್ತ ಪ್ರಾಚಾರ್ಯ ಎಸ್. ಎನ್. ಕಂಗಳ, ಪರಶುರಾಮ ಪವಾರ, ಬಿ. ಎ. ಗೂಳಿ ಉಪಸ್ಥಿತರಿದ್ದರು.