ಮುದ್ದೇಬಿಹಾಳ : ನಾನು ಸೈನ್ಯಕ್ಕೆ ಸೇರುತ್ತಿದ್ದಂತೆ ನನ್ನ ತಾಯಿ ‘ನೀ ಹೆಣ್ಣು ಮಗಳಾಗಿ ಗಡಿ ಕಾಯೂದ ಹೆಂಗ ಮಾಡ್ತಿ ?’ ಅಂದಾಗ ನಾನು “ಅವ್ವಾ ನೀ ತಲಿಕೆಡಿಸ್ಕೋ ಬ್ಯಾಡ ಬೇ, ನಾ ಅಲ್ಲಿ ಹೋಗಿ ನಮ್ಮ ದೇಶಕ್ಕೆ ಕಂಟಕರಾದವ್ರನ್ನ ಸಂಹಾರ ಮಾಡ್ತೀನಿ ಇಲ್ಲ ಇಲ್ಲಾಂದ್ರ ಅದೇ ಧ್ವಜ ಮೈಮ್ಯಾಲೆ ಹೊತ್ಕೊಂಡು ಬರ್ತಿನಿ” ಎಂದು ಬಿ.ಎಸ್.ಎಫ್ಗೆ ಆಯ್ಕೆಯಾಗಿರುವ ತಾಲ್ಲೂಕಿನ ಕಾಶೀಬಾಯಿ ಚಲವಾದಿ ಹೇಳಿದರು.
ಪಟ್ಟಣದ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿಯಿಂದ ಈಚೇಗೆ ಹಮ್ಮಿಕೊಂಡಿದ್ದ ಸನ್ಮಾನಕ್ಕೆÀ ಉತ್ತರವಾಗಿ ಅವರು ಮಾತನಾಡಿದರು.
ಭಾರತೀಯ ಸೈನ್ಯದಲ್ಲಿ ಯುವತಿಯರಿಗೂ ಅವಕಾಶ ಸಿಗುತ್ತಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ.ನಾನು ಹಿಂದುಳಿದ ದಲಿತ ಕುಟುಂಬದಲ್ಲಿ ಜನಿಸಿ ಒಂದನೇ ತರಗತಿಯಿಂದ ಪದವಿ ಶಿಕ್ಷಣದವರೆಗೆ ಸರಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಕಲಿತಿರುವೆ. ನಾನು ದೇಶ ಸೇವೆಯನ್ನು ಆಯ್ದುಕೊಂಡಿದ್ದೇನೆ. ನನಗೆ ದೇಶದ ಗಡಿಕಾಯುವ ಸೌಭಾಗ್ಯ ಸಿಕ್ಕಿದ್ದಕ್ಕೆ ಇಡೀ ತಾಲೂಕು ಹೆಮ್ಮೆ ಪಟ್ಟಿರುವುದು ನನಗೆ ಶಕ್ತಿ ತುಂಬಿದೆ ಎಂದರು.
ವೇ. ಮಹಾದೇವಯ್ಯ ಶಾಸ್ತ್ರೀಗಳು ಮಾತನಾಡಿ, ಸೈನಿಕರು ತಮ್ಮ ವಯಕ್ತಿಕ ಬದುಕನ್ನು ಬಿಟ್ಟು ದೇಶದೊಳಗಿನ ನಾವೆಲರೂ ನೆಮ್ಮದಿಯಿಂದ ಜೀವನ ನಡೆಸಲು ಗಡಿ ಕಾಯ್ದು ಹೊರಗಿನ ಶತ್ರುಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತಾರೆ.ಹಾಗೆ ದೇಶದೊಳಗಿನ ಶತ್ರುಗಳ ಬಗ್ಗೆ ನಾವೆಲ್ಲರೂ ನಿಗಾ ಇಡಬೇಕು. ಹಾಗೆ ಸೈನಿಕರ ಕುಟುಂಬದವರನ್ನು ಅತಿ ಹೆಚ್ಚು ಗೌರವದಿಂದ ಕಾಣಬೇಕು ಎಂದರು.
ಮುಖಂಡ ಪುನೀತ ಹಿಪ್ಪರಗಿ,ಹೋರಾಟಗಾರ ಬಸವರಾಜ ನಂದಿಕೇಶ್ವರಮಠ, ಸಾಹಿತಿ ಶಿವಪುತ್ರ ಅಜಮನಿ, ಪತ್ರಕರ್ತ ಪರಶುರಾಮ ಕೊಣ್ಣೂರ, ಮಾಜಿ ಸೈನಿಕ ರೇವಣೆಪ್ಪ ಹರಿಜನ ಮಾತನಾಡಿದರು, ಸಮೀತಿಯ ಅಧ್ಯಕ್ಷ ಶ್ರೀಕಾಂತ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಮೀತಿಯ ಪದಾಧಿಕಾರಿಗಳಾದ ಮಹಾಂತೇಶ ಬೂದಿಹಾಳಮಠ, ಚಂದ್ರು ಕಲಾಲ, ಶೇಖರ ಢವಳಗಿ, ರಾಜು ಬಳ್ಳೊಳ್ಳಿ, ಕಾಶಿನಾಥ ಹುಗ್ಗಿ, ಸಂತೋಷ ಬಾದರಬಂಡಿ, ವರ್ತಕರಾದ ಮಾಣಿಕಚಂದ ದಂಡಾವತಿ, ಹುಲ್ಲೂರ ಗ್ರಾಮದ ಭೀಮನಗೌಡ ಬಿರಾದಾರ, ನಬೀಸಾಬ ಕಂಬಾರ, ತಾಲೂಕಾ ಪಿಂಜಾರ ಸಮಾಜದ ಅಧ್ಯಕ್ಷ ಎಂ.ಡಿ.ನದಾಫ್ ಅಮರಗೋಳ, ಮುತ್ತು ಚಲವಾದಿ,ರಾಜು ಮ್ಯಾಗೇರಿ ಹಾಗೂ ಕಾಶಿಬಾಯಿ ಚಲವಾದಿ ಅವರ ಕುಟುಂಬದ ಸದಸ್ಯರು ಇದ್ದರು.







