ಮುದ್ದೇಬಿಹಾಳ : ಕೊಲ್ಹಾಪೂರದಲ್ಲಿ ಸಂಗೊಳ್ಳಿ ರಾಯಣ್ಣನವರ ಕಂಚಿನ ಮೂರ್ತಿ ಸಿದ್ಧವಾಗಿದ್ದು ಎರಡ್ಮೂರು ದಿನಗಳಲ್ಲಿ ಮುದ್ದೇಬಿಹಾಳಕ್ಕೆ ಕರೆತರುವ ಕೆಲಸ ಮಾಡುತ್ತೇವೆ ಎಂದು ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ. ಎನ್. ಮದರಿ ಹೇಳಿದರು.
ತಾಲ್ಲೂಕು ಕುಂಟೋಜಿಯ ಪರಮಹಂಸ ವಿದ್ಯಾವರಣ್ಯ ಆಶ್ರಮದ ಆವರಣದಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಂಟೋಜಿ, ಕವಡಿಮಟ್ಟಿ ಗ್ರಾಮಗಳಲ್ಲಿ ರಾಯಣ್ಣನ ಮೂರ್ತಿಗಳು ಪ್ರತಿಷ್ಠಾಪನೆಯಾಗಿವೆ. ಆದರೆ, ಮುದ್ದೇಬಿಹಾಳ ನಗರದಲ್ಲಿ ಆದಷ್ಟು ಶೀಘ್ರ ಮೂರ್ತಿ ಅನಾವರಣ ಕಾರ್ಯಕ್ರಮ ಎಲ್ಲ ಸಮಾಜದ ಸಹಕಾರದೊಂದಿಗೆ ದೊಡ್ಡಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸರೂರು ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಮಾತನಾಡಿ, ಶೌರ್ಯ ಸಾಹಸ, ತ್ಯಾಗಕ್ಕೆ ಹೆಸರಾದ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಡೊಳ್ಳು ಬಡಿದು ಕುಣಿದು ಕುಪ್ಪಳಿಸುವ ಬದಲು ಹಾಲುಮತ ಜಾಗೃತಿ ಹೊಂದಬೇಕಾಗಿದೆ. ಸಮಾಜ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಎಂ.ಜಿ.ಎಂ.ಕೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ತ್ಯಾಗ, ಬಲಿದಾನದ ಆದರ್ಶಗಳು ಯುವಕರಲ್ಲಿ ಬರಬೇಕು. ಬೇರೊಂದು ಸಮಾಜದ ಮಹಿಳೆಯನ್ನು ತನ್ನ ತಾಯಿ ಎಂದು ಒಪ್ಪಿಕೊಂಡು ಅವರ ಜೀವ ಕಾಪಾಡಿದ ಹೋರಾಟಗಾರ ರಾಯಣ್ಣ ಎಂದರು.
ತಿಂಥಣಿ ಕನಕ ಗುರುಪೀಠದ ಸಿದ್ದರಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸರೂರ ಹಾಲುಮತ ಗುರುಪೀಠದ ಶಿವಕುಮಾರ ಸ್ವಾಮೀಜಿ, ವಿದ್ಯಾವರಣ್ಯಯೋಗೇಶ್ವರ ಆಶ್ರಮದ ಮುರುಳೀಧರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಮುಖಂಡರಾದ ರುದ್ರಯ್ಯ ಮಠ, ಸಂಗನಗೌಡ ಪಾಟೀಲ, ರವಿ ಜಗಲಿ, ಬಿ.ಬಿ.ಚಿಗರಿ, ಎಸ್.ಎನ್.ಕಂಬಳಿ, ಎಂ.ಎಂ.ನಾಟೇಕರ, ಬಿ.ಎಸ್.ಹೂಗಾರ, ಶ್ರೀಶೈಲ ಸಜ್ಜನ, ಸೋಮಲಿಂಗಪ್ಪ ಹೊಸಮನಿ, ಬಸವರಾಜ ಹುಲಗಣ್ಣಿ, ಬಸವರಾಜ ಬಡಿಗೇರ, ಕಾಳಿದಾಸ ಜಟಗುಣಿ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಮುದ್ದೇಬಿಹಾಳ ಪಟ್ಟಣದಿಂದ ಕುಂಟೋಜಿಯವರೆಗೆ ಅದ್ದೂರಿಯಾಗಿ ರಾಯಣ್ಣನವರ ಮೂರ್ತಿ ಮೆರವಣಿಗೆ ನಡೆಸಲಾಯಿತು.