ಮುದ್ದೇಬಿಹಾಳ : ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯಿಂದ ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಸರ್ಕಾರದ ಅಣಕು ಶವಯಾತ್ರೆಗೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಆದರೆ ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್ದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ವಕೀಲ ಕೆ.ಬಿ.ದೊಡಮನಿ ಮಾತನಾಡಿ, ಆಳುವ ಸರ್ಕಾರಗಳು ಸಾರ್ವಜನಿಕ ನ್ಯಾಯ ಕೊಟ್ಟಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಸಿಎಂ ಸಿದ್ಧರಾಮಯ್ಯ ಅಹಿಂದ ನಾಯಕ, ಶೋಷಿತ ಸಮುದಾಯದ ಪರ ಎಂದು ಹೇಳುತ್ತಾ ಮೇಲ್ವರ್ಗದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ಗೋವಿಂದ ಕಾರಜೋಳ ಅವರು ತಮ್ಮ ಸರ್ಕಾರ ಇದ್ದಾಗ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲಿ. ನಮ್ಮ ಸಮಾಜದ ಎಮ್.ಎಲ್.ಎ, ಎಂಪಿಗಳು ಸಮಾಜವನ್ನು ಸರ್ಕಾರಗಳ ಮುಂದೆ ಅಡ ಇಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಮಾರುತಿ ಸಿದ್ಧಾಪೂರ ಮಾತನಾಡಿ, ಮೀಸಲಾತಿ ಹೆಸರಿನಲ್ಲಿ ಬಲಾಢ್ಯ ಸಮುದಾಯದವರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಕೊಟ್ಟ ಆಶ್ವಾಸನೆಯನ್ನು ಈಡೇರಿಸಲು ಈ ಸರ್ಕಾರಕ್ಕೆ ಆಗಿಲ್ಲ.ರಾಜಕಾರಣಿಗಳು ನಮ್ಮ ಸಮುದಾಯದ ಪರ ಇಲ್ಲ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ತಮ್ಮದೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಒಳಮೀಸಲಾತಿ ಜಾರಿಗೆ ಮುಂದಾಗಬೇಕು. ಒಳಮೀಸಲು ಜಾರಿ ಬಗ್ಗೆ ಖರ್ಗೆ ರಾಹುಲ್ ಹೆಸರು ಹೇಳಿದರೆ, ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ ಹೆಸರು ಹೇಳುತ್ತಾರೆ. ಒಬ್ಬರ ಮೇಲೊಬ್ಬರು ಹಾಕುತ್ತಾ ಒಳಮೀಸಲು ಕಲ್ಪಿಸುವುದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಮುಖಂಡ ದುರಗಪ್ಪ ದೊಡಮನಿ ಮಾತನಾಡಿ, ಸಂವಿಧಾನದ ಆಶಯದಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿಲ್ಲ. ನಮ್ಮ ಸಮುದಾಯಕ್ಕೆ ನಿಜವಾದ ನಾಯಕರು ಮಾತ್ರ ಹೋರಾಟಕ್ಕೆ ಬರಲಿ. ಒಳಮೀಸಲು ಪರ ಎನ್ನುತ್ತಾ ಬ್ರಿಟಿಷರಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಮಾದಿಗ ಸಮುದಾಯವನ್ನು ಕಳೆದ 35 ವರ್ಷಗಳಿಂದ ವಂಚಿಸಿದ್ದಾರೆ ಎಂದು ದೂರಿದರು.
ಮುಖಂಡರಾದ ಬಾಲಚಂದ್ರ ಹುಲ್ಲೂರ , ಶೇಖಪ್ಪ ಮಾದರ, ಆನಂದ ಮುದೂರ ಮಾತನಾಡಿದರು. ತಹಸೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವಕೀಲರಾದ ಪಿ.ಬಿ.ಮ್ಯಾಗೇರಿ ಮನವಿ ಪತ್ರ ಓದಿದರು. ವಕೀಲ ಮಹೇಶ ದೊಡಮನಿ, ರಮೇಶ ತಳವಾರ, ಮಲ್ಲಪ್ಪ ಬಸರಕೋಡ, ನೀಲಪ್ಪ ಸಿದ್ದಾಪೂರ, ಡಿ.ಡಿ.ಯರಝೇರಿ, ಮುತ್ತು ಅಮರಗೋಳ, ಮಾರುತಿ ಧನ್ನೂರ, ಕಾಳಪ್ಪ ಅರ್ಜಿ, ಪ್ರಭು ತಳಗೆ, ಲಕ್ಷ್ಮಣ ಕಾಳಗಿ, ಪರಶು ನಾಗೂರು, ಮುತ್ತು ಸಿದ್ದಾಪೂರ, ಶಂಕ್ರಪ್ಪ ತಂಗಡಗಿ, ಬಸವರಾಜ ಅರಸನಾಳ, ಮಾಯಮ್ಮ ಮಾದರ, ಶಿಲ್ಪಾ ಮಾದರ, ನೀಲಮ್ಮ ಮಾದರ ಇದ್ದರು. ಮುಂಜಾಗ್ರತಾ ಕ್ರಮವಾಗಿ ಸಿಪಿಐ ಮೊಹ್ಮದ ಫಸಿವುದ್ದೀನ್, ಪಿಎಸ್ಐ ಸಂಜಯ ತಿಪರೆಡ್ಡಿ ತಮ್ಮ ಸಿಬ್ಬಂದಿಯೊಂದಿಗೆ ಭದ್ರತೆ ಒದಗಿಸಿದ್ದರು.