ಮುದ್ದೇಬಿಹಾಳ : ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.26 ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದ್ದು ನಗರ,ಗ್ರಾಮೀಣ ಭಾಗದ ಐವರು ಪತ್ರಕರ್ತರಿಗೆ ಹಾಗೂ ಒಬ್ಬರನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಮುತ್ತು ವಡವಡಗಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಕಾನಿಪ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಜು.26ರಂದು ಬೆಳಿಗ್ಗೆ 9 ಗಂಟೆಗೆ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತಗಿರಿಯಲ್ಲಿರುವ ಅರಿಹಂತ ಚಾರಿಟೇಬಲ್ ಟ್ರಸ್ಟ್ನ ಕಾಲೇಜು ಆವರಣದಲ್ಲಿ ಸಮಾರಂಭ ಹಮ್ಮಿಕೊಳ್ಳಲು, ಪಿಯುಸಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಮೌಲ್ಯ, ಪತ್ರಕರ್ತರ ಕರ್ತವ್ಯ ಸೇರಿ ಹಲವು ವಿಷಯಗಳನ್ನು ತಿಳಿಸಿಕೊಡಲು ವಿಶೇಷ ಉಪನ್ಯಾಸ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ ಮಾತನಾಡಿ, ಕೆಯುಡಬ್ಲುಜೆ ವಿಜಯಪುರ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಸವನ ಬಾಗೇವಾಡಿಯ ಹಿರಿಯ ಪತ್ರಕರ್ತ ಪ್ರಕಾಶ ಬೆಣ್ಣೂರ ಅವರನ್ನು ಸನ್ಮಾನಿಸಲು ತೀರ್ಮಾನಿಸಿರುವ ಹಾಗೂ ಸರ್ವ ಸದಸ್ಯರು ಸ್ವ ಇಚ್ಚೆಯಿಂದ ಸಮಾರಂಭದ ಜವಾಬ್ಧಾರಿ ವಹಿಸಿಕೊಂಡು ಯಾರಿಂದಲೂ ಚಂದಾ ಎತ್ತದೆ ಸಮಾರಂಭವನ್ನು ಮಾದರಿಯಾಗಿಸಲು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.
ಸಂಘದ ತಾಲೂಕು ಉಪಾಧ್ಯಕ್ಷ ಸಿದ್ದು ಚಲವಾದಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್, ಸಂಘದ ಮಾಜಿ ಅಧ್ಯಕ್ಷರಾದ ಎಚ್.ಆರ್.ಬಾಗವಾನ, ಅಮೀನಸಾಬ ಮುಲ್ಲಾ, ಸದಸ್ಯರಾದ ನೂರೇನಬಿ ನದಾಫ, ಬಂದೇನವಾಜ್ ಕುಮಸಿ, ಬಸವರಾಜ ಕುಂಬಾರ, ಸಾಗರ ಉಕ್ಕಲಿ, ಪುಂಡಲೀಕ ಮುರಾಳ, ಮಕ್ಬುಲ್ ಬನ್ನೆಟ್ಟಿ, ಹಣಮಂತ ಬೀರಗೊಂಡ(ಢವಳಗಿ), ಮುತ್ತು ಬೀರಗೊಂಡ (ಢವಳಗಿ), ಗುರುರಾಜ ಪತ್ತಾರ(ಬಡಿಗೇರ), ಕೃಷ್ಣಾ ಕುಂಬಾರ, ಸೂರಜ್ ರಿಸಾಲ್ದಾರ್, ಈಶ್ವರ ಈಳಗೇರ(ರೂಢಗಿ), ನಾಗೇಂದ್ರ ಶಿವಸಿಂಪಿ ಇದ್ದರು.
ಆಯ್ಕೆಯಾದ ಪತ್ರಕರ್ತರು:
ಮುದ್ದೇಬಿಹಾಳ ತಾಲೂಕು ಮಟ್ಟದ ಉತ್ತಮ ಪತ್ರಕರ್ತ ವಾರ್ಷಿಕ ಪ್ರಶಸ್ತಿಗೆ ಯುವ ಪತ್ರಕರ್ತರಾದ ಹಣಮಂತ ಬೀರಗೊಂಡ (ಢವಳಗಿ), ರಿಯಾಜ್ ಮುಲ್ಲಾ, ಮುತ್ತು ಟಕ್ಕಳಕಿ, ಈಶ್ವರ ಈಳಗೇರ (ರೂಢಗಿ) ಮತ್ತು ಕೃಷ್ಣಾ ಕುಂಬಾರ ಹಾಗೂ ಸಂಘದ ಹಿರಿಯ ಸದಸ್ಯ ನೂರೇನಬಿ ನದಾಫ ಅವರನ್ನು ಚೀಟಿ ಎತ್ತುವ ಮೂಲಕ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.