
ಮುದ್ದೇಬಿಹಾಳ : ಬಿಜೆಪಿಯಿಂದ ಶಾಸಕ ಯತ್ನಾಳರನ್ನು ಉಚ್ಚಾಟಿಸಿರುವ ಕ್ರಮವನ್ನು ಖಂಡಿಸಿ ಕೆಲವಡೆ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ ಅವರ ಹೆಸರಿಗೆ ಕಳಂಕ ತರಲು ಯತ್ನಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದರು.

ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಯತ್ನಾಳರ ಪರವಾಗಿ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದರ ನೆಪದಲ್ಲಿ ನಡಹಳ್ಳಿಯವರ ಹೆಸರನ್ನು ಮಧ್ಯೆ ಎಳೆದು ತಂದು ಅವಾಚ್ಯವಾಗಿ ಮಾತನಾಡುವುದು, ಬಿಜೆಪಿ ರಾಜ್ಯ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ ಹಾಗೂ ನಡಹಳ್ಳಿಯವರ ಚಿತ್ರಗಳಿಗೆ ಅಸಭ್ಯ ರೀತಿಯಲ್ಲಿ ವ್ಯಕ್ತಪಡಿಸುವ ಮೂಲಕ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಇದನ್ನು ಖಂಡಿಸುವುದಾಗಿ ಹೇಳಿದರು.
ಬಿಜೆಪಿ ಮುಖಂಡ ಸಿದ್ಧರಾಜ ಹೊಳಿ ಮಾತನಾಡಿ, ಈಚೇಗೆ ಮುದ್ದೇಬಿಹಾಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವವರಲ್ಲಿ ಕಾಂಗ್ರೆಸ್ ಮುಖಂಡರೇ ಹೆಚ್ಚಿದ್ದು ಬಿಜೆಪಿಗೆ ಯತ್ನಾಳರನ್ನು ಮರು ಸೇರ್ಪಡೆ ಮಾಡಿಕೊಳ್ಳಿ ಎನ್ನುವ ಬದಲು ಕಾಂಗ್ರೆಸ್ಗೆ ಅವರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಪ್ರತಿಭಟನೆ ನಡೆಸಿ ಎಂದು ಪಂಚಮಸಾಲಿ ಸಮಾಜದ ಕಾಂಗ್ರೆಸ್ ಮುಖಂಡರಿಗೆ ಸಲಹೆ ಮಾಡಿದರು.
ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಮಾತನಾಡಿ, ಪ್ರತಿಭಟನೆಯ ನೆಪದಲ್ಲಿ ಯಾವುದೇ ನಾಯಕರ ಬ್ಯಾನರ, ಭಾವಚಿತ್ರಗಳಿಗೆ ಅವಮಾನಕರ ರೀತಿಯಲ್ಲಿ ಚಿತ್ರಿಸುವುದು, ಸುಡುವುದು, ನಡೆದುಕೊಳ್ಳುವುದಕ್ಕೆ ಕಾನೂನು ರೀತಿಯಲ್ಲಿ ಅಪರಾಧವಿದ್ದು ಬಿಜೆಪಿ ಕಾನೂನು ಘಟಕ ಜಿಲ್ಲೆಯಲ್ಲಿ ನಡೆದಿರುವ ಪ್ರತಿಭಟನೆಗಳ ಮೇಲೆ ನಿಗಾ ಇರಿಸಿದೆ. ಬಿಜೆಪಿ ನಾಯಕರ ಚಿತ್ರಗಳಿಗೆ ಅವಮಾನಕರವಾಗಿ ಪ್ರದರ್ಶಿಸಿದ್ದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಬೆಂಗಳೂರು ಕೋರ್ಟ್ನಲ್ಲಿ ಕೇಸು ವಿಚಾರಣೆ ನಡೆಯುತ್ತದೆ. ಇಂತಹ ಘಟನೆಗಳಿಗೆ ಯತ್ನಾಳರ ಅಭಿಮಾನಿಗಳು, ಪ್ರತಿಭಟನೆ ನಡೆಸುವವವರು ಆಸ್ಪದ ನೀಡಬಾರದು ಕಿವಿಮಾತು ಹೇಳಿದರು.
ಮುಖಂಡ ಹರೀಶ ನಾಟೀಕಾರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ಅಧ್ಯಕ್ಷ ಗಿರೀಶಗೌಡ ಪಾಟೀಲ್, ಪ್ರೇಮಸಿಂಗ ಚವ್ಹಾಣ, ಪರಶುರಾಮ ನಾಲತವಾಡ, ಗೌರಮ್ಮ ಹುನಗುಂದ,ಲಕ್ಷ್ಮಣ ಬಿಜ್ಜೂರ, ಶಂಕರಗೌಡ ಶಿವಣಗಿ, ಸಂಜೀವ ಬಾಗೇವಾಡಿ, ಸಿದ್ದು ಹಿರೇಮಠ, ನಿಖಿಲ್ ಮಲಗಲದಿನ್ನಿ, ಗುರುಪಾದ ವಡ್ಡರ ಮೊದಲಾದವರು ಇದ್ದರು.
2013ರಲ್ಲಿ ನಿಮ್ಮದೇ ಸಮಾಜದ ನಾಯಕಿ ವಿಮಲಾಬಾಯಿ ದೇಶಮುಖ ಅವರಿಗೆ ಬಿಜೆಪಿ ಟಿಕೇಟ್ ಕೊಡದೇ ಅನ್ಯಾಯ ಮಾಡಿದಾಗ ಯಾಕೆ ಪ್ರತಿಭಟನೆ ನಡೆಸಲಿಲ್ಲ. ಈಚೇಗೆ ಬೆಳಗಾವಿಯಲ್ಲಿ ನಿಮ್ಮ ಸಮಾಜದ ಸ್ವಾಮೀಜಿಗಳು, ಹೋರಾಟಗಾರರು, ಸಮಾಜದವರ ಮೇಲೆ ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿದ್ದಾಗ ಯಾಕೆ ಪ್ರತಿಭಟನೆ ನಡೆಸಲಿಲ್ಲ. ಯತ್ನಾಳ ಅವರು ಈ ಹಿಂದೆ ದಲಿತ ಮುಖಂಡರನ್ನು ಪೇಮೆಂಟ್ ಗಿರಾಕಿಗಳು ಎಂದು ಜರಿದಿದ್ದರು. ಅವರು ಮುಂದೊಂದು ದಿನ ಸಿಎಂ ಆಗುತ್ತಾರೆ ಎಂದು ಕನಸು ಕಂಡಿದ್ದೇವು. ಆದರೆ ಅವರು ತಮ್ಮ ಮಾತುಗಳಿಂದಲೇ ಎಲ್ಲವನ್ನೂ ಹಾಳು ಮಾಡಿಕೊಂಡಿದ್ದಾರೆ. ಪಕ್ಷದ ವಿಚಾರವನ್ನು ಸಮಾಜಕ್ಕೆ ಥಳಕು ಹಾಕುವುದನ್ನು ಕೆಲವು ಮುಖಂಡರು ನಿಲ್ಲಿಸಬೇಕು. ತಾಳಿಕೋಟೆಯಲ್ಲಿ ಅಭಿಮಾನ ಯಾತ್ರೆ ನಡೆಸಿ ಬಿಜೆಪಿ ನಾಯಕರ ಚಿತ್ರಗಳಿಗೆ ಕ್ಷೀರಾಭಿಷೇಕ ಮಾಡುತ್ತೇವೆ.