ಮುದ್ದೇಬಿಹಾಳ : ಹಿಂದೆ ತೊಗರಿ ಬೆಳೆ ಹಾನಿಯಾಗಿದೆ ಎಂದು ರೈತರನ್ನು ಗುಂಪುಕಟ್ಟಿಕೊಂಡು ಪ್ರಚಾರದ ಗೀಳಿಗಾಗಿ ಹೋರಾಟ ನಡೆಸಿ ಸರ್ಕಾರ ಪರಿಹಾರ ಕೊಡದಿದ್ದರೆ ತಾವೇ ಪರಿಹಾರ ಕೊಡುವುದಾಗಿ ಹೇಳಿ ರೈತರನ್ನು ತಪ್ಪು ದಾರಿಗೆ ಎಳೆದಿದ್ದೀರಿ. ಇಂತಹ ಬಹಳ ಕೀಳು ಮಟ್ಟದ ರಾಜಕಾರಣ ಮಾಡಬೇಡಿ.ನಿಮಗೆ ಜನರು ಐದು ವರ್ಷ ವಿಶ್ರಾಂತಿ ನೀಡಿದ್ದಾರೆ. ಸುಮ್ಮನೆ ಮನೆಯಲ್ಲಿದ್ದು ರೆಸ್ಟ್ ಮಾಡಿ ಎಂದು ಶಾಸಕ ಸಿ. ಎಸ್. ನಾಡಗೌಡ ಅವರು ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಅವರ ಹೆಸರು ಪ್ರಸ್ತಾಪಿಸದೇ ಟಾಂಗ್ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮಾಜಿ ಶಾಸಕರು ಮಾಡುತ್ತಿರುವುದೆಲ್ಲ ಪ್ರಚಾರಕ್ಕೋಸ್ಕರ. ರೈತರಿಗೆ ಪರಿಹಾರ ನಾನು ನಮ್ಮ ಮನೆಯಿಂದ ಕೊಡುವುದಿಲ್ಲ. ನೀವು ಹಿಂದೆ ದಳದಲ್ಲಿ, ಒಮ್ಮೆ ನಮ್ಮ ಪಕ್ಷದಲ್ಲಿ, ಈಗ ಬಿಜೆಪಿಯಲ್ಲಿ ಶಾಸಕರಾಗಿದ್ದವರು.ಇಂತಹ ಸನ್ನಿವೇಶಗಳಲ್ಲಿ ಸರ್ಕಾರದಿಂದ ಎನ್.ಡಿ.ಆರ್ಎಫ್/ ಎಸ್.ಡಿ.ಆರ್.ಎಫ್ ನಿಯಮಗಳ ಅನ್ವಯ ಪರಿಹಾರ ಕೊಡಲಾಗುತ್ತದೆ ಎಂಬುದು ಗೊತ್ತಿಲ್ಲದ ವಿಷಯವೇನಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ 2013-18ರ ಅವಧಿಯಲ್ಲಿ ಅತೀವೃಷ್ಟಿಯಿಂದ ಹಾನಿ ಉಂಟಾಗಿದ್ದ ತೋಟಗಾರಿಕೆ ಬೆಳೆ ದ್ರಾಕ್ಷಿ ಗೆ ಹೆಕ್ಟೇರ್ಗೆ 30 ಸಾವಿರ ರೂ. ಪರಿಹಾರ ಕೊಡಲಾಗಿದೆ. ಬೆಳೆಹಾನಿ ಸಮೀಕ್ಷೆ ಆದ ತಕ್ಷಣ ಪರಿಹಾರ ನೀಡಲಾಗಿತ್ತು. ಇದರಲ್ಲಿ ರಾಜಕಾರಣ ಮಾಡುವುದೇನಿದೆ? ಕೃಷಿ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಾಲ್ಕು ಸಲ ಸಭೆ ಮಾಡಿದ್ದೇನೆ. ತಾಲ್ಲೂಕು ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ವಿಮೆ ಮಾಡಿದ ರೈತರಿಗೆ ವಿಮಾ ಕಂಪನಿಯ ಮೂಲಕ ಪರಿಹಾರ ದೊರೆಯುತ್ತದೆ. ಆದರೆ, ವಿಮೆ ಮಾಡದ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಲು ಸಚಿವ ಸಂಪುಟದಲ್ಲಿ ಸೂಕ್ತ ಪರಿಹಾರ ನೀಡಲು ಸಿದ್ದರಾಮಯ್ಯನವರು ತೀರ್ಮಾನ ಕೈಗೊಳ್ಳಲಿದ್ದಾರೆ. ಯಾರಿಗೂ ರೈತನನ್ನು ಕಡೆಗಣಿಸಬೇಕು ಎಂಬ ಉದ್ದೇಶ ಇರುವುದಿಲ್ಲ. ಇದನ್ನು ರಾಜಕಾರಣದ ವಿಷಯವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ರೈತನ ಜಮೀನಿನಲ್ಲಿ ಬೆಳೆದ ಬೆಳೆ ಒಂದು ಎಕರೆಗೆ ಶೇ.33ರಷ್ಟು ಹಾನಿಯನ್ನು ಅಂದಾಜು ಲೆಕ್ಕ ಹಾಕಿ ಪರಿಹಾರ ನೀಡಲಾಗುತ್ತದೆ. ಸರ್ಕಾರದಿಂದ ಒಬ್ಬ ರೈತರಿಗೆ 4.38 ಎಕರೆಗೆ ಸಿಮೀತ ಇರುವಂತೆ ಪರಿಹಾರ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚು ಹಾನಿ ಸಂಭವಿಸಿದರೆ ಅದಕ್ಕೆ ಪರಿಹಾರ ನೀಡಲಾಗುವುದಿಲ್ಲ. ಸರ್ಕಾರದ ಮಾರ್ಗಸೂಚಿಯನ್ವಯವೇ ಜಂಟಿ ಸಮೀಕ್ಷೆ ನಡೆಸಿ ಜಿಪಿಎಸ್ ಫೋಟೋ ಪಡೆದುಕೊಂಡು ರೈತರ ಪಟ್ಟಿ ಲಗತ್ತಿಸಿದ್ದೇವೆ ಎಂದು ತಿಳಿಸಿದರು.
ಒಂದನೆ ಹಂತದ ಸಮೀಕ್ಷೆಯ ಪಟ್ಟಿಯನ್ನು ಪಂಚಾಯಿತಿಯಲ್ಲಿ ಲಗತ್ತಿಸಿದ್ದು ಅದಕ್ಕೆ ಏಳು ದಿನ ಕಾಲಾವಕಾಶ ನೀಡಲಾಗಿತ್ತು. ಈಗ ಸಮೀಕ್ಷೆ ಪ್ರಗತಿಯಲ್ಲಿದ್ದು ಎರಡನೆ ಪಟ್ಟಿಯನ್ನು ಲಗತ್ತಿಸಿದಾಗ ಅದಕ್ಕೆ ಆಕ್ಷೇಪಣೆಗೆ ಏಳು ದಿನಗಳ ಕಾಲಾವಕಾಶ ರೈತರಿಗೆ ನೀಡಲಾಗುತ್ತದೆ ಎಂದು ಹೇಳಿದರು.
ಬೆಳೆಹಾನಿ ಜಂಟಿ ಸಮೀಕ್ಷೆಗೆ ಅಧಿಕಾರಿಗಳ ಕೊರತೆ ಇರುವುದು ನಿಜ. ಸದ್ಯಕ್ಕೆ ಸರ್ಕಾರದಿಂದ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆದಿದ್ದು ಅದು ಮುಗಿದ ಬಳಿಕ ಇನ್ನಷ್ಟು ಸಿಬ್ಬಂದಿಯನ್ನು ಬೆಳೆಹಾನಿ ಸಮೀಕ್ಷೆಗೆ ನಿಯೋಜಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ತಹಶೀಲ್ದಾರ್ ಕೀರ್ತಿ ಚಾಲಕ, ಕೃಷಿ ಇಲಾಖೆಯ ಎಡಿ ಎಸ್.ಡಿ.ಭಾವಿಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ, ಗೋವಿಂದರೆಡ್ಡಿ ಮೆದಕಿನಾಳ,ಮುಖಂಡ ಬುಡ್ಡೇಸಾಬ ಚಪ್ಪರಬಂದ ಇತರರು ಇದ್ದರು.
ಒಂದನೇ ಹಂತದ ಸಮೀಕ್ಷೆ ನಡೆಸಲಾಗಿದೆ. ಇನ್ನೊಂದು ಹಂತದಲ್ಲೂ ಸಮೀಕ್ಷೆ ನಡೆಸಲಾಗುತ್ತದೆ. ಮಳೆ ಇನ್ನೂ ಮುಗದಿಲ್ಲ. ರೈತರು ಆತಂಕಪಡಬೇಕಿಲ್ಲ. ರೈತರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ. ಪ್ರತಿಹೊಲಕ್ಕೆ ಹೋಗಿ ಅಧಿಕಾರಿಗಳು ಸಮೀಕ್ಷೆ ಮಾಡಲು ಆಗುವುದಿಲ್ಲ. ಕೆಲವೊಂದಿಷ್ಟು ಜಮೀನುಗಳನ್ನು ಆಯ್ಕೆ ಮಾಡಿ ಹಾನಿ ಅಂದಾಜನ್ನು ಮೌಲ್ಯ ಮಾಡಲಾಗುತ್ತದೆ. ಅಂತಹ ರೈತರ ಪಟ್ಟಿಯನ್ನು ಪಂಚಾಯಿತಿಯಲ್ಲಿ ಲಗತ್ತಿಸಿದಾಗ ಇನ್ನುಳಿದ ರೈತರು ತಮ್ಮ ಹೆಸರು ಬಂದಿಲ್ಲದಿರುವುದನ್ನು ಗಮನಿಸಿ ತಮ್ಮ ಬೆಳೆ ಹಾನಿಯಾದ ಬಗ್ಗೆ ಅರ್ಜಿಯನ್ನು ನೀಡಬೇಕು. ಅದಕ್ಕೆ ಕಾಲಾವಕಾಶ ಕಲ್ಪಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಡಂಗೂರ ಸಾರಲು ತಿಳಿಸಲಾಗಿದೆ.
—ಸಿ.ಎಸ್.ನಾಡಗೌಡ,ಶಾಸಕ
ಮಾನವೀಯತೆಯ ಸಂವೇದನೆಯ ಗುಣಗಳ ಬಗ್ಗೆ ನಿಮ್ಮಿಂದ ನಾನು ಕಲಿಯಬೇಕಾಗಿಲ್ಲ. ನಮ್ಮ ಮನೆತನದ ಸಂಸ್ಕಾರದಿಂದ ನನಗೆ ಹುಟ್ಟಿನಿಂದಲೇ ಆ ಗುಣಗಳು ಬಂದಿವೆ. ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೋಗಲು ಆಗಿರಲಿಲ್ಲ. ಆದರೆ, ಆ ಕುಟುಂಬಕ್ಕೆ ನೆರವು ದೊರೆಯಬೇಕಾದ ನಿಟ್ಟಿನಲ್ಲಿ ಕೆಲಸಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಅದನ್ನು ರಾಜಕೀಯಕರಣಗೊಳಿಸುವ ಅಗತ್ಯವಿಲ್ಲ. ಮಾನವೀಯತೆಯ ಕುರಿತು ನಿಮ್ಮಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ಮಾಜಿ ಶಾಸಕ ನಡಹಳ್ಳಿ ಅವರ ಹೆಸರು ಪ್ರಸ್ತಾಪ ಮಾಡದೇ ನಾಡಗೌಡರು ನಡಹಳ್ಳಿಯವರ ಟೀಕೆಗೆ ಪ್ರತ್ಯುತ್ತರ ನೀಡಿದರು.