ಮುದ್ದೇಬಿಹಾಳ : ಕಬ್ಬು ಬೆಳೆದಿರುವ ರೈತರು ಕೇಳುತ್ತಿರುವ ನ್ಯಾಯಯುತ ಬೆಲೆ 3500 ರೂ ಘೋಷಣೆ ಮಾಡದೇ ಸರ್ಕಾರ ಮೌನವಾಗಿದೆ.ಕ್ಷೇತ್ರದ ಶಾಸಕರು ರೈತರಿಂದಲೇ ಶಾಸಕರಾಗಿದ್ದೀರಿ ಅವರಿಗೆ ಬೆಂಬಲ ನೀಡುವ ಕಾರ್ಯ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ತಾಲ್ಲೂಕಿನ ತಂಗಡಗಿ ಸಮೀಪದ ಅಮರಗೋಳ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಬ್ಬಿಗೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ನಡೆದಿರುವ ಮೂರನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ರೈತರ ಋಣದಲ್ಲಿದ್ದೀರಿ.ನೀವು ಬಂದು ಬೆಂಬಲ ಕೊಡುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಎಲ್ಲ ಕಾರ್ಖಾನೆಗಳು ರಾಜಕಾರಣಿಗಳದ್ದೇ ಇವೆ. ರೈತರನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಚಿವ ಶಿವಾನಂದ ಪಾಟೀಲರು ಹಿಂದೆ ಕಬ್ಬಿನ ತೂಕದಲ್ಲಿ ಕಾರ್ಖಾನೆಯವರಿಂದ ಮೋಸವಾಗುತ್ತಿದೆ. ಸರ್ಕಾರದಿಂದಲೇ ತೂಕದ ಯಂತ್ರ ಹಾಕುವುದಾಗಿ ತಿಳಿಸಿದ್ದರು.ಅವರು ಕಬ್ಬಿನ ಕಾರ್ಖಾನೆಗಳ ಮಾಲೀಕರು ಭೇಟಿಯಾದ ನಂತರ ಮೌನಕ್ಕೆ ಶರಣವಾಗಿದ್ದಾರೆ ಎಂದು ದೂರಿದರು.
ಪಕ್ಕದ ನಾಯನೇಗಲಿ ಶುಗರ್ಸ್ನವರು ಟನ್ಗೆ 3200 ಕೊಡುತ್ತಿದ್ದಾರೆ.ಆದರೆ ಇಲ್ಲಿಯ ಬಾಲಾಜಿ ಕಾರ್ಖಾನೆಯವರು 300 ರೂ.ಕಡಿಮೆ ಕೊಡುತ್ತಿದ್ದಾರೆ.ಈ ಭಾಗದ ಕಾರ್ಖಾನೆಗೆ ದೂರ ಊರಿನ ಕಬ್ಬನ್ನು ಮೊದಲು ಸಾಗಿಸುತ್ತಾರೆ. ನಂತರ ಸ್ಥಳೀಯ ರೈತರ ಕಬ್ಬನ್ನು ತರಿಸಿಕೊಳ್ಳುವುದರಿಂದ ಇಳುವರಿ ಕಡಿಮೆ ಬರುತ್ತಿದೆ.ಅದೇ ನಮ್ಮ ಭಾಗದ ಕಬ್ಬು ನಾಯನೇಗಲಿ ಕಾರ್ಖಾನೆಗೆ ಹೋದಾಗ ಕಬ್ಬು ರಿಕವರಿ ಬರುತ್ತಿದೆ. ನಿಮ್ಮಲ್ಲೇಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಭಾಗದ ಕಬ್ಬಿನಲ್ಲಿ ಮೈಸೂರು,ಮಂಡ್ಯ ಜಿಲ್ಲೆಗಳಲ್ಲಿ ಬೆಳೆಯುವ ಕಬ್ಬಿಗಿಂತ ಹೆಚ್ಚಿನ ಸಕ್ಕರೆ ಅಂಶ ಇದೆ.ಗೊಬ್ಬರ ಕೊಡುತ್ತೇವೆ ಎಂದು ಟನ್ 100 ರೂ.ಗೆ ಕಡಿತ ಮಾಡುತ್ತಿದ್ದಾರೆ.ಅವರು ಕೊಡುತ್ತಿರುವುದು ನಕಲಿ ಗೊಬ್ಬರವಾಗಿದೆ.ಸರಕಾರದ ಆದೇಶ ಇಲ್ಲದೇ ನೀವು ಏಕೆ ಗೊಬ್ಬರ ಕೊಡುತ್ತಿದ್ದೀರಿ ಎಂದು ಕೇಳಿದರು.ನಮ್ಮ ರೈತರು ಜಾಗೃತರಿರಬೇಕು.ನಮ್ಮನಮ್ಮಲ್ಲಿಯೇ ಜಗಳ ಹಚ್ಚುವ ಜನ ಇರುತ್ತಾರೆ ಎಂಬುದನ್ನು ಅರಿತುಕೊಂಡುನ್ಯಾಯಯುತ ಬೆಲೆ ದೊರಕುವವರೆಗೂ ನಾನು ಹೋರಾಟದಲ್ಲಿ ಇರುತ್ತೇನೆ ಎಂದು ಹೇಳಿದರು.
ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ರೈತರು ದೇಶಕ್ಕೆ ಅನ್ನ ಕೊಡುವ ಕೆಲಸ ಮಾಡುತ್ತಿದ್ದಾನೆ.ಆತನಿಗೆ ನ್ಯಾಯಯುತವಾಗಿ ದೊರೆಯಬೇಕಾದ ಬೆಲೆ ದೊರಕುವವರೆಗೂ ಶ್ರೀ ಮಠದ ಬೆಂಬಲ ಹೋರಾಟಕ್ಕೆ ಇರಲಿದೆ ಎಂದು ಹೇಳಿದರು.
ಹೋರಾಟವನ್ನುದ್ದೇಶಿಸಿ ಮುಖಂಡರಾದ ಶಿವನಗೌಡ ಬಿರಾದಾರ ಜಲಪೂರ, ಶಿವು ಕನ್ನೊಳ್ಳಿ, ರೈತ ಸಂಘದ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಶಶಿಧರ ಬಂಗಾರಿ ಮತ್ತಿತರರು ಮಾತನಾಡಿದರು.ಮುಖಂಡರಾದ ಸೋಮನಗೌಡ ಕೋಳೂರ,ಬಸನಗೌಡ ಪಾಟೀಲ,ಮೈಬೂಬ ಹಡಲಗೇರಿ,ಗುರುಸಂಗಪ್ಪ ಹಡಲಗೇರಿ, ಸಂಗಪ್ಪ ಬಾಗೇವಾಡಿ,ಮುತ್ತು ಮೇಟಿ,ಶ್ರೀಕಾಂತ ನಾಡಗೌಡ,ರಾಜು ತಿಳಗೂಳ,ಹಣಮಂತ್ರಾಯ ತುಂಬಗಿ,ಅಮರಪ್ಪ ನವಲಿ,ವಿಜಯ ಹಿರೇಗೌಡರ,ಇಮಾಮಸಾಬ ಮುಲ್ಲಾ, ಶಿವರಾಜ ಬಿರಾದಾರ ಪಾಲ್ಗೊಂಡಿದ್ದರು.
3 ಕಿ.ಮೀವರೆಗೂ ಸಾಲುಗಟ್ಟಿ ನಿಂತ ಟ್ರಾಕ್ಟರಗಳು :ಕಬ್ಬು ಕಟಾವು ಕಾರ್ಯ ಹಾಗೂ ನುರಿಸುವ ಕಾರ್ಯ ಬಂದ್ ಮಾಡಿದ್ದರಿಂದ ಅಮರಗೋಳ ಕ್ರಾಸ್ನಿಂದ ಗಂಗೂರ ಕ್ರಾಸ್ದವರೆಗೂ ಕಬ್ಬು ತುಂಬಿದ್ದ ಟ್ರಾಕ್ಟರಗಳು ಸಾಲುಗಟ್ಟಿ ನಿಂತಿದ್ದವು.ಅoದಾಜು 3 ಕಿ.ಮೀ ದೂರದವರೆಗೆ ಟ್ರಾö್ಯಕ್ಟರ್ಗಳು ನಿಂತುಕೊAಡಿದ್ದು ಅದರಲ್ಲಿ ಚಾಲಕರು ಸ್ಥಳದಲ್ಲಿಯೇ ಬುತ್ತಿ ಕಟ್ಟಿಕೊಂಡು ಬಂದು ಊಟ ಮಾಡುತ್ತ ಕೂತಿರುವ ದೃಶ್ಯಗಳು ಕಂಡು ಬಂದವು.ಹೋರಾಟದ ಸ್ಥಳದಲ್ಲಿಯೇ ಕೆಲವು ಮುಖಂಡರು ರೈತರಿಗೆ,ಟ್ರಾö್ಯಕ್ಟರ್ ಚಾಲಕರಿಗೆ ದಾಸೋಹಕ್ಕಾಗಿ ಸಹಾಯ ಮಾಡುತ್ತಿರುವುದು ಕಂಡು ಬಂದಿತು.







