ಮುದ್ದೇಬಿಹಾಳ : ಮಕ್ಕಳಿಗೆ ಗುಣಮಟ್ಟವಾದದ್ದೆನ್ನೆಲ್ಲಾ ನಾವು ಕೊಡುತ್ತಿದ್ದೇವೆ. ಆದರೆ, ಆಹಾರ ಮಾತ್ರ ಕಲಬೆರಕೆ ಆಗಿದೆ. ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಗುಣಮಟ್ಟದ ಆಹಾರ ಕೊಡುವ ಕೆಲಸ ಆಗಬೇಕಿದೆ ಎಂದು ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ವಿದ್ಯಾಸ್ಪೂರ್ತಿ ಸ್ಕೂಲ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಎಲ್ಲರ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು ಎಂಬ ಆಸೆಯನ್ನು ಹೊಂದಿದ್ದಾರೆ. ಆದರೆ, ಒಬ್ಬ ಮಗುವು ನಾನು ದೇಶಕ್ಕೆ ಅನ್ನ ಹಾಕುವ ರೈತನಾಗುತ್ತೇನೆ ಎಂದು ಹೇಳುವುದಿಲ್ಲ. ಪಾಲಕರು ತಮ್ಮ ವಿಚಾರಗಳನ್ನು ಬದಲಿಸಿಕೊಳ್ಳಬೇಕು. ಮಕ್ಕಳಿಗೆ ಅವರ ಬಾಲ್ಯ ಅನುಭವಿಸಲು ಬಿಡಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಬಸಮ್ಮ ಸಿದರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿದ್ದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಕಾರ್ಯ ನಮ್ಮ ಸಂಸ್ಥೆಯಿಂದ ಮಾಡಲಾಗುತ್ತಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಸಿದರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ತರಬೇತಿ, ಶಿಕ್ಷಣ ಪಡೆದ ಎಂಟು ವಿದ್ಯಾರ್ಥಿಗಳು ನವೋದಯ, 41 ವಿದ್ಯಾರ್ಥಿಗಳು ಆದರ್ಶ, 52 ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಸಕ್ತ ವರ್ಷದಲ್ಲಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್. ಬಿ. ಚಲವಾದಿ, ಶಂಕರ ಡಮನಾಳ, ಎಂ.ಜಿ.ವಿ.ಸಿ ಕಾಲೇಜಿನ ಉಪನ್ಯಾಸಕ ವಿ. ವಿ. ಮಾಶೆಟ್ಟಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಮನಗೌಡ ಸಿದರೆಡ್ಡಿ, ಪತ್ರಕರ್ತ ಶಂಕರ ಹೆಬ್ಬಾಳ, ಗುಲಾಮಮೊಹ್ಮದ ದಫೇದಾರ ಇದ್ದರು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.