ವಿಶಾಖಪಟ್ಟಣ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಅವರು ಮೈದಾನದಲ್ಲಿ ಕ್ಷೇತ್ರರಕ್ಷಣೆಯ ವೇಳೆ ಸದಾ ಸಕ್ರಿಯರಾಗಿಯೇ ಇರುತ್ತಾರೆ ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ಸಂಗತಿ. ಹಾಗೇ ಓರ್ವ ಅನುಭವಿ ಆಟಗಾರನಾಗಿ ನಾಯಕರೊಂದಿಗೆ ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ. IND vs SA Match
ಹೌದು, ಪ್ರಸ್ತುತ ವಿಶಾಖಪಟ್ಟಣದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಇಂತಹದೊಂದು ಘಟನೆ ನಡೆಯಿತು. ಈ ವೇಳೆ ರೋಹಿತ್ ರಿಯಾಕ್ಷನ್ ಭಾರಿ ವೈರಲ್ ಆಗುತ್ತಿದೆ.
ಇದಕ್ಕೆ ಕಾರಣ ಕೊಹ್ಲಿ ಅವರ ಸಲಹೆಯನ್ನು ಕ್ಯಾಪ್ಟನ್ ಕೆ.ಎಲ್. ರಾಹುಲ್ ಒಪ್ಪಲಿಲ್ಲ. ಈ ವೇಳೆ ಮಗದೋರ್ವ ಮಾಜಿ ನಾಯಕ ರೋಹಿತ್ ಶರ್ಮಾ ಅವರ ರಿಯಾಕ್ಷನ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.
ಏನಿದು ಅಂಥ ಘಟನೆ?
ಭಾರತದ ಕ್ಷೇತ್ರರಕ್ಷಣೆ ವೇಳೆ ಈ ಘಟನೆ ನಡೆದಿತ್ತು. ಸ್ಲಿಪ್ನಲ್ಲಿ ಎರಡು ಫೀಲ್ಡರ್ಗಳನ್ನು ಇರಿಸುವಂತೆ ಕೊಹ್ಲಿ ಸಲಹೆ ನೀಡುತ್ತಾರೆ. ಆದರೆ ಕೊಹ್ಲಿ ಸಲಹೆ ನಿರಾಕರಿಸಿದ ರಾಹುಲ್, ತಮ್ಮ ಸ್ಥಾನಕ್ಕೆ ಮರಳುವಂತೆ ಸೂಚಿಸುತ್ತಾರೆ. ಬಳಿಕ ಬಲಗಡೆ ತಿರುಗಿ ರೋಹಿತ್ ಅವರಲ್ಲಿ ಮುಂದೆ ಬರುವಂತೆ ಸನ್ನೆ ಮಾಡುತ್ತಾರೆ. ಅಲ್ಲೆ ಹತ್ತಿರದಲ್ಲಿ ಇವನ್ನೆಲ್ಲ ಗಮನಿಸುತ್ತಲೇ ಇದ್ದ ರೋಹಿತ್ ಶರ್ಮಾ ನಗುಮುಖದಿಂದಲೇ ಕಾಣಿಸುತ್ತಾರೆ.
ಅಂದ ಹಾಗೆ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.



