ಮುದ್ದೇಬಿಹಾಳ : ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದ ತಾಲ್ಲೂಕಿನ ಕುಂಟೋಜಿ ಶ್ರೀ ಬಸವೇಶ್ವರ ಹಾಗೂ ಶ್ರೀ ಸಂಗಮೇಶ್ವರ ದೇವಸ್ಥಾನದ ರಥೋತ್ಸವ ಸಾವಿರಾರು ಭಕ್ತಾದಿಗಳ ಜಯಘೋಷಗಳ ಮಧ್ಯೆ ಮಂಗಳವಾರ ಸಂಜೆ 6.35ಕ್ಕೆ ಜರುಗಿತು.
ತಾಲ್ಲೂಕಿನ ಆಲೂರು ಗ್ರಾಮದ ಭಕ್ತರಿಂದ ತೇರಿನ ಕಳಸ, ಗರಸಂಗಿಯಿಂದ ತೇರಿನ ಹಗ್ಗ, ಮುದ್ದೇಬಿಹಾಳ ಹಾಗೂ ಅಬ್ಬಿಹಾಳ ಭಕ್ತರಿಂದ ರುದ್ರಾಕ್ಷಿ ಹಾರಗಳು ಆಗಮಿಸಿದ ನಂತರ ಪಲ್ಲಕ್ಕಿಯೊಂದಿಗೆ ರಥದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಿಡಸೋಸಿ ಶಿವಲಿಂಗೇಶ್ವರ ಸಿದ್ಧಸಂಸ್ಥಾನಮಠದ ಪ್ರಭು ಸ್ವಾಮೀಜಿ, ಕುಂಟೋಜಿ ಚೆನ್ನವೀರ ಶಿವಾಚಾರ್ಯರು, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಜಾತ್ರಾ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಹಾಗೂ ಇತರರು ನೂತನ ಪ್ರಥಮ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪ್ರಥಮ ಬಾರಿಗೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ತರುಣರು ತಮ್ಮೂರಿನ ತೇರು ಪಾದಗಟ್ಟಿ ಮುಟ್ಟುತ್ತಲೇ ಜಯಘೋಷಗಳೊಂದಿಗೆ ಕುಣಿದು ಸಂಭ್ರಮಿಸಿದರು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಮತ್ತಿತರ ಮಂಗಲಕಾರಿ ವಸ್ತುಗಳು ಅರ್ಪಿಸಿ ನಮಿಸಿದರು. ಸಿಪಿಐ ಮೊಹ್ಮದ ಫಸಿವುದ್ದೀನ, ಪಿಎಸ್ಐ ಸಂಜಯ ತಿಪರೆಡ್ಡಿ ಹಾಗೂ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.
ವಿಶೇಷವೆಂದರೆ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆರಾಯ ರಥೋತ್ಸವದ ಸಮಯದಲ್ಲಿ ಎರಡ್ಮೂರು ತಾಸು ಬಿಡುವು ಕೊಟ್ಟಿದ್ದು ವಿಶೇಷವಾಗಿತ್ತು. ರಥೋತ್ಸವದ ಸಂದರ್ಭದಲ್ಲಿ ಪ್ರಮುಖರಾದ ಸಂಗನಬಸಯ್ಯ ಹಿರೇಮಠ, ಸಿದ್ದಲಿಂಗಯ್ಯ ಕಲ್ಯಾಣಮಠ, ಶಿವಣ್ಣ ಚಿನಿವಾರ,ಅಮರೇಶ ಗೂಳಿ, ಶರಣು ಹಿರೇಮಠ, ಎಂ.ಎಸ್.ಕನ್ನೂರ, ಸಂಗಮ್ಮ ಉಣ್ಣಿಬಾವಿ, ಸುರೇಶ ಅಳಗುಂಡಗಿ, ಮಲ್ಲಪ್ಪ ಬಡಿಗೇರ, ಹಣಮಪ್ಪ ಕಾರಕೂರ, ರಾಘವೇಂದ್ರ ಬಡಿಗೇರ, ಮಹೇಶ ಅಂಬಿಗೇರ ಭಾಗವಹಿಸಿದ್ದರು.