ಮುದ್ದೇಬಿಹಾಳ : ಮಾರಣಾಂತಿಕ ರಕ್ತ ಕ್ಯಾನ್ಸರ್ ಕಾಯಿಲೆಯಿಂದ 14ಲಕ್ಷ ರೂ.ವೆಚ್ಚ ಮಾಡಿದರೂ ಗುಣಮುಖವಾಗದ ಕಾಯಿಲೆ ನಿರಂತರವಾಗಿ ಯೋಗದ ಮೂಲಕ ಚೇತರಿಸಿಕೊಂಡು ಆರೋಗ್ಯವಾಗಿದ್ದು ಯೋಗಕ್ಕೆ ಬಹುದೊಡ್ಡ ಶಕ್ತಿ ಇದೆ ಎಂದು ಮಾದಿನಾಳ ಗ್ರಾಮದ ನಿವಾಸಿ, ಬ್ಲಡ್ ಕ್ಯಾನ್ಸರ್ನಿಂದ ಗುಣಮುಖವಾಗಿರುವ ಯಲ್ಲಮ್ಮ ಶಿರೋಳ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶನಿವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯೋಗ ಸಾಧನೆಯಿಂದ ಆಗಿರುವ ಪ್ರಯೋಜನವನ್ನು ಹೇಳಿದರು.
ಯೋಗ ಸ್ವಾತಂತ್ರ್ಯ ಯೋಗ ಸಮೀತಿ ಸಂಚಾಲಕಿ ಪ್ರೇಮಾ ಗುಡದಿನ್ನಿ ಮಾತನಾಡಿ, ನಮ್ಮ ಆಹಾರ ಕ್ರಮವೇ ನಮ್ಮ ಆರೋಗ್ಯ ವಿಷಮಗೊಳ್ಳಲು ಕಾರಣವಾಗಿದ್ದು ನಿತ್ಯವೂ ಮನುಷ್ಯನ ದೇಹಕ್ಕೆ 80ಕ್ಕೂ ಹೆಚ್ಚು ವಿಷಕಾರಿ ಅಂಶಗಳು ಆಹಾರದ ಮೂಲಕ ಸೇವಿಸುತ್ತಿದ್ದೇವೆ. ಕ್ಯಾನ್ಸರ್ ಒಂದೇ ಅಲ್ಲ ಎಲ್ಲ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಯೋಗಕ್ಕಿದೆ. ಅಡುಗೆ ಮನೆಯಿಂದ ಕುಕ್ಕರ್, ಮೈದಾ, ಸಕ್ಕರೆ, ಉಪ್ಪು ಅತಿಯಾದ ಬಳಕೆಯಿಂದ ದೂರವಿಟ್ಟು ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ ಆರೋಗ್ಯದಿಂದ ಇರುತ್ತೇವೆ ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಎಂ. ಬಿ. ನಾವದಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಪತ್ರಕರ್ತ ಶಂಕರ ಹೆಬ್ಬಾಳ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಕಾಂಗ್ರೆಸ್ ಮುಖಂಡೆ ಸರಸ್ವತಿ ಪೀರಾಪೂರ ಮಾತನಾಡಿದರು.
ಅಲ್ಲಲ್ಲಿ ಯೋಗ ದಿನಾಚರಣೆ : ಮುದ್ದೇಬಿಹಾಳ ತಾಲ್ಲೂಕಿನ ಹಲವು ಶಾಲೆ, ಕಾಲೇಜು ಸಂಘ ಸಂಸ್ಥೆಗಳಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಪಟ್ಟಣದ ಪೊಲೀಸ್ ಠಾಣೆ, ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್ನ್ಯಾಶನಲ್ ಸ್ಕೂಲ್, ವಿದ್ಯಾಸ್ಪೂರ್ತಿ ಇಂಟರನ್ಯಾಶನಲ್ ಸ್ಕೂಲ್, ಬಿದರಕುಂದಿಯ ಆರ್. ಎಂ. ಎಸ್. ಎ, ಪ್ರಾರ್ಥನಾ ವಿದ್ಯಾಮಂದಿರ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.