ಮುದ್ದೇಬಿಹಾಳ : ಹುನಗುಂದ ತಾಲ್ಲೂಕಿನಿಂದ ತಂಗಡಗಿ ಮುಖಾಂತರ ತಾಳಿಕೋಟಿಯವರೆಗೆ ನಿರ್ಮಿಸಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಟೋಲ್ ಸಂಗ್ರಹಿಸುತ್ತಿರುವ ಕ್ರಮ ಕಾನೂನು ಬಾಹಿರವಾಗಿದ್ದು ಬಾಕಿ ಉಳಿದಿರುವ ರಸ್ತೆಯ ನಿರ್ಮಾಣಕ್ಕೆ ಇರುವ ಸಮಸ್ಯೆಯನ್ನು ಎರಡು ವಾರದಲ್ಲಿ ಸರಿಪಡಿಸಿ ಕಾಮಗಾರಿ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ತಂಗಡಗಿ ಗ್ರಾಮದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಯುವ ಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿಗೆ ಕೆ.ಆರ್.ಡಿ.ಎಲ್ ಅಧೀಕ್ಷಕ ಎಂಜೀನಿಯರ್ಗೆ ಮನವಿ ಪತ್ರ ನೀಡಿರುವ ಅವರು, ತಂಗಡಗಿ ಗ್ರಾಮದಲ್ಲಿರುವ ಪೆಟ್ರೋಲ್ ಬಂಕ್ ತಿರುವಿಗೆ ಹೊಂದಿಕೊಂಡು ರಸ್ತೆಯ ಅಕ್ಕಪಕ್ಕದಲ್ಲಿ ಬಹಳ ವರ್ಷಗಳಿಂದ ಮನೆಗಳನ್ನು ಕಟ್ಟಿಸಿಕೊಂಡು ಕೆಲವು ನಿವಾಸಿಗಳು ಜೀವನ ನಡೆಸುತ್ತಿದ್ದರು. ಸದರಿ ಮನೆಗಳು ರಾಜ್ಯ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುತ್ತಿದ್ದು ಈ ಮನೆಗಳಿಗೆ ಈಗಾಗಲೇ ಸರ್ಕಾರದಿಂದ ಪರಿಹಾರವನ್ನು ಕೂಡ ಒದಗಿಸಲಾಗಿದೆ ಎಂಬ ಮಾಹಿತಿ ಇದೆ. ಹೀಗಿದ್ದರೂ ಕೂಡಾ ರಸ್ತೆಯಲ್ಲಿರುವ ಮನೆಗಳನ್ನು ತೆರವುಗೊಳಿಸದೇ ಜನರ ಜೀವನದ ಜೊತೆ ಕೆಲವು ಪ್ರಭಾವಿಗಳು ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಭಾಗದಲ್ಲಿ ಡಾಂಬರನ್ನೂ ಕೂಡಾ ಹಾಕದೇ ಹಾಗೆಯೇ ಬಿಡಲಾಗಿದ್ದು ಈಗ ನಿರ್ಮಿಸಿರುವ ರಸ್ತೆಯ ಎರಡು ಬದಿಯ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಅವುಗಳು ಕೂಡಾ ಮಳೆ ನೀರು ತುಂಬಿ ಚರಂಡಿಯ ಕೊಳಚೆ ನೀರು ಊರಿನ ಒಳಗೆ ಹರಿಯುತ್ತಿದೆ. ಇದರಿಂದ ಗಲೀಜು ವಾತಾವರಣ ನಿರ್ಮಾಣವಾಗಿ ಹಲವಾರು ರೋಗ ರುಜಿನಗಳಿಗೆ ಆಸ್ಪದ ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಹಿಂದೆಯೇ ತಮ್ಮ ಕೇಂದ್ರ ಕಛೇರಿಗೆ ಬಂದು ಮನವಿ ಸಲ್ಲಿಸಿದರೂ ಕೂಡಾ,ಈವರೆಗೂ ರಸ್ತೆ ಮೇಲಿರುವ ಮನೆಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಿಲ್ಲ. ಅಪೂರ್ಣಗೊಂಡಿರುವ ರಸ್ತೆಯ ಸದರಿ ಜಾಗದಲ್ಲಿ ರಸ್ತೆ ಅತ್ಯಂತ ಕಿರಿಯದಾಗಿರುವುದರಿಂದ ಈ ರಸ್ತೆಯ ಮುಖಾಂತರ ಬಸ್ಸುಗಳು, ಕಬ್ಬು ತುಂಬಿದ ಲಾರಿಗಳು ಎದುರು ಬದುರಾಗಿ ಬಂದರೆ ಜೀವವೇ ಹೋಗಿ ಬಂದತಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ನಿರಂತರವಾಗಿ ಸಂಭವಿಸುತ್ತಲೇ ಇರುತ್ತವೆ. ಇಲ್ಲಿಯ ಜನಕ್ಕೆ ದಿನನಿತ್ಯವೂ ಸಮಸ್ಯೆಯಾಗಿ ಪರಿಣಮಿಸಿದೆ. ರಸ್ತೆ ಪೂರ್ಣಗೊಳ್ಳುವವರೆಗೂ ಟೋಲ್ ಸುಂಕ ವಸೂಲಾತಿ ಮಾಡುವುದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದಲೂ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿದ್ದಾರೆ.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡಿದರೂ ಇಲ್ಲಿಯ ಸಮಸ್ಯೆ ಪರಿಹರಿಸದೇ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸುವುದಲ್ಲದೇ ಎರಡು ವಾರದಲ್ಲಿ ಪರಿಹಾರ ಪಡೆದ ಸದರಿ ಮನೆಗಳನ್ನು ತೆರವುಗೊಳಿಸಿ. ಎರಡು ಬದಿಯ ಚರಂಡಿಯನ್ನು ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಸದರಿ ಸಮಸ್ಯೆ ಇರುವ ಜಾಗದಲ್ಲಿಯೇ ಗ್ರಾಮಸ್ಥರು ಹಾಗೂ ವಿವಿಧ ಕನ್ನಡಪರ ದಲಿತ ಪರ ಪ್ರಗತಿಪರ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.