
ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು.

ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು ಶಿಕ್ಷಣ ಸಂಸ್ಥೆ ಕಟ್ಟಿದ್ದು ವಿದ್ಯಾರ್ಥಿಗಳ ಏಳ್ಗೆಗೆ ಹಗಲಿರಳು ನಮ್ಮ ಸಂಸ್ಥೆ ಶ್ರಮಿಸುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಹಳೇಮನಿ ಮಾತನಾಡಿ, ತಾಲ್ಲೂಕಿನಲ್ಲಿ ಖ್ಯಾತಿ ಪಡೆದಿರುವ ನಾಗರಬೆಟ್ಟ, ಮುದ್ದೇಬಿಹಾಳದ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿ ಈ ವರ್ಷದಿಂದ ಹುಲ್ಲೂರಿನ ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವುದು ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಹಾಗೂ ಉಚಿತ ಶಿಕ್ಷಣಕ್ಕೆ ವೇದಿಕೆ ಕಲ್ಪಿಸಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಎಂ.ಜಿ.ವಿ.ಸಿ ಬಿಎಡ್ ಕಾಲೇಜಿನ ಉಪನ್ಯಾಸಕ ಬಸವರಾಜ ಬೋಳಿಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಪಾಲಕರು ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಶಿಕ್ಷಣ ನೀಡುವ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಮಕ್ಕಳಿಗೆ ಗುಣಾತ್ಮಕ ಕಲಿಕೆ ಸಾಧ್ಯವಾಗುತ್ತದೆ ಎಂದರು.
ವೇ.ಮಹಾಂತೇಶ ಹಿರೇಮಠ,ಮಹಾದೇವಪ್ಪ ಹಳ್ಳದ, ಮಲ್ಲಯ್ಯ ಹಿರೇಮಠ, ನೀಲಪ್ಪ ಹಳೇಮನಿ, ಪ್ರಕಾಶ ಮಂಕಣಿ, ಪ್ರಶಾಂತ ಕಾಳೆ, ವೀರೇಶ ಗುರುಮಠ, ಬಸನಗೌಡ ಪಾಟೀಲ್, ಧರ್ಮೇಶ ತುಮರಮಟ್ಟಿ, ಮಹಾಂತೇಶ ಮನಹಳ್ಳಿ, ಅಶೋಕ ಭಜಂತ್ರಿ, ಹಣಮಂತಗೌಡ ಪಾಟೀಲ, ಬೆಳ್ಳೆಪ್ಪ ಮೇಟಿ, ಮುಖ್ಯಶಿಕ್ಷಕಿ ರೇಖಾವತಿ ಎಂ.ಎಸ್. ಇದ್ದರು. ಜಿ.ಎಂ.ಪತ್ತಾರ ಪ್ರಾರ್ಥಿಸಿದರು.
4ನೇ ತರಗತಿಯಲ್ಲಿ ಉಚಿತ ಶಿಕ್ಷಣಕ್ಕೆ ನಾಗೇಶ ರಾಠೋಡ, ಲಕ್ಷ್ಮಿ ಪಾಟೀಲ, ಮಹೇಶ ಹಳಬರ, ಬಸವರಾಜ ಗುಡದಿನ್ನಿ, ಬಸನಗೌಡ ಬಿರಾದಾರ, 7ನೇ ತರಗತಿಯಲ್ಲಿ ಉಚಿತ ಶಿಕ್ಷಣಕ್ಕೆ ಸ್ಪೂರ್ತಿ ಮೆಣಸಿನಕಾಯಿ, ಅಮೋಘ ಮನಹಳ್ಳಿ, ಭಾವನಾ ಪಡಸಲಗಿ, ಸುಕನ್ಯಾ ಸಾತಿಹಾಳ, ಭಾಗ್ಯಶ್ರೀ ರಡ್ಡೇರ ಅವರು ಆಯ್ಕೆಯಾದರು.
4 ಮತ್ತು 7ನೆಯ ತರಗತಿಯ 10 ವಿದ್ಯಾರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿಯಲ್ಲಿ ಶಿಕ್ಷಣ ನೀಡುವುದಾಗಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಘೋಷಿಸಿದರು.