ಕುಳಗೇರಿ ಕ್ರಾಸ್: ಮೂರು ವರ್ಷದ ಮಗು ಜೊತೆ ದೇವರ ದರ್ಶನಕ್ಕೆ ಹೊರಟಿದ್ದ ತಂದೆ ರತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವಿನ್ನಪ್ಪಿದ ಘಟನೆ ಶನಿವಾರ ಬೆಳಿಗ್ಗೆ ಗ್ರಾಮದ ಕೆಇಬಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಭವಿಸಿದೆ.
ಎಸ್ಎನ್ ತಿಮ್ಮಾಪೂರ ಗ್ರಾಮದ ನಿವಾಸಿ ಬಸವರಾಜ ವಿಠಲ ಬಂಡಿವಡ್ಡರ (27) ಹಾಗೂ ಆತನ ಐದು ವರ್ಷದ ಮಗಳು ಸಂಜನಾ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತನ್ನ ಮೂರು ವರ್ಷದ ಮಗು ಹುಲಿಗೆಮ್ಮಳನ್ನು ಬೈಕ್ ಮುಂಬಾಗದಲ್ಲಿ ಕೂಡ್ರಿಸಿಕೊಂಡು ಹಳಗೇರಿ ಗ್ರಾಮದ ಹನಮಂತ ದೇವರ ದರ್ಶನಕ್ಕೆ ಹೊರಟಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಾಂತೇಶ್ವರ್ ಜಿದ್ದಿ, ಡಿಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ, ಪಿಎಸ್ಐ ವಿಠಲ ನಾಯಿಕ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ದೇವರೆ ಈ ಸಾವು ನ್ಯಾಯವೇ: ದೇವರು ಇದ್ದಾನಾ…? ಅವನಿಗೆ ಕರುಣೆ ಇಲ್ಲವೇ…? ದೇವರು ಇರುವುದು ನೀಜವೇ…? ಇಂದು ನಡೆದ ಅಪಘಾತ ಸ್ಥಳದಲ್ಲಿ ಇಂತ ಪ್ರಶ್ನೇಗಳು ಸಹಜವಾಗಿ ಕೇಳಿಬಂದವು. ದೇವರ ದರ್ಶನಕ್ಕೆ ಹೊರಟವರಿಗೆ ಯಾಕೆ ಈ ಶಿಕ್ಷೆ…? ಏನೂ ಅರಿಯದ ಮೂರು ವರ್ಷದ ಈ ಪುಟ್ಟ ಕಂದಮ್ಮ ಮಾಡಿರುವ ತಪ್ಪಾದರೂ ಏನು…? ಕರುಣೆ ಬರಲಿಲ್ಲವೇ ಎಂದು ಹೆತ್ತವರ ಗೋಳಾಟ ಆಕ್ರಂದನ ಮುಗಿಲು ಮುಟ್ಟಿತ್ತು.
ಅಂಬ್ಯೂಲೆನ್ಸ್ ವಾಹನಕ್ಕಾಗಿ ಪರದಾಟ: ಗ್ರಾಮದಲ್ಲಿ ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಸವದತ್ತಿ-ಕೂಡಲಸಂಗಮ ರಾಜ್ಯ ಹೆದ್ದಾರಿ. ಹೀಗೆ ಇಕ್ಕಟ್ಟಾದ ಹೆದ್ದಾರಿಗಳಲ್ಲಿ ನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಅಪಘಾತಗೊಂಡ ಜನರು ಅಂಬ್ಯೂಲೆನ್ಸ್ ಇಲ್ಲದೆ ಸಾವು ಬದುಕಿನ ಮದ್ಯ ಹೋರಾಡುವಂತಾಗಿದೆ.
ಸರಿಯಾದ ಸಮಯಕ್ಕೆ ಅಂಬ್ಯೂಲೆನ್ಸ್ ಬಾರದೆ ಅದೆಷ್ಟೋ ಪ್ರಾಣಪಕ್ಷಿ ಹಾರಿ ಹೋಗಿವೆ. ಸದ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಬ್ಯೂಲೆನ್ಸ್ ಬೇಕೇ ಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು ಅಪಘಾತಗೊಂಡು ಒದ್ದಾಡುವ ಜೀವಗಳನ್ನ ಉಳಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಬಾದಾಮಿ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿಯವರು ಆದಷ್ಟು ಬೇಗ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಬ್ಯೂಲೆನ್ಸ್ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.