ಮುದ್ದೇಬಿಹಾಳ : ಭೂಮಿಯ ಮೇಳೆ ಮನುಷ್ಯ ಸ್ವಾರ್ಥವಿಲ್ಲದ ಜೀವನ ನಡೆಸಬೇಕು. ಈ ಭೂಮಿಯ ಮೇಲೆ ಮನುಷ್ಯನಿಗೆ ಇರುವಷ್ಟೇ ಹಕ್ಕು ಪ್ರಾಣಿ, ಪಕ್ಷಿಗಳಿಗೂ ಇದೆ ಎಂಬುದನ್ನು ಅರಿತುಕೊಂಡು ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ಹುಡ್ಕೋದ ಹಸಿರು ತೋರಣ ಉದ್ಯಾನವನದಲ್ಲಿ ಗುರುವಾರ ಹಸಿರು ತೋರಣ ಗೆಳೆಯರ ಬಳಗ, ಅರಣ್ಯ ಇಲಾಖೆ, ಪುರಸಭೆ ಮತ್ತು ತಾಲ್ಲೂಕು ಆಡಳಿತದ ಸಂಯುಕ್ತಾಶ್ರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡ ಘಟನೆ ಕಣ್ಣೆದುರಿಗೇ ಇದೆ. ದೊಡ್ಡ ನಗರಗಳಲ್ಲಿ ಆಮ್ಲಜನಕವನ್ನು ಹಣ ಕೊಟ್ಟು ಕೊಳ್ಳುವ ಪರಿಸ್ಥಿತಿ ಇದೆ ಎಂದು ನಾವು ಅರಿಯಬೇಕು ಎಂದರು.
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಬಹಳಷ್ಟು ಸಂಘಟಿತರಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಇದು ಜಿಲ್ಲೆಗೇ ಮಾದರಿಯಾಗಿದೆ ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಿರೀಶ ಆಲಕುಡೆ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಕೆಬಿಜೆನ್ನೆಲ್ ವಿಭಾಗದ ಉಪ ಅರಣ್ಯಾಧಿಕಾರಿ ಶ್ರೀಕಾಂತ ಘೋರ್ಪಡೆ,ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ ಇದ್ದರು.
“ಪರಿಸರ ರಕ್ಷಕ” ಪ್ರಶಸ್ತಿಗೆ ಆಯ್ಕೆಯಾದ ಶರಣಪ್ಪ ನಾಗಾವಿ, ಅನಿಲಕುಮಾರ ಚಲವಾದಿ, ಶರಣಬಸಪ್ಪ ನೆಲವಾಸಿ, ಸಿದ್ದನಗೌಡ ಲಿಂಗದಳ್ಳಿ ಅವರನ್ನು ಸನ್ಮಾನಿಸಲಾಯಿತು. ಹಸಿರು ತೋರಣ, ಮನೆಯಲ್ಲಿ ಮಹಾಮನೆ, ಪುರಸಭೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಪ್ರೇರಣಾ ಬೆಳಗಲ್ಲ ಪರಿಸರ ಗೀತೆ ಹಾಡಿದಳು. ಅಮರೇಶ ಗೂಳಿ ಸ್ವಾಗತಿಸಿದರು. ವೀರೇಶ ಢವಳಗಿ ಸನ್ಮಾನಿತರನ್ನು ಪರಿಚಯಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ರವಿ ಗೂಳಿ ವಂದಿಸಿದರು.