ಮುದ್ದೇಬಿಹಾಳ : ತಾವು ಗಳಿಸಿದ್ದರಲ್ಲಿ ಸಮಾಜದ ಸೇವೆಯ ಮೂಲಕ ತಮ್ಮ ತಂದೆ ತಾಯಿಯನ್ನು ಬಡವರ ಮುಖದಲ್ಲಿ ನೋಡುವ ಪರೋಪಕಾರದ ಗುಣ ಸಮಾಜ ಸೇವಕ ಅಯೂಬ್ ಮನಿಯಾರ ಅವರಲ್ಲಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಪಟ್ಟಣದ ಮನಿಯಾರ ಚಾರಿಟೇಬಲ್ ಟ್ರಸ್ಟ್ನಿಂದ ಸೋಮವಾರ ಹಮ್ಮಿಕೊಂಡಿದ್ದ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧ ಉಚಿತ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೇತ್ರಗಳು ಮಾನವನಿಗೆ ಬಹುಮುಖ್ಯವಾದ ಅಂಗವಾಗಿದ್ದು ಅದಿಲ್ಲದಿದ್ದರೆ ಈ ಜಗತ್ತನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಕಣ್ಣು ಕಾಣದವರಿಗೆ ದೃಷ್ಟಿ ದೊರಕಿಸಿಕೊಡುವ ಕೆಲಸ ಮಾಡುತ್ತಿರುವ ಅಯ್ಯೂಬ ಮನಿಯಾರ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಸಿರಿವಂತಿಕೆ ಬಂದಾಗ ದಾನ ಮಾಡಬೇಕು. ಕಣ್ಣುಗಳು ಇಲ್ಲದಿದ್ದರೆ ಮನುಷ್ಯ ಪರಾವಲಂಬಿ ಜೀವಿಯಾಗಬೇಕು. ನೇತ್ರದಾನ ಪವಿತ್ರ ದಾನವಾಗಿದೆ. ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬೇಕು. ಈಗಿನ ಜನಾಂಗದವರ ಕಣ್ಣುಗಳು ಬೇಗನೇ ಹಾಳಾಗಲು ಮೊಬೈಲ್, ಟಿವಿ ಕಾರಣವಾಗಿದೆ ಎಂದರು.
ಇಳಕಲ್ ಪ್ರವಚನಕಾರ ಲಾಲಹುಸೇನ್ ಕಂದಗಲ್ ಮಾತನಾಡಿ, ಯಾರಿಗೆ ದುಡ್ಡಿನ ಮೇಲೆ ಪ್ರೀತಿ ಇದೆ ಸ್ವಾರ್ಥ ರಹಿತ ಸೇವೆಗಳನ್ನು ಮಾಡುವುದಿಲ್ಲ. ಬಡವರ ಏಳ್ಗೆಗೆ ಕಾರಣವಾದ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಆದರೆ, ಸಮಾಜದಲ್ಲಿ ಪರಸ್ಪರಲ್ಲಿ ಪ್ರೀತಿ ವಿಶ್ವಾಸ ಕಡಿಮೆ ಆಗುತ್ತಿದೆ. ಸರ್ವಜನಾಂಗದ ಶಾಂತಿಯ ತೋಟವಾದ ರಾಜ್ಯದಲ್ಲಿ ಬೆಳಗಾವಿ, ಶಿವಮೊಗ್ಗದ ಶಾಲೆಯಲ್ಲಿ ನಮ್ಮ ಜಾತಿಯವನಲ್ಲ ಎಂಬ ಕಾರಣಕ್ಕೆ ಶಾಲೆಯ ಕುಡಿವ ನೀರಿನಲ್ಲಿ ವಿಷ ಬೆರೆಸುವ ಮಟ್ಟಿಗೆ ಧಾರ್ಮಿಕ ಅಸಹಿಷ್ಣುತೆ ಬೆಳೆದಿರುವುದು ಅಮಾಯಕ ಮಕ್ಕಳ ಜೀವಕ್ಕೆ ಆಪತ್ತು ತರುತ್ತದೆ. ಕ್ರೌರ್ಯತೆಯಿಂದ ಕರುಣೆ ಕಡೆಗೆ ಮನುಷ್ಯ ತೆರಳಬೇಕಿದೆ. ಕರುಣೆಯನ್ನು ತೋರಬೇಕು ಎಂಬುದನ್ನು ಮನಿಯಾರವರು ಕೈಗೊಳ್ಳುತ್ತಿರುವ ಕಾರ್ಯಗಳು ತೋರಿಸಿಕೊಡುತ್ತಿವೆ ಎಂದರು.
ಕಾರ್ಯಕ್ರಮದ ರೂವಾರಿ, ಮನಿಯಾರ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಅಯ್ಯೂಬ ಮನಿಯಾರ ಮಾತನಾಡಿ, ನಮ್ಮ ತಂದೆ ತಾಯಿ ಜೀವಂತ ಇಲ್ಲ. ಆದರೆ, ಬಡವರಿಗೆ ಇಂತಹ ಸೇವೆಗಳನ್ನು ಕೈಗೊಂಡಾಗ ಅವರು ಹರಸುವ ಆಶೀರ್ವಾದದಲ್ಲಿ ನನ್ನ ತಂದೆ ತಾಯಿಯನ್ನು ಕಾಣುತ್ತೇನೆ. ಅಕ್ಕತಂಗಿ, ಅಣ್ಣ ತಮ್ಮಂದಿರ ಜೊತೆಗಿನ ಸಂಬಂಧಗಳನ್ನು ಕಡಿದುಕೊಳ್ಳದೇ ಉಳಿಸಿಕೊಂಡು ನಗು ನಗುತ್ತ ಜೀವನ ನಡೆಸಿ ಎಂದು ಹೇಳಿದರು.
ಅನುಗ್ರಹ ಕಣ್ಣಿನ ಆಸ್ಪತ್ರೆ ವೈದ್ಯ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಆಲಮೇಲದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಂಕರಗೌಡ ಹೊಸಮನಿ, ಬನಶ್ರೀ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ರೂಪಸಿಂಗ ಲೋಣಾರಿ, ಉದ್ಯಮಿ ಮದನಸಾಬ ಸಾಲವಾಡಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಡಾ.ಎ.ಎ.ನಾಲಬಂದ, ಅಫ್ತಾಬ ಮನಿಯಾರ, ಎ.ಎಂ.ಎತ್ತಿನಮನಿ, ಮೈಬೂಬ ನಾಲತವಾಡ, ಆಯ್.ಎಲ್.ಮಮದಾಪೂರ, ಹಾಜಿಮಲಂಗ ಎಕಿನ್ ಇದ್ದರು. 500 ಜನರ ಕಣ್ಣಿನ ತಪಾಸಣೆ ನಡೆಸಿದ್ದರಲ್ಲಿ 200 ಜನಕ್ಕೆ ಉಚಿತವಾಗಿ ಕನ್ನಡ, ಔಷಧಿ ವಿತರಿಸಲಾಯಿತು. ನಿರ್ಗತಿಕರಿಗೆ ಮಾಸಿಕ ಪಿಂಚಣಿಯನ್ನು ನೀಡಲಾಯಿತು.
ವೀರೇಶ ವಾಲಿ ತಂಡದವರು ನಾಡಗೀತೆ ಹಾಡಿದರು. ಮುಜಾಹಿದ್ದ ನಮಾಜಕಟ್ಟಿ ಸ್ವಾಗತಿಸಿದರು. ಶೃತಿ ಜಾಧವ ನಿರೂಪಿಸಿದರು.