ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಮತ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ (K Y Nanjegowda) ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿ ಆದೇಶ ನೀಡಿದೆ.
ಅಷ್ಟು ಮಾತ್ರವಲ್ಲದೆ, ಮತಗಳ ಮರು ಎಣಿಕೆ ಮಾಡುವಂತೆ ಸೂಚನೆ ನೀಡಿದೆ. 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ.ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರದ್ದ ಪೀಠ ವಿಚಾರಣೆ ಮಾಡಿತು.
ಕಳೆದ ಎರಡು ವರ್ಷಗಳ ವಿಚಾರಣೆಯ ಬಳಿಕ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಚುನಾವಣೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿಯು ಆರೋಪ ಮಾಡಿದ್ದರು. ಹೀಗಾಗಿ, ಕೋರ್ಟ್ ಮತ್ತೊಮ್ಮೆ ಎಣಿಕೆಯನ್ನೂ ಮಾಡುವಂತೆ ಸೂಚನೆ ನೀಡಿದೆ.
ಶಾಸಕರಾಗಿ ಕೆ.ವೈ ನಂಜೇಗೌಡ ಅವರ ವಕೀಲರ ಮನವಿ ಮೇರೆಗೆ ಶಾಸಕ ಸ್ಥಾನ ಅಸಿಂಧು ಎಂದು ನೀಡಿದ್ದ ಆದೇಶಕ್ಕೆ 30 ದಿನಗಳ ಕಾಲ ಹೈಕೋರ್ಟ್ ತಡೆ ನೀಡಿದೆ. ಅಷ್ಟರಲ್ಲಿ ಶಾಸಕರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಬಹುದು. ಒಂದು ವೇಳೆ ಸುಪ್ರೀಂ ಕೋರ್ಟ್ನಿಂದ ಯಾವುದೇ ನಿರ್ದೇಶನ ಬರದಿದ್ದರೆ ಶಾಸಕ ಸ್ಥಾನ ಅಸಿಂಧುವಾಗಲಿದೆ. ಮರು ಮತ ಎಣಿಕೆ ನಡೆಯಲಿದೆ.
248 ಮತಗಳ ಅಂತದ ಗೆಲುವು:
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೆವೈ ನಂಜೇಗೌಡ 248 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಗ್ಗೆ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿಯಾಗಿದ್ದ ಕೆಎಸ್ ಮಂಜುನಾಥ ಗೌಡ ಅನುಮಾನ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿಯೇ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತ ಎಣಿಕೆಗೆ ಆದೇಶ ನೀಡುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದರು.
ತಕರಾರು ಅರ್ಜಿ ಹಾಕಿದ ಬಳಿಕ ಸಿಸಿಟಿವಿ ದೃಶ್ಯಾವಳಿ, 17 ಸಿ ಫಾರಂಗಳನ್ನು ನೀಡುವಂತೆ ನ್ಯಾಯಾಲಯವು ಆದೇಶವನ್ನು ನೀಡಿತ್ತು. ಸೂಕ್ತ ದಾಖಲೆ ನೀಡಿಲ್ಲ. 251 ಸಿ ಫಾರಂಗಳ ಪೈಕಿ 120 ಫಾರಂನಲ್ಲಿ ನಮ್ಮ ಏಜೆಂಟರ ಸಹಿಗಳೇ ಇಲ್ಲ. ಸಿಸಿಟಿವಿ ದೃಶ್ಯಾವಳಿ ದೊರೆತರೆ ನಮ್ಮ ಏಜೆಂಟರು ಇದ್ದರು ಅಥವಾ ಇಲ್ಲ ಎನ್ನುವುದು ತಿಳಿಯುತ್ತದೆ. ಮರು ಮತ ಎಣಿಕೆ ಆಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥ್ಗೌಡ ಹೇಳಿದ್ದರು.







