ಹುನಗುಂದ: ಜಗಜ್ಯೋತಿ ಅಣ್ಣ ಬಸವಣ್ಣನವರು ನಡೆದಾಡಿದ ಮತ್ತು ಚಾಲುಕ್ಯರ ಸಾಮ್ರಾಜ್ಯದ ವೀರ ಪುಲಕೇಶಿಯ ಅವರ ಪುಣ್ಯಭೂಮಿಯಲ್ಲಿ ಯಶಸ್ವಿಯಾಗಿ ಎರಡು ವರ್ಷ ಕರ್ತವ್ಯ ನಿರ್ವಹಿಸಿದ್ದು ಭಾಗ್ಯ ನಮ್ಮದು ಎಂದು ಹುನಗುಂದ ಸಿಪಿಐ ಸುನೀಲ್ ಸವದಿ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಗುರವಾರ ನಡೆದ ಹುನಗುಂದ ಡಿವೈಎಸ್ಪಿ ಹಾಗೂ ಸಿಪಿಐ ಅವರನ್ನು ಬೀಳ್ಕೋಡಿಗೆ ಸಮಾರಂಭ ಹಾಗೂ ನೂತನ ಡಿವೃಎಸ್ಪಿ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೋಲೀಸ್ ಇಲಾಖೆಯು ಇದೀಗ ಪೂರ್ತಿಯಾಗಿ ಜನಸ್ನೇಹಿ ಪೋಲಿಸ್ ಆಗಿದೆ. ಸಂವಿಧಾನದ ಹಾಗೂ ಕಾನೂನಿನ ನಿಯಮಾವಳಿಯ ಚೌಕಟ್ಟಿನಲ್ಲಿ ನಾವು ಕರ್ತವ್ಯ ನಿರ್ವಹಿಸಬೇಕು. ನಮಗೆ ನಮ್ಮ ಇಲಾಖೆಯ ಮೇಲೆ ಜವಾಬ್ದಾರಿ ಬಹಳಷ್ಟು ಇರುತ್ತದೆ. ಪೋಲಿಸ್ ರು ನೊಂದವರ, ಬಡವರಿಗೆ ನ್ಯಾಯ ಕೊಡುಸುವ ಕೆಲಸ ಮಾಡಬೇಕು.
ಹೆಂಡತಿ- ಮಕ್ಕಳ ಹೊಟ್ಟೆಗಾಗಿ ಹಾಗೂ ಕುಟುಂಭದ ಉದ್ದಾರದ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ. ಅದು ವ್ಯರ್ಥ, ನಮಗಿರುವ ಶಕ್ತಿಯನ್ನು ವೈಯಕ್ತಿಕ ಬಳಸಿಕೊಳ್ಳದೆ, ಸಮಾಜ ಶಾಂತಿ ಸುವ್ಯವಸ್ಥೆಗೆ ಬಳಕೆ ಮಾಡಿದರೆ ಈ ಹುದ್ದೆಗೆ ಸೇರಿದ್ದು ಸಾರ್ಥಕವಾಗುತ್ತದೆ. ಸೇವೆಗೆ ಅವಕಾಶ ನೀಡಿದ ಹುನಗುಂದ ಇಲಕಲ್ಲ, ಅಮೀನಗಡದ ಭಾಗದ ಎಲ್ಲ ಸಾರ್ವಜನಿಕರಿಗೆ ನಮ್ಮ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.
ಹುನಗುಂದ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಮಾತನಾಡಿ, ಕಳೆದ ಎರಡು ವರ್ಷ ಅವಧಿಯಲ್ಲಿ ಹುನಗುಂದ ಉಪವಿಭಾಗ ನನಗೆ ಅತ್ಯಂತ ಖುಷಿ ತಂದಿದೆ. ಆದರೆ ನಾವು ಹೇಗೆ ಕೆಲಸ ಮಾಡುತ್ತೇವೆ, ಅಧಿಕಾರ ಬಳಸುವುದರ ಮೂಲಕ ನಮ್ಮ ಕೆಲಸ ಮುಖ್ಯವಾಗುತ್ತದೆ. ಸಾರ್ವಜನಿಕರು, ರಾಜಕೀಯ ಮುಖಂಡರು, ಮಾಧ್ಯಮ ಮಿತ್ರರರು ಎಲ್ಲ ಸಹಕಾರದಿಂದಲೇ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು. ಸರ್ಕಾರಿ ಸೇವೆಯಲ್ಲಿ ಬದಲಾವಣೆಯೂ ಸಹಜ ಆದರೆ ಸರ್ಕಾರ ನಿಯಮಗಳ ಮೂಲಕ ಪೋಲಿಸ್ ಇಲಾಖೆಯೂ ಬದಲಾವಣೆಯಾಗುತ್ತಿದ್ದಂತೆ ಅದರಂತೆ ನಾವು ಬದಲಾಗಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು. ನಮ್ಮ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ನಮ್ಮ ಕೆಲಸ ಸಾರ್ಥಕವಾಗುತ್ತದೆ. ನಮ್ಮ ಮೇಲಾಧಿಕಾರಿಗಳು ಸಹಕಾರದಿಂದ ಎರಡು ವರ್ಷ ಉತ್ತಮ ಕೆಲಸ ಮಾಡಿದ್ದೇವೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಪೋಲಿಸ ಇಲಾಖೆಯ ಪಾತ್ರವು ಮಹತ್ವವಿದೆ ಎಂದರು.
ನೂತನ ಡಿವೈಎಸ್ಪಿ ಸಂತೋಷ ಬನ್ನಿಟ್ಟಿ ಮಾತನಾಡಿ, ಎಲ್ಲರೂ ಮೊದಲಿನಂತೆ ನಮಗೂ ಸಹಕಾರಿ ನೀಡಿ ಸಾರ್ವಜನಿಕರ ಯಾವುದೇ ಸಮಸ್ಯೆಗೆ ಪರಿಹಾರಕ್ಕೆ ನಮ್ಮ ಇಲಾಖೆಯೂ ಸ್ಪಂದಿಸುತ್ತದೆ ಎಂದು ತಿಳಿಸಿದರು.
ಕಾನಿಪ ಅಧ್ಯಕ್ಷ ಅಮರೇಶ ನಾಗೂರ, ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಮನಿ, ಮಾಜಿ ಸೈನಿಕ ವಿಜಯ ದಳವಾಯಿ, ಇಳಕಲ್ಲ ಪಿಎಸ್ ಐ ಎಸ್.ಆರ್.ನಾಯಕ ಮಾತನಾಡಿದರು.
ಬದಾಮಿ ಸಿಪಿಐ ಕರಿಯಪ್ಪ ಬನ್ನಿ , ಹುನಗುಂದ ಪಿಎಸ್ಐ ಎಸ್. ಜಿ. ಆಲದಕಟ್ಟಿ , ಅಮೀನಗಡ ಪಿಎಸ್ ಐ ಜ್ಯೋತಿ ವಾಲೀಕಾರ, ಮಂಜುನಾಥ ಪಾಟೀಲ್, ಸೇರಿದಂತೆ ಇತರರು ಇದ್ದರು.