ತಿರುವನಂತಪುರಂ: ಮಳೆಯ ರುದ್ರ ನರ್ತನಕ್ಕೆ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿದ್ದು, ಕಂಡು ಕೇಳರಿಯದ ದುರಂತ ವಯನಾಡಿನಲ್ಲಿ ಸಂಭವಿಸಿದೆ.
ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ (Wayanad Landslide). 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಮಧ್ಯೆ ಇಂದೂ (ಜುಲೈ 31) ವಯನಾಡು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಆತಂಕ ಮೂಡಿಸಿದೆ.
ಭಾರತ ಹವಾಮಾನ ಇಲಾಖೆ (India Meteorological Department) ಬುಧವಾರವೂ ವಯನಾಡು ಸೇರಿದಂತೆ ಉತ್ತರ ಕೇರಳದ ವಿವಿಧೆಡೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ.
ಜುಲೈ 31 ಮತ್ತು ಆಗಸ್ಟ್ 1ರಂದು ವಯನಾಡು ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 2ರಂದುಈ ಭಾಗಗಳಲ್ಲಿ ಮಳೆಯ ಪ್ರಮಾನ ಇನ್ನೂ ಹೆಚ್ಚಾಗಲಿದೆ. ಇಂದು ಕೇರಳದಲ್ಲಿ ಗಂಟೆಗೆ 30-40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.