ಮುದ್ದೇಬಿಹಾಳ : ಬಣಜಿಗ ಸಮಾಜದವರು ನಿಗರ್ವಿಗಳಾಗಿದ್ದು ಎಲ್ಲ ಸಮಾಜದವರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ.ಅಮೇರಿಕಾದ ಡೆಟ್ರಾಯ್ ನಗರದಲ್ಲೂ ಬಣಜಿಗ ಸಮಾಜದ ಬಾಂಧವರು ಬಸವಾದಿ ಶರಣ ಸಂದೇಶಗಳನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ,ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರ ಜಾತಿ ಗಣತಿಯ ಹೆಸರಿನಲ್ಲಿ ಸಮಾಜದಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.ಕೇವಲ ಶೇ.6ರಷ್ಟು ಮಾತ್ರ ಸಮೀಕ್ಷೆ ಮಾಡಿದೆ.ವಾರದಲ್ಲಿ ಶೇ.100ರಷ್ಟು ತಲುಪುವುದು ಅಸಾಧ್ಯದ ಸಂಗತಿ.ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.ಆದರೆ ಒಳಪಂಗಡಗಳನ್ನು ಒಡೆಯುವ ಕುತಂತ್ರಕ್ಕೆ ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.
ವೀರಶೈವ ಒಂದು ಕಡೆ ಲಿಂಗಾಯತ ಎಂದು ಒಂದು ಕಡೆ ಹೋದರೆ ಯಾವ ಸೌಲಭ್ಯ ಸಿಗುವುದಿಲ್ಲ.ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಹೇಳುತ್ತೇನೆ.ದೇಶದಲ್ಲಿ ಅಧಿಕೃತವಾಗಿ ವೀರಶೈವ ಲಿಂಗಾಯತ ಘೋಷಣೆ ಆಗಬೇಕಾದರೆ ಇನ್ನೂ ಕೆಲಸ ನಡೆಯಬೇಕು.ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ, ಉಪಜಾತಿ ಕಾಲಂನಲ್ಲಿ ಬಣಜಿಗ ಎಂದು ಬರೆಯಿಸಿ ಎಂದು ಹೇಳಿದರು.
ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಬಣಜಿಗ ಸಮಾಜದವರು ದಾನ,ಧರ್ಮ,ದೈವೀಭಕ್ತಿ,ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವರು.ಎಲ್ಲರನ್ನೂ ಒಪ್ಪಿಕೊಳ್ಳುವ ಸಮಾಜದವರು.ಯಡಿಯೂರಪ್ಪನವರು ಸಿಎಂ ಇದ್ದಾಗ ಮುದ್ದೇಬಿಹಾಳಕ್ಕೆ ಕುಡಿವ ನೀರಿನ ಯೋಜನೆಗೆ 9.50 ಕೋಟಿ ರೂ.ಪರಿಸ್ಕೃತ ಪ್ರಸ್ತಾವನೆಗೆ ಅನುಮೋದನೆ ಕೊಟ್ಟಿದ್ದರು.ಜಗದೀಶ ಶೆಟ್ಟರ ಅವರು ಸಿಎಂ ಇದ್ದ ಅವಧಿಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಹಣ ಕೊಟ್ಟಿದ್ದಾರೆ ಎಂದರು.
ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಹಿಂದೂಗಳನ್ನು ವಿಘಟಿಸುವ ಕೆಲಸವನ್ನು ನಮ್ಮವರೇ ಕೆಲವರು ಮಾಡುತ್ತಿದ್ದಾರೆ.ವೀರಶೈವ ಲಿಂಗಾಯತ ಎಂದು ಬರೆಯಿಸಿದರೆ ರಾಜ್ಯದ 162 ಕ್ಷೇತ್ರಗಳಲ್ಲಿ ಬಹುಮತ ಪಡೆದುಕೊಳ್ಳುವ ಸಾಮರ್ಥ್ಯ ಇದೆ.ಆದರೆ ನಮ್ಮವರೇ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಜಗದೀಶ ಶೆಟ್ಟರ ಸಿಎಂ ಇದ್ದ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ 17230 ಕೋಟಿ ರೂ.ಟೆಂಡರ್ ಕರೆದಿದ್ದರು.ಮುದ್ದೇಬಿಹಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಚಿಮ್ಮಲಗಿ, ಮುಳವಾಡ ಏತ ನೀರಾವರಿ ಯೋಜನೆಗಳಿಗೆ 800 ಕೋಟಿ ರೂ.ನೀಡಿ ಕೆಲಸ ಮಾಡಿಸಿದ್ದಾರೆ.ಅದರ ಫಲವಾಗಿ ರೈತರ ಜಮೀನುಗಳಿಗೆ ನೀರು ಹರಿದಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸಮಾಜದವರ ಸ್ವಾಭಿಮಾನಕ್ಕೆ ಧಕ್ಕೆ ತಂದವರು ಯಾರೇ ಇದ್ದರೂ ಅವರನ್ನು ಖಂಡಿಸುತ್ತೇನೆ.ಸಮಾಜದಲ್ಲಿ ಉಳ್ಳವರು ಬಡವರಿಗೆ ನೆರವಾಗುವ ಕಾರ್ಯ ಮಾಡಿ ಎಂದರು.ದಿವ್ಯ ಸಾನಿಧ್ಯ ವಹಿಸಿದ್ದ ಹೊಸಮಠದ ಅಮರೇಶ್ವರ ದೇವರು, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಣಜಿಗ ಸಮಾಜದ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಅಶೋಕ ಚಟ್ಟೇರ,ಶಿಕ್ಷಕ ರುದ್ರೇಶ ಕಿತ್ತೂರ, ಮಾಜಿ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ಮಾತನಾಡಿದರು.¸
ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡಿದರು.ಸಮಾಜದ ಗೌರವಾಧ್ಯಕ್ಷ ಎಂ.ಎಸ್.ನಾವದಗಿ, ಪ್ರಧಾನ ಕಾರ್ಯದರ್ಶಿ ರಾಜು ಬಳ್ಳೊಳ್ಳಿ, ಮುಖಂಡರಾದ ಎಂ.ಬಿ.ನಾವದಗಿ,ಬಿ.ಸಿ.ಮೋಟಗಿ,ಸoಗಮೇಶ ನಾವದಗಿ, ಯುವ ಘಟಕದ ಅಧ್ಯಕ್ಷ ಶಂಕರ ಕಡಿ, ಉಪಾಧ್ಯಕ್ಷ ಶಿವು ದಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ನಾಗಠಾಣ ಇದ್ದರು.ಆನಂದ ಕಂಠಿ,ಬಿ.ವಿ .ಕೋರಿ,ಸರೋಜಾ ಕೋರಿ ಕಾರ್ಯಕ್ರಮ ನಿರ್ವಹಿಸಿದರು.ಮುದ್ದೇಬಿಹಾಳ,ತಾಳಿಕೋಟಿ,ನಾಲತವಾಡ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ,ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.ವಕೀಲ ಶಿವು ದಡ್ಡಿ ಪ್ರತಿಭಾವಂತ ವಿದ್ಯಾರ್ಥಿನಿ ವಾಣಿಶ್ರೀ ಹಳ್ಳದಗೆ ಐದು ಸಾವಿರ ರೂ.ಆರ್ಥಿಕ ನೆರವು ಒದಗಿಸಿದರು.