ಮುದ್ದೇಬಿಹಾಳ : ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ತಾನೊಬ್ಬ ನಿಜವಾದ ಮುಸ್ಲಿಂನಾಗಿದ್ದರೆ ಖುರಾನ್ ಗ್ರಂಥದ ಮೇಲೆ ಪ್ರಮಾಣ ಮಾಡಿ ದಲಿತ ಮುಖಂಡರ ಮೇಲೆ ಮಾಡಿದ ಹಣಕ್ಕೆ ಬೇಡಿಕೆ ಇರಿಸಿದ ಆರೋಪಕ್ಕೆ ಮೊದಲು ಜನರ ಎದುರಿಗೆ ದಾಖಲೆಗಳನ್ನು ಬಹಿರಂಗಪಡಿಸಿ ಮಾತನಾಡುವುದನ್ನು ಕಲಿತುಕೊಳ್ಳಲಿ ಎಂದು ದಲಿತ ಸಮಾಜದ ಮುಖಂಡರು ಸವಾಲು ಹಾಕಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಕುರಿತು ಮಾತನಾಡಿದರು.
ಪಟ್ಟಣದ ತಾಪಂ ವಸತಿ ಗೃಹಗಳು, ಸಾಮರ್ಥ್ಯ ಸೌಧ ನೆಲಸಮ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ದಲಿತ ಮುಖಂಡರ ಮೇಲೆ ಮಾಡಿದ ಆರೋಪವನ್ನು ಖಂಡಿಸುವುದಾಗಿ ಅಂಬೇಡ್ಕರ್ ಸೇನೆ ತಾಲ್ಲೂಕು ಅಧ್ಯಕ್ಷ ಪ್ರಕಾಶ ಚಲವಾದಿ(ಸರೂರ) ಹೇಳಿದರು.
ತಾಪಂಗೆ ಸೇರಿದ ಆಸ್ತಿಯನ್ನು ನಿಯಮ ಬಾಹಿರವಾಗಿ ನೆಲಸಮ ಮಾಡಿದ್ದು ಅಲ್ಲದೇ ಅಲ್ಲಿದ್ದ ಲಕ್ಷಾಂತರ ರೂಪಾಯಿ ಕಲ್ಲು, ಮಣ್ಣು, ಕಟ್ಟಿಗೆ, ಕಬ್ಬಿಣವನ್ನು ಹರಾಜು ಹಾಕದೆ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುವುದೇತಕ್ಕೆ ಎಂದು ತಾಪಂ ಅಧಿಕಾರಿಯನ್ನು ಪ್ರಶ್ನಿಸಿ ಹೋರಾಟ ಹಮ್ಮಿಕೊಂಡಿದ್ದೇವು. ಇದಕ್ಕೆ ತಾಪಂ ಅಧಿಕಾರಿ ಪುರಸಭೆ ಮುಖ್ಯಾಧಿಕಾರಿಗೆ ಸ್ಪಷ್ಟೀಕರಣ ಕೋರಿ ನೋಟಿಸ್ ನೀಡಿದ್ದರು. ಮುಖ್ಯಾಧಿಕಾರಿಗಳು ಉತ್ತರಿಸುತ್ತಿದ್ದರು. ಅದು ಬಿಟ್ಟು ಪುರಸಭೆ ಅಧ್ಯಕ್ಷದಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವ ಗೊಳಸಂಗಿ ಅವರು, ದಲಿತ ಸಮಾಜದ ಹೋರಾಟಗಾರರೊಬ್ಬರ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿರುವುದು ಸರಿಯಲ್ಲ. ಪುರಸಭೆ ಅಧ್ಯಕ್ಷರ ಹೇಳಿಕೆ ಖಂಡಿಸಿ ಪುರಸಭೆ ಎದುರಿಗೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೇಳಿದರು.
ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಚಾಲಕ ಹರೀಶ ನಾಟೀಕಾರ ಮಾತನಾಡಿ, ‘ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ನೀನು ಆರಾಧಿಸುವ ಖುರಾನ್ ಗ್ರಂಥವನ್ನು ಪ್ರಮಾಣ ಮಾಡಿ ನಿಜವಾದ ಮುಸ್ಲಿಂನಾಗಿದ್ದರೆ ಆರೋಪ ಮಾಡಿದಂತೆ ನಾನು ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದೇನೆ ಎಂದು ಹೇಳುವ ಕುರಿತಾದ ಒಂದೇ ಒಂದು ದಾಖಲೆಯನ್ನು ಜನರ ಮುಂದೆ ಬಿಡುಗಡೆ ಮಾಡಿದರೆ ನಾನು ಗಲ್ಲಿಗೇರಲು ಸಿದ್ದನಿದ್ದೇನೆ. ನನ್ನ 35 ವರ್ಷದ ಹೋರಾಟದ ಬದುಕಿನಲ್ಲಿ ನನ್ನ ಸ್ವಂತ ಹಣ ಖರ್ಚು ಮಾಡಿ ಶೋಷಿತರ ಪರವಾಗಿ ಹೋರಾಟ ನಡೆಸುತ್ತ ಬಂದಿದ್ದೇನೆ. ಯಾವುದೇ ಇಲಾಖೆ, ಅಧಿಕಾರಿ ಬಳಿಯೂ ಕೈಚಾಚಿಲ್ಲ. ಪುರಸಭೆಯಲ್ಲಿ ಎಸ್ಸಿ, ಎಸ್ಟಿ ಜನಾಂಗದ ಕಾರ್ಮಿಕರ ಕುರಿತು ಹಗುರವಾಗಿ ಮಾತನಾಡುತ್ತಿದ್ದು ನಿಮ್ಮ ಮೇಲೆ ಜಾತಿ ನಿಂದನೆ ದೂರು ದಾಖಲಿಸುತ್ತೇನೆ ಎಂದು ಹೇಳಿದರು.
ಪುರಸಭೆಯ ಜೆಸಿಬಿಗಳೇ ತಾಪಂ ವಸತಿ ಗೃಹಗಳಿರುವ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿರುವ ಫೋಟೋ, ವಿಡಿಯೋ ದಾಖಲೆಗಳು ನಮ್ಮ ಬಳಿ ಇವೆ. ಪುರಸಭೆ ಅಧ್ಯಕ್ಷ ಒಬ್ಬ ಗೂಂಡಾ ಆಗಿದ್ದು ಆತನ ಮೇಲೆ ರೌಡಿಶೀಟರ್ ಕೇಸ್ ದಾಖಲಾಗಿದೆ. ಅಧ್ಯಕ್ಷನಾಗಿದ್ದುಕೊಂಡು ಜಾತಿವಾದಿಯಾಗಿದ್ದೀರಿ. ದಲಿತರ ಗುಡಿಸಲು, ಮನೆ, ಶೆಡ್ಗಳನ್ನು ನೆಲಸಮ ಮಾಡಿ ನಿಮ್ಮ ಜನಾಂಗದವರ ಮನೆ, ಅಂಗಡಿಗಳನ್ನು ತೆರವುಗೊಳಿಸದೇ ಹಾಗೆ ಬಿಟ್ಟು ಪಕ್ಷಪಾತ ಧೋರಣೆ ಅನುಸರಿಸಿದ್ದೀರಿ. ನೀವು ಅಧ್ಯಕ್ಷರಾಗಲು ನಾಲಾಯಕ್ ಎಂದು ಆಕ್ರೋಶ ಹೊರ ಹಾಕಿದರು.
ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ನೀವೇ ಆಯ್ಕೆಯಾದಾಗ ದಲಿತರು-ಮುಸ್ಲಿಂರು ಅಣ್ಣತಮ್ಮಂದಿರು ಎನ್ನುವ ಭಾವನೆಯಿಂದ ನಾವು ಬಂದು ನಿಮಗೆ ಅಭಿನಂದಿಸಿದ್ದೇವು. ದಿ.ರಸೂಲ ದೇಸಾಯಿ, ದಿ.ಅಲ್ಲಾಭಕ್ಷ್ಯ ಢವಳಗಿ ಅಂತಹ ಮುಸ್ಲಿಂ ನಾಯಕರು ದಲಿತರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಆದರೆ, ನೀವು ದಲಿತರೆಂದರೆ ವೈಷಮ್ಯ ಸಾಧಿಸುತ್ತಿದ್ದೀರಿ ಎಂದು ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ದಲಿತಪರ ಸಂಘಟನೆಯ ಪ್ರಶಾಂತ ಕಾಳೆ, ಬಸವರಾಜ ಸರೂರ, ಆನಂದ ಮುದೂರ, ಹಣಮಂತ ಗುಂಡಕರ್ಜಗಿ, ಬಸವರಾಜ ಚಲವಾದಿ, ಪ್ರಕಾಶ ಗುಂಡಕರ್ಜಗಿ ಇದ್ದರು.
ಕ್ಷೇತ್ರದ ಶಾಸಕರು ದಲಿತರು-ಮುಸ್ಲಿಂರ ಒಳ್ಳೆಯ ಸಂಬಂಧವನ್ನು ಹಾಳು ಮಾಡುತ್ತಿರುವ ಮಹೆಬೂಬ ಗೊಳಸಂಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ದಲಿತಪರ ಸಂಘಟನೆಯ ಮುಖಂಡರ ಬಗ್ಗೆ ಆಧಾರ ರಹಿತ ಆರೋಪ ಮಾಡಿರುವ ಪುರಸಭೆ ಅಧ್ಯಕ್ಷರ ವಿರುದ್ದ ಪುರಸಭೆ ಎದುರಿಗೆ ಜು.21 ರಂದು ಧರಣಿ ಸತ್ಯಾಗ್ರಹ ಆರಂಭಿಸುತ್ತೇವೆ.
–ಹರೀಶ ನಾಟೀಕಾರ, ದಸಂಸ ಜಿಲ್ಲಾ ಸಂಚಾಲಕ