ಮುದ್ದೇಬಿಹಾಳ : ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರೆಗೆ ಮುದ್ದೇಬಿಹಾಳ ಪಟ್ಟಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಮೇ.30 ರಂದು ದೇವಿ ಪ್ರತಿಷ್ಠಾಪನೆಗೊಳ್ಳಲಿದ್ದು ವಿದ್ಯುಕ್ತವಾದ ಚಾಲನೆ ಸಿಗಲಿದೆ. ಜಾತ್ರೆಯ ಅಂಗವಾಗಿ ಎಲ್ಲ ಸಿದ್ಧತೆಗಳನ್ನು ಜಾತ್ರಾ ಕಮೀಟಿಯ ಪ್ರಮುಖ ಮಾಡಿಕೊಂಡಿದ್ದಾರೆ. ಇಡೀ ಮುದ್ದೇಬಿಹಾಳ ಪಟ್ಟಣದ ತುಂಬೆಲ್ಲಾ ಜನನಿಬಿಡ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಪ್ರಮುಖ ವೃತ್ತಗಳಾದ ಬಸವೇಶ್ವರ, ಇಂದಿರಾ, ಅಂಬೇಡ್ಕರ್, ಬನಶಂಕರಿ ವೃತ್ತಗಳನ್ನು ವೃತ್ತಾಕಾರದಲ್ಲಿ ವಿದ್ಯುತ್ ದೀಪ ಅಳವಡಿಸಿದ್ದು ಜನರ ಮನಸೂರೆಗೊಂಡಿದೆ.
ಶಾರದಾ ದೇವಿ ಹಾಗೂ ದ್ಯಾಮವ್ವ ದೇವಿಯರನ್ನು ಮೆರವಣಿಗೆಯಲ್ಲಿ ಕರೆತರಲು ಹೊಸ ಎತ್ತಿನ ಬಂಡಿಗಳನ್ನು ಸಿದ್ದಪಡಿಸಲಾಗಿದೆ. ಜಾತ್ರೆಗೆ ಬಂದ ಭಕ್ತರಿಗೆ ಹೊಟ್ಟೆ ತುಂಬಿಸಲು ಐದು ದಿನಗಳ ಕಾಲ ಪ್ರಸಾದದ ವ್ಯವಸ್ಥೆ ಬೆಳಗ್ಗೆ 12 ರಿಂದ ರಾತ್ರಿ 10ರವರೆಗೆ ಉಣಬಡಿಸಲು ಕಮೀಟಿ ಸಿದ್ಧತೆ ಮಾಡಿಕೊಂಡಿದೆ. ದೇವಸ್ಥಾನ, ಮಸೀದಿಗಳಿಗೆ ದೀಪಾಲಂಕಾರ ಮಾಡಲಾಗಿದ್ದು ಹಿಂದೂ ಮುಸ್ಲಿಂ ಬಾಂಧವರ ಮಧ್ಯೆ ಭಾವೈಕ್ಯತೆಯನ್ನು ಸಾರುವ ಜಾತ್ರೆ ತನ್ನ ವೈಭವ ಇಮ್ಮಡಿಸಿಕೊಂಡಿದೆ.
ಇದು ನಮ್ಮೂರು ಜಾತ್ರೆಯಾಗಿದ್ದು ಜಾತಿ, ಧರ್ಮ, ಮತ, ಬೇಧವಿಲ್ಲದೇ ಎಲ್ಲರೂ ಒಗ್ಗೂಡಿ ಆಚರಿಸುತ್ತಿದ್ದೇವೆ. ಹಲವು ಕಲಾತಂಡಗಳು ಆಗಮಿಸಿದ್ದು ಮೆರವಣಿಗೆ ನೋಡುವುದೇ ಕಣ್ಣಿಗೆ ಒಂದು ಹಬ್ಬದಂತಿರಲಿದೆ.