ಮುದ್ದೇಬಿಹಾಳ : ಮುಂಗಾರು ಹಂಗಾಮಿನಲ್ಲಿ ಯೂರಿಯಾ ವಿತರಣೆಗೆ ಆಪ್ ಅಭಿವೃದ್ಧಿಪಡಿಸಲಾಗಿದ್ದು ಎಲ್ಲ ಕೃಷಿ ಪರಿಕರ ಮಾರಾಟಗಾರರು ಅದನ್ನು ಬಳಸಿಕೊಂಡು ಯೂರಿಯಾ ಮಾರಾಟ ಮಾಡಬೇಕು.ಯೂರಿಯಾ ,ಡಿಎಪಿ ಗೊಬ್ಬರ ಖರೀದಿಸಲು ರೈತರ ಖಾತೆಗಳು ಎಫ್.ಐ.ಡಿ ನೋಂದಣಿಯಾಗಿರುವುದು ಕಡ್ಡಾಯವಾಗಿದೆ ಎಂದು ವಿಜಯಪುರದ ಉಪ ಕೃಷಿ ನಿರ್ದೇಶಕ ಶರಣಗೌಡ ಆರ್, ಎಂದು ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ಬಿ.ಜಿ.ಮಠ್ ಸಭಾಭವನದಲ್ಲಿ ಮಂಗಳವಾರ ಕೃಷಿಪರಿಕರ ಮಾರಾಟಗಾರರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಸನ್ 2026-27ನೇ ಸಾಲಿನಲ್ಲಿ ರೈತರಿಗೆ ಯೂರಿಯಾ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ.ಆದರೆ ಕೊಲ್ಲಿ ರಾಷ್ಟçಗಳ ಯುದ್ದದ ಪರಿಣಾಮ ರಸಗೊಬ್ಬರದ ಪೂರೈಕೆ ವಿತರಣೆ ಮೇಲೆ ವ್ಯತ್ಯಾಸ ಆಗದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಮಾರಾಟಗಾರರಿಗೆ ತಿಳಿವಳಿಕೆ ನೀಡಲಾಗುತ್ತದೆ.ಎಫ್.ಐ.ಡಿ ಇಲ್ಲದ ರೈತರಿಗೆ ಸಂಬOಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ತಕ್ಷಣ ಎಫ್.ಐ.ಡಿ ಮಾಡಿಕೊಟ್ಟು ಯೂರಿಯಾ ವಿತರಣೆಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ವಿಜಯಪುರ ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ಎ. ಪಿ. ಬಿರಾದಾರ ಮಾತನಾಡಿ, ಯೂರಿಯಾ, ಡಿಎಪಿ ಗೊಬ್ಬರದ ವಿತರಣೆ ಬಗ್ಗೆ ಕೃಷಿ ಪರಿಕರ ಮಾರಾಟಗಾರರಿಗೆ ತಿಳಿಸಲಾಗಿದೆ.ನಿಗದಿತ ದರದಲ್ಲಿ ರಸಗೊಬ್ಬರ ಮಾರಾಟ ಮಾಡಲು ತಿಳಿಸಲಾಗಿದೆ.ರಸಗೊಬ್ಬರದ ಕೃತಕ ಅಭಾವ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಸಂಬOಧಿಸಿದ ಮಾರಾಟಗಾರರ ಲೈಸನ್ಸ್ ರದ್ದುಗೊಳಿಸುವುದು,ಕ್ರಿಮಿನಲ್ ಕೇಸ್ ದಾಖಲಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಹೇಳಿದರು.
ಜಾರಿದಳದ ಇನ್ನೋರ್ವ ಸಹಾಯಕ ನಿರ್ದೇಶಕಿ ರೇಷ್ಮಾ ಸುತಾರ್ ಮಾತನಾಡಿ, ಯೂರಿಯಾ ಗೊಬ್ಬರವನ್ನು ದೊಡ್ಡ ರೈತರಿಗೆ ಹೆಚ್ಚು ಸಣ್ಣ ರೈತರಿಗೆ ಕಡಿಮೆ ಪ್ರಮಾಣದಲ್ಲಿ ವಿತರಿಸದೇ ಆದ್ಯತೆ ಮೇರೆಗೆ ಎಲ್ಲರಿಗೂ ದೊರೆಯುವಂತೆ ನೋಡಿಕೊಳ್ಳಬೇಕು.ಮೊದಲು ನಮ್ಮ ಜಿಲ್ಲೆ, ತಾಲ್ಲೂಕಿನ ರೈತರಿಗೆ ಯೂರಿಯಾ ಗೊಬ್ಬರ ದೊರೆಯಬೇಕು.ನಂತರ ಬೇರೆ ಜಿಲ್ಲೆ,ತಾಲ್ಲೂಕಿನ ರೈತರಿಗೆ ಆದ್ಯತೆ ನೀಡಬಹುದಾಗಿದೆ ಎಂದು ಹೇಳಿದರು.
ತಾಂತ್ರಿಕ ಕೃಷಿ ಅಧಿಕಾರಿ ರಾಜೇಶ್ವರಿ ನಾಡಗೌಡ,ಢವಳಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಗೋವಿಂದರೆಡ್ಡಿ ಮೆದಿಕಿನಾಳ,ಮುದ್ದೇಬಿಹಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸೋಮನಗೌಡ ಬಿರಾದಾರ,ಕೃಷಿ ಪರಿಕರ ಮಾರಾಟಗಾರರ ಪ್ರತಿನಿಧಿ ಶಿವಶಂಕರಗೌಡ ಹಿರೇಗೌಡರ ಹಾಗೂ ಮುದ್ದೇಬಿಹಾಳ,ತಾಳಿಕೋಟಿ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರು ಇದ್ದರು.







