ಮುದ್ದೇಬಿಹಾಳ : ಹಂಡೇ ಹನುಮಪ್ಪ ನಾಯಕರ ಇತಿಹಾಸ ಈಗಾಗಲೇ ಆಂಧ್ರಪ್ರದೇಶದ ಸರ್ಕಾರ ತನ್ನ ಶಾಲೆಗಳಲ್ಲಿನ ಪಠ್ಯಪುಸ್ತಕದಲ್ಲಿ ಅಳವಡಿಸಿದೆ. ಕರ್ನಾಟಕ ಸರ್ಕಾರವೂ ಹಂಡೇ ಅರಸರ ಜೀವನ ಸಾಧನೆಯನ್ನು ತಿಳಿಸಲು ಪಠ್ಯದಲ್ಲಿ ಅವರ ಇತಿಹಾಸದ ಪಾಠ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಮಾಜದಿಂದ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಸ್. ಎಸ್. ಪಾಟೀಲ್ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ. ಎಲ್. ಬಿರಾದಾರ ಮಂಗಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಹಂಡೇವಜೀರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಕೂಡಲಸಂಗಮದಲ್ಲಿ ಜರುಗಿದ ರಾಜ್ಯಮಟ್ಟದ ಸಮಾವೇಶದ ಯಶಸ್ವಿಗೆ ಶ್ರಮಿಸಿದವರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ ಮಾತನಾಡಿ, ಕೂಡಲಸಂಗಮದಲ್ಲಿ ಫೆ.2 ರಂದು ನಡೆದ ಸಮಾಜದ ರಾಜ್ಯಮಟ್ಟದ ಸಮಾವೇಶ ಯಶಸ್ವಿಗೆ ತಾಲ್ಲೂಕಿನಿಂದ ಸಮಾಜದ ಬಾಂಧವರು 12 ಲಕ್ಷ ರೂ.ಗಳವರೆಗೆ ಉದಾರವಾದ ದೇಣಿಗೆ ನೀಡಿ ಸಹಕಾರ ಮಾಡಿದ್ದಾರೆ ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ. ಎಂ. ಬೆಳಗಲ್ ಮಾತನಾಡಿ, ಸಮಾಜದಲ್ಲಿರುವ ಬಡ ಮಕ್ಕಳ ಶಿಕ್ಷಣದ ವೆಚ್ಚಕ್ಕಾಗಿ ಸಮಾಜದ ಬಾಂಧವರು ಉಳಿತಾಯ ಮಾಡಿ ಅದನ್ನು ಅರ್ಹರಿಗೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು ಎಂದರು.
ಸಮಾಜದ ರಾಜ್ಯ ಉಪಾಧ್ಯಕ್ಷ ರಾಜಶೇಖರ ಮೇಗೇರಿ, ಸಮಾಜದ ತಾಲ್ಲೂಕು ಅಧ್ಯಕ್ಷ, ವಕೀಲರಾದ ಎಂ. ಬಿ. ಬಿರಾದಾರ, ಸಮಾಜದ ಜಿಲ್ಲಾಧ್ಯಕ್ಷ ಸಂಗಮೇಶ ಕರಭಂಟನಾಳ, ಎಸ್. ಎಸ್. ಭೂತಲ್ ಮಾತನಾಡಿದರು.
ಯುವ ಘಟಕದ ರಾಜ್ಯಾಧ್ಯಕ್ಷ ಸಂಗನಗೌಡ ಯಂಕಂಚಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭು ಬೆಳ್ಳಿ, ಗೌರವಾಧ್ಯಕ್ಷ ಕೆ. ಎನ್. ಗೌಡರ, ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ತಂಗಡಗಿ, ಮುಖಂಡರಾದ ಬಿ. ಎಲ್. ಬಿರಾದಾರ, ಹಣಮಗೌಡ ಪಾಟೀಲ, ಮಂಜುನಾಥ ಪಾಟೀಲ, ಎಸ್. ಬಿ. ಹಂಡರಗಲ್, ಹೇಮಾ ಬಿರಾದಾರ, ಸಂಗಮೇಶ ಶಿವಣಗಿ ಇದ್ದರು.
ಕಾರ್ಯಕ್ರಮದಲ್ಲಿ ಆಲಕೊಪ್ಪರದ ವಿದ್ಯಾರ್ಥಿನಿ ಗೀತಾ ಬಿರಾದಾರ ಎಸ್.ಎಸ್.ಎಲ್.ಸಿಯಲ್ಲಿ ಶೇ.96ರಷ್ಟು ಅಂಕ ಪಡೆದುಕೊಂಡ ಹಿನ್ನೆಲೆಯಲ್ಲಿ ಆಕೆಗೆ ಸಮಾಜದ ಬಾಂಧವರು ಶೈಕ್ಷಣಿಕ ವೆಚ್ಚಕ್ಕೆಂದು 16 ಸಾವಿರ ರೂ. ಆರ್ಥಿಕ ನೆರವು ನೀಡಿದರು.