ಬೀಳಗಿ: ಸತತವಾಗಿ ಸುರಿದ ಮಳೆಯಿಂದಾಗಿ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ಬೀಜ, ರಸಗೊಬ್ಬರ, ಕೀಟನಾಶಕ ಔಷದ, ಕಳೆ ತೆಗೆಯಲು ಕೃಷಿ ಕಾರ್ಮಿಕರಿಗೆ ಎಕರೆಗೆ ಈರುಳ್ಳಿ ಬೀಜ (onion price) ಬಿತ್ತನೆಗೆ ಕನಿಷ್ಟ ನಾಲವತ್ತು ಸಾವಿರ ರೂಪಾಯಿಗಳು ಖುರ್ಚು ಮಾಡಿದ್ದು, ಆ ಬೆಳೆಗಳು ನೀರು ಪಾಲಾಗಿದ್ದು, ಕೈ ಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತನು ಕಷ್ಟದಲ್ಲಿ ಸಿಲುಕಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರ ನ್ಯಾಯಯುತ ಪರಿಹಾರವನ್ನು ಶೀಘ್ರದಲ್ಲಿ ನೀಡಬೇಕೆಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಚ ವಿರುಪಾಕ್ಷಯ್ಯ ಪ.ಹಿರೇಮಠ ಆಗ್ರಹಪಡಿಸಿದರು.
ಅವರು ಬೀಳಗಿ ಪಟ್ಟಣದಲ್ಲಿ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ಘಟಕ ಹಾಗೂ ಬೀಳಗಿ ತಾಲೂಕು ಘಟಕದ ಸಹಯೋಗದಲ್ಲಿ ಈರುಳ್ಳಿ ಬೆಳೆಗಾರರಿಗೆ ನ್ಯಾಯಯುತ ಲಾಭದಾಯಕ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ತಾಲೂಕು ಆಡಳಿತ ಸೌಧದ ಮುಂದೆ ರೈತರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಅಳಿದುಳಿದ ಈರುಳ್ಳಿ ಬೆಳೆಯನ್ನು ಮಾರಾಟ ಮಾಡಲು ಮಾರ್ಕೆಟಿಗೆ ಹೋದರೆ ಅದರ ದರ ಸಂಪೂರ್ಣ ಕುಸಿದಿದ್ದು ಬೆಳೆಯನ್ನು ಬೆಳೆಯಲು ಹಾಕಿದ ಖರ್ಚು ಬಾರದೇ ಇರುವದರಿಂದ ರೈತರು ಹಣಕಾಸು ಸಂಸ್ಥೆಗಳಿಂದ ಹಾಗೂ ಲೇವಾದೇವಿಗಾರರಿಂದ ಪಡೆದ ಸಾಲ ತೀರಿಸುವದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದು, ಸರಕಾರ ನ್ಯಾಯಯುತ ಲಾಭದಾಯಕ ಬೆಂಬಲ ಬೆಲೆ ನೀಡಬೇಕು ಒತ್ತಾಯಿಸಿದರು.
ಉ.ಪ್ರಾ. ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ ಬೆಳೆ ವಿಮೆ ಕಟ್ಟಿದ ರೈತರಿಗೆ ವಿಮಾ ಕಂಪನಿ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯವರು ಸರಿಯಾಗಿ ಪರಿಶೀಲನೆ ನಡೆಸದೇ ಇರುವದರಿಂದ ರೈತರು ವಿಮಾ ಕಂಪನಿ ನೀಡುವ ಕ್ಲೇಮ್ ದಿಂದ ವಂಚಿತರಾಗುತ್ತಿದ್ದು ಸರಕಾರ ರೈತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿ ಗುರು ಅನಗವಾಡಿ, ಜಿಲ್ಲಾ ಕೋಶ್ಯಾಧ್ಯಕ್ಷ ಮುದುಕಪ್ಪ ವಡವಾಣಿ, ಜಿಲ್ಲಾ ಮಹಿಳಾ ಪ್ರಮುಖರಾದ ರೇಣುಕಾ ಹುಲ್ಲಿಕೇರಿ, ರೈತ ಮುಖಂಡರಾದ ಶಿವನಗೌಡ ಪಾಟೀಲ, ಡೊಂಗ್ರಿಸಾಬ ನದಾಪ, ಚಂದ್ರಶೇಖರ ಕಾಖಂಡಕಿ ಬಸವಂತ ಸಂಕಾನಟ್ಟಿ, ಸುರೇಶ ಹೂಗಾರ,ಮಂಜು ಬಾವಿ, ಹಣಮಂತ ದೊರೆಗೊಳ, ಶಾಂತಯ್ಯ ಪಂಚಗಟ್ಟಿಮಠ, ಲಕ್ಷ್ಮಣ್ಣ ಸವನಾಳ, ಯಲ್ಲಾಲಿಂಗ ಕುರಿ, ಸಿದ್ದಪ್ಪ ಕೂಗಟಿ ಇದ್ದರು.







