ಮುದ್ದೇಬಿಹಾಳ : ಕುಂಟೋಜಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಅವರ ಮನೆಗೆ ಸ್ಥಳೀಯವಾಗಿ ಇದ್ದರೂ ನೊಂದಿರುವ ರೈತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳದ ಶಾಸಕರು ಮಾನವೀಯತೆಯ ಸಂವೇದನೆಯನ್ನೇ ಕಳೆದುಕೊಂಡಿದ್ದಾರೆಯೇ ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಪ್ರಶ್ನಿಸಿದರು.
ಸಾಲದ ಬಾಧೆ ತಾಳದೇ ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ(ಬೊಮ್ಮಣಗಿ)ಅವರ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗ ಅವರು ಮಾತನಾಡಿದರು.ಈ ಸರ್ಕಾರದಲ್ಲಿ ಅಧಿಕಾರಿಗಳು ಮಾನವೀಯತೆಯನ್ನು ಕಳೆದುಕೊಂಡಿದ್ದಾರೆ.ರೈತ ಆತ್ಮಹತ್ಯೆ ವಿಷಯ ತಿಳಿದ ತಕ್ಷಣ ತಹಶೀಲ್ದಾರ್ರು, ಪಿಎಸ್ಐ,ಕೃಷಿ ಇಲಾಖೆ ಅಧಿಕಾರಿ ಭೇಟಿ ನೀಡಿ ವರದಿ ನೀಡಬೇಕು.ಆದರೆ ಈವರೆಗೂ ಅಧಿಕಾರಿಗಳು ಭೇಟಿ ನೀಡದೆ ಇರುವುದು ಈ ಕ್ಷೇತ್ರದ ದುರಂತ ಎಂದರು.
ನಾನಿಲ್ಲಿ ರಾಜಕಾರಣ ಮಾಡುವುದಕ್ಕೆ ಬಂದಿಲ್ಲ.ರೈತ ಆತ್ಮಹತ್ಯೆ ಮಾಡಿಕೊಂಡಾಗ ಕನಿಷ್ಠ ಪಕ್ಷ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ ಕೆಲಸ ಮಾಡಿ ಸರ್ಕಾರದಿಂದ ಬರುವ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರೆ ಅವರಿಗೆ ಧೈರ್ಯ ಬರುತ್ತಿತ್ತು.ಆದರೆ ಇಂತಹ ಕೆಲಸ ಮಾಡದೇ ಇರುವ ಜನಪ್ರತಿನಿಧಿ ಇರುವುದು ಜನತೆಯ ದುರ್ದೈವ.ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ರೈತನ ಹೆಸರಲ್ಲಿ 6.50 ಲಕ್ಷ ರೂ.ಸಾಲ ವಿವಿಧ ಬ್ಯಾಂಕುಗಳಲ್ಲಿದೆ.ಅತಿವೃಷ್ಟಿಯಿAದ ಬೆಳೆದಿದ್ದ ಬೆಳೆ ಫಸಲು ಕೈಗೆ ಬಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ರೈತರು ದುಡುಕಿನ ನಿರ್ಧಾರ ತಗೆದುಕೊಳ್ಳಬಾರದು ಎಂದು ನಡಹಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗ ಸುಲ್ಲಳ್ಳಿ, ಮಾಜಿ ಸೈನಿಕ ನಾಗಲಿಂಗಯ್ಯ ಮಠ, ವಕೀಲ ಪಿ.ಎಲ್.ಬೊಮ್ಮಣಗಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಂ.ಎಸ್.ಕನ್ನೂರ,ರೈತನ ಪತ್ನಿ ಬೋರಮ್ಮ ಗೌಡರ,ಮೃತ ರೈತನ ಮಕ್ಕಳು ಇದ್ದರು.
ರೈತನ ಒಬ್ಬ ಮಗಳಿಗೆ ವಿವಾಹ ನಿಶ್ಚಯವಾಗಿದ್ದು ಮದುವೆಯ ಸಮಯದಲ್ಲಿ ನೆರವು ನೀಡುವುದಾಗಿ ತಿಳಿಸಿದರು.ಆತ್ಮಹತ್ಯೆಗೆ ಶರಣಾದ ರೈತನ ಮಕ್ಕಳಿಗೆ ಶಿಕ್ಷಣ ಉಚಿತವಾಗಿ ನೀಡಬೇಕು.ಪತ್ನಿಗೆ ಮಾಶಾಸನ ನೀಡಬೇಕು.ರೈತನಿಗೆ ತ್ವರಿತವಾಗಿ ಪರಿಹಾರ ದೊರಕದೆ ಇದ್ದಲ್ಲಿ ನಾನು ಹೋರಾಟದ ದಾರಿv ತುಳಿಯಬೇಕಾಗುತ್ತದೆ.ಇದಕ್ಕೆ ಆಸ್ಪದ ಮಾಡಿಕೊಡಬೇಡಿ.
–ಎ.ಎಸ್.ಪಾಟೀಲ ನಡಹಳ್ಳಿ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ