ನಾಲತವಾಡ: ಪಟ್ಟಣದ ಶೋಷಿತ, ಹಿಂದುಳಿದ ಸಮುದಾಯಗಳಿಗಾಗಿ ಮೀಸಲಿರುವ 6 ಎಕರೆ ಸ್ಮಶಾನ ಜಾಗವನ್ನು ಅತಿಕ್ರಮಿಸಿ ಸ್ವಂತದ್ದೆಂದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಲ್ಲದೆ ಈಗಾಗಲೇ ಈ ಸ್ಥಳದಲ್ಲಿ ಬ್ಯಾಂಕ್, ಸಂಘ-ಸಂಸ್ಥೆ ಕಚೇರಿ ಹಾಗೂ ಮನೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದೆ ಎಂದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ದೂರು ನೀಡಿದರೂ ಸ್ಪಂದಿಸದ ಪಟ್ಣಣ ಪಂಚಾಯಿತಿ ಸಿಒ ಹಾಗೂ ತಹಸೀಲ್ದಾರ್ ವಿರುದ್ಧ ಲೋಕಾಯುಕ್ತಕ್ಕೆ ಗಂಭೀರ ಪ್ರಕರಣದ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?: ಹಲವಾರು ವರ್ಷಗಳಿಂದ ಪಟ್ಟಣದ ವಿವಿಧ ಸಮುದಾಯಗಳ ಸ್ಮಶಾನಕ್ಕೆ ಎಂದು ಸರ್ವೆ ನಂ.615 ರ ಮೀಸಲಿಟ್ಟ 6 ಎಕರೆ 21ಗುಂಟೆ ಸುಡುಗಾಡು ಜಾಗವನ್ನು ಪ್ರಭಾವಿ ಕಾಣದ ಕೈಗಳು ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರ ಅತಿಕ್ರಮಣಕ್ಕೆ ಅವಕಾಶ ನೀಡಿವೆ. ಅಧಿಕಾರಿಗಳ ಕೈಚಳಕ ಮತ್ತು ಹಿಂದೆ ಅಧಿಕಾರ ನಡೆಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಕ್ರಮ ಎರಡೂ ಸೇರಿ ಪಂಚಾಯಿತಿ ದಾಖಲೆ 9 ನಂ. ರಿಜಿಸ್ಟರ್ ನಲ್ಲಿ ಹೆಸರು ನಮೂದಿಸಿ ಸ್ಮಶಾನ ಜಾಗವನ್ನು ಕಂಡವರ ಪಾಲು ಮಾಡಿ ಉತಾರ ಸೃಷ್ಟಿಸಲಾಗಿದೆ. ಹಲವರು ಸ್ಮಶಾನದ ಜಾಗ ತಮ್ಮದೇ ಎಂದು ಹೇಳಿಕೊಂಡು ಲಕ್ಷಗಟ್ಟಲೇ ಹಣಕ್ಕೆ ಮಾರಾಟ ಮಾಡಿದ್ದಾರೆ. ಸರ್ಕಾರಕ್ಕೆ ಸೇರಿದ ಸ್ಮಶಾನ ಜಾಗದಲ್ಲೇ ಸಭಾ ಭವನ ನಿರ್ಮಿಸಿ ಸರ್ಕಾರಕ್ಕೆ ಬಾಡಿಗೆ ನೀಡಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ಡಿಸಿಸಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ನಿರ್ಮಿಸಲಾಗಿದೆ. ಅದೇ ಜಾಗದಲ್ಲಿ ಹಲವರು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ ಎನ್ನುವುದು ದೂರುದಾರರ ವಾದ.
ಸ್ಥಾನಿಕ ತನಿಖೆಗೂ ಮೀನಮೇಷ: ಸ್ಮಶಾನ ಸ್ಥಳ ಅತಿಕ್ರಮಿಸಿದ ಕುರಿತು ಜಿಲ್ಲಾಧಿಕಾರಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಕಚೇರಿಗೆ ದೂರು ನೀಡಿ ತನಿಖೆ ನಡೆಸುವಂತೆ ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮನವಿ ಮಾಡಿದ್ದಾರೆ. 2022 ರಿಂದ ಎರಡ್ಮೂರು ಸಲ ಪಪಂ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದಾರೆ.
“ಮನವಿಗೆ ಕ್ಯಾರೆ ಎನ್ನದೆ ಕಾಟಾಚಾರಕ್ಕೆ ಪಪಂನವರು ಅತಿಕ್ರಮಣಕಾರರಿಗೆ 2022 ರಲ್ಲಿ ನೋಟಿಸ್ ನೀಡಿದ್ದು ಹೊರತುಪಡಿಸಿದರೆ ಬೇರೆ ಏನೂ ಕ್ರಮ ಕೈಗೊಂಡಿಲ್ಲ,” ಎಂದು ಶಿವಾನಂದ ವಾಲಿ” ತಿಳಿಸಿರುತ್ತಾರೆ
–ಕೋಟ್–
“ಹಿಂದುಳಿದ,ದಲಿತ ಸಮುದಾಯದವರು ಸತ್ತರೆ ಅಂತ್ಯಸಂಸ್ಕಾರ ಮಾಡಲು ಸ್ಥಳವಿಲ್ಲದ ಕಾರಣ ಅವರ ಮನೆ ಮುಂದೆಯೇ ತಮ್ಮವರ ಶವಗಳನ್ನು ಹೂಳಿದ ಘಟನೆ ಇನ್ನೂ ಮಾಸಿಲ್ಲ. ಇಷ್ಟಾದರೂ ಪಪಂ ಹಾಗೂ ಕಂದಾಯ ಇಲಾಖೆಯವರು ಸ್ಮಶಾನ ಸ್ಥಳ ಅತಿಕ್ರಮಿಸಿ ಕೊಂಡವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಲೋಕಾಯುಕ್ತರಿಗೆ ದೂರು ನೀಡಿರುವೆ.”
–ಶಿವಾನಂದ ವಾಲಿ ಯುವಜನ ಸೇನೆ ರಾಜ್ಯಾಧ್ಯಕ್ಷರು.
ವರದಿ : ಶಿವು ರಾಠೋಡ







