ಸ್ನೇಹಿತರ ಬಳಗದಿಂದ ಸಮಾಜಮುಖಿ ಕಾರ್ಯಗಳಾಗಲಿ-ಹಂಚಲಿ
ಮುದ್ದೇಬಿಹಾಳ : ಸ್ನೇಹಿತರ ಬಳಗಗಳು ಕೇವಲ ವೈಯಕ್ತಿಕ ಸಮಸ್ಯೆಗಳಿಗೆ ಬಳಕೆಯಾಗದೇ ಸಮಾಜಮುಖಿ ಕಾರ್ಯಗಳಿಗೂ ಕೈ ಜೋಡಿಸುವ ಕಾರ್ಯ ಆಗಬೇಕು ಎಂದು ಬ.ಬಾಗೇವಾಡಿ ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕ ಅಶೋಕ ಹಂಚಲಿ ಹೇಳಿದರು.
ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಸ್ನೇಹ ಸಂಗಮ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ,1990-91ನೇ ಸಾಲಿನ ಎಸ್.ಎಸ್.ಎಲ್.ಸಿ ಗೆಳೆಯರ 50ನೇ ವರ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ನೆರವು ನೀಡುವ ಕಾರ್ಯಕ್ಕೆ ಮುಂದಾದಲ್ಲಿ ದೂರದಲ್ಲಿ ಇರುವವ ಸ್ನೇಹಿತರು ಅಂತಹದ್ದಕ್ಕೆ ಬೆಂಬಲಿಸುತ್ತಾರೆ. ಗೆಳೆಯರು ಸೇರಿದ್ದಲ್ಲಿ ಸ್ವರ್ಗ ನಿರ್ಮಾಣ ಆಗುತ್ತದೆ. ಸ್ನೇಹಕ್ಕೆ ಕೃಷ್ಣ ಕುಚೇಲರ ಗೆಳೆತನ ಮಾದರಿಯಾದದ್ದು ಎಂದರು.
ಸಾನಿಧ್ಯ ವಹಿಸಿದ್ದ ಹಿರೂರು ಅನ್ನದಾನೇಶ್ವರ ಹಿರೇಮಠದ ಜಯಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಗೆಳೆಯರು ಎಂದರೆ ಅಲ್ಲಿ ನಗು, ಆತ್ಮೀಯ, ಸುಖ, ದುಃಖದ ಭಾವ ಸೇರಿ ಎಲ್ಲವೂ ಇದೆ. ಆಗಿನ ಶಾಲೆಯಲ್ಲಿ ಬಾಂಧವ್ಯ ಇತ್ತು. ಇಂದಿನ ಶಾಲೆಯಲ್ಲಿ ಆ ಬಾಂಧವ್ಯ ಇಲ್ಲ. ಕಷ್ಟದಲ್ಲಿ ಇರುತ್ತೇನೆ ಎಂದಾಗಲಷ್ಟೇ ಸಹಾಯ ಮಾಡುತ್ತೇನೆ ಎನ್ನುವುದು ಗೆಳೆತನ ಅಲ್ಲ. ದುಃಖ ನನಗೆ ಇರಲಿ, ನೀನು ಆರೋಗ್ಯವಾಗಿರು ಎಂದು ಹೇಳುವುದು ನಿಜವಾದ ಸ್ನೇಹ ಎಂದರು.
ಗೆಳೆಯರ ಬಳಗದ ನೂತನ ಅಧ್ಯಕ್ಷ ವಿಶ್ವನಾಥ ಪಾಟೀಲ, ನಿಕಟಪೂರ್ವ ಅಧ್ಯಕ್ಷ ಶಿವಾಜಿ ಬಿಜಾಪೂರ, ಉಪಾಧ್ಯಕ್ಷ ಡಾ. ಸಿ. ಕೆ. ಶಿವಯೋಗಿಮಠ, ಪ್ರಧಾನ ಕಾರ್ಯದರ್ಶಿ ನಬಿರಸೂಲ ಮುದ್ನಾಳ, ಸಹ ಕಾರ್ಯದರ್ಶಿ ಮುಸ್ತಾಕ ಬಾಗವಾನ, ಖಜಾಂಚಿ ಆನಂದ ಜಂಬಗಿ, ಲೋಹಿತ ನಾಲತವಾಡ, ಶ್ರೀಶೈಲ ಭಾವಿಕಟ್ಟಿ ಮೊದಲಾದವರು ಇದ್ದರು. ಕಾರ್ಯಕ್ರಮದಲ್ಲಿ ಬೇರೆ ಜಿಲ್ಲೆ, ರಾಜ್ಯ, ವಿದೇಶದಲ್ಲಿರುವ ಗೆಳೆಯರು ಭಾಗವಹಿಸಿದ್ದರು.