ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ತಂದೆ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ, ತಾಯಿ ಗೃಹಿಣಿ. ವಾಸಿಸುವುದಕ್ಕೆ ಸ್ವಂತ ಮನೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೇ ಪಟ್ಟಣದ ಯುವಕರೊಬ್ಬರು ಯುಪಿಎಸ್ಸಿ ಪರೀಕ್ಷೆಯಲ್ಲಿ 462ನೇ ರ್ಯಾಂಕ್ ಪಡೆದುಕೊಂಡು ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಮಹಾಂತೇಶ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಶಿಕ್ಷಕ ಚೆನ್ನಪ್ಪ ಯರಂತೇಲಿ ಹಾಗೂ ಸುಮಿತ್ರಾ ದಂಪತಿ ಪುತ್ರ ರಾಹುಲ್ ಯರಂತೇಲಿ ಅವರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ 462ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಈ ಕುರಿತು ಪತ್ರಕರ್ತರೊಂದಿಗೆ ಸಂತಸ ಹಂಚಿಕೊಂಡ ರಾಹುಲ್ ಅವರು, ಯುಪಿಎಸ್ಸಿ ಪರೀಕ್ಷೆಯಲ್ಲಿ ಇದು ನನ್ನ ಆರನೇ ಪ್ರಯತ್ನವಾಗಿತ್ತು. ಮೂರು ಬಾರಿ ಮುಖ್ಯಪರೀಕ್ಷೆ ಬರೆದಿದ್ದೆ. ಆದರೆ ವಿಫಲನಾಗಿದ್ದೆ. ಆದರೆ ನಾಲ್ಕನೇ ಬಾರಿ ಮುಖ್ಯಪರೀಕ್ಷೆ ಉತ್ತೀರ್ಣನಾಗಿ ಸಂದರ್ಶನ ಮುಗಿಸಿದ್ದು ಇದೀಗ 462ನೇ ರ್ಯಾಂಕ್ ಬಂದಿದೆ ಎಂದು ತಿಳಿಸಿದರು.
ನಿತ್ಯವೂ 7-8 ತಾಸು ಓದುತ್ತಿದ್ದೆ. ಯುಪಿಎಸ್ಸಿಗೆಂದೇ ಬೆಂಗಳೂರು ಡಾ. ರಾಜಕುಮಾರ ಅಕಾಡೆಮಿ ಫಾರ್ ಸಿವ್ಹಿಲ್ ಸರ್ವಿಸ್ನಲ್ಲಿ 10 ತಿಂಗಳು ತರಬೇತಿ ಪಡೆದುಕೊಂಡಿದ್ದೆ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಐಎಎಸ್ ಕನಸು ಇತ್ತು. ಹುದ್ದೆಯ ಬಗ್ಗೆ ಇರುವ ಆಸಕ್ತಿ, ಗೌರವದಿಂದ ಸಾರ್ವಜನಿಕ ಸೇವೆ ಮಾಡಲು ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಐಪಿಎಸ್ ಹುದ್ದೆ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ರಾಹುಲ್ ಅವರ ತಂದೆ, ಪ್ರಾಥಮಿಕ ಶಾಲೆಯ ಶಿಕ್ಷಕ ಚೆನ್ನಪ್ಪ ಯರಂತೇಲಿ ಮಾತನಾಡಿ, ಮೂಲತಃ ಬ.ಬಾಗೇವಾಡಿ ತಾಲ್ಲೂಕು ಮಸೂತಿ ಗ್ರಾಮದವರಾಗಿರುವ ಯರಂತೇಲಿ ಕುಟುಂಬ ಮುದ್ದೇಬಿಹಾಳದಲ್ಲಿಯೇ ಕಳೆದ 30 ವರ್ಷಗಳಿಂದ ನೆಲೆಸಿದ್ದೇವೆ. ಮುದ್ದೇಬಿಹಾಳ ತಾಲ್ಲೂಕು ಇಣಚಗಲ್ನಲ್ಲಿ ಮೊದಲು ಸೇವೆಗೆ ಸೇರಿದಾಗ ತಿಂಗಳಿಗೆ 1750 ವೇತನ ಇತ್ತು. ಮಕ್ಕಳಿಗೆ ಕಷ್ಟಪಟ್ಟು ಓದಿಸಿದ್ದೇವೆ. ನಾನು ಇಣಚಗಲ್, ಕೋಳೂರು, ಅಡವಿ ಸೋಮನಾಳ ಹಾಗೂ ಸದ್ಯಕ್ಕೆ ಗೋನಾಳ ಪಿಎನ್ ಎಚ್ಪಿಎಸ್ ಶಾಲೆಯ ಮುಖ್ಯಶಿಕ್ಷಕನಾಗಿದ್ದುಕೊಂಡು ಸೇವೆ ಸಲ್ಲಿಸುತ್ತಿದ್ದೇನೆ. ಮಗನ ಸಾಧನೆ ತುಂಬಾ ಖುಷಿಕೊಟ್ಟಿದೆ. ಮಗನ ಸಾಧನೆಯಲ್ಲಿ ಅವರ ತಾಯಿಯ ಪಾತ್ರ ಅವಿಸ್ಮರಣೀಯ ಎಂದು ಹೇಳಿದರು.
ರಾಹುಲ್ ಅವರ ತಾಯಿ ಸುಮಿತ್ರಾ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡಿಡದೇ ಅವರಿಗೆ ಶಿಕ್ಷಣ ಕೊಡುವ ಕೆಲಸ ಮಾಡೋಣವೆಂದು ನಿರ್ಧರಿಸಿ ಓದಿಸಿದ್ದೇವು. ಕಷ್ಟದ ಪರಿಸ್ಥಿತಿಯಲ್ಲೂ ಮಗ ಉನ್ನತ ಸಾಧನೆ ತೋರಿದ್ದಾನೆ. ಹುಟ್ಟಿಬೆಳೆದ ಊರಿಗೆ, ನಮ್ಮ ತವರು ಮನೆಗೆ ಹೆಸರು ತಂದಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಿಕ್ಷಕ ಚೆನ್ನಪ್ಪ ಯರಂತೇಲಿ ಅವರ ಸಹದ್ಯೋಗಿಗಳಾಗಿ ಕೆಲಸ ಮಾಡುತ್ತಿರುವ ಶಿಕ್ಷಕ ಸಿದ್ಧನಗೌಡ ಕಾಶಿನಕೂಂಟಿ, ನಿವೃತ್ತ ಶಿಕ್ಷಕ ಎಸ್.ಎ.ಬೇವಿನಗಿಡದ, ಸಿ.ಜಿ.ನಾಗರಾಳ ಅವರು ಸಾಧನೆಗೈದ ರಾಹುಲ್ ಯರಂತೇಲಿ ಅವರನ್ನು ಸನ್ಮಾನಿಸಿದರು.
ನನ್ನ ಪ್ರಾಥಮಿಕ ಶಾಲೆಯ ಶಿಕ್ಷಣ ಇಣಚಗಲ್ ಗ್ರಾಮದಲ್ಲಿ, 6-12ನೇ ತರಗತಿಯವರೆಗೆ ಆಲಮಟ್ಟಿ ಜವಾಹರ ನವೋದಯ ವಿದ್ಯಾಲಯದಲ್ಲಿ ಓದಿದ್ದೇನೆ. ನಂತರ ಬಿಇ ಕಂಪ್ಯೂಟರ್ ಸೈನ್ಸ್ ನಲ್ಲಿ ಬೆಂಗಳೂರಿನ ಎಂಯುಜೆ ಕಾಲೇಜಿನಲ್ಲಿ ಓದಿದ್ದೇನೆ. ಸಣ್ಣ ಪುಟ್ಟ ಇನ್ಸಿಟ್ಯೂಟ್ನಲ್ಲಿ ಕೆಲಸ ಮಾಡಿ ನನ್ನ ಖರ್ಚುಗಳಿಗೆ ಹಣ ಹೊಂದಿಸಿಕೊಳ್ಳುತ್ತಿದ್ದೆ. ನನ್ನ ತಂದೆ ತಾಯಿಯಿವರ ಸ್ಪೂರ್ತಿ, ಪ್ರೋತ್ಸಾಹದಿಂದಲೇ ಇಂದು ಈ ಸಾಧನೆ ಕಾರಣವಾಗಿದೆ. ಭವಿಷ್ಯದಲ್ಲಿ ಒಳ್ಳೆಯದೊಂದು ಮನೆ ಕಟ್ಟಿ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
ರಾಹುಲ್ ಯರಂತೇಲಿ, ಯುಪಿಎಸ್ಸಿ ಪರೀಕ್ಷೆಯಲ್ಲಿ 462ನೇ ರ್ಯಾಂಕ್ ಪಡೆದುಕೊಂಡ ಅಭ್ಯರ್ಥಿ