
ಮುದ್ದೇಬಿಹಾಳ : ವಿದ್ಯಾಸಂಸ್ಥೆಗಳು ವಿದ್ಯೆಯನ್ನು ಮಾರುವ ಸಂಸ್ಥೆಗಳಾರಬಾರದು. ಅದನ್ನು ನೀಡುವ ಸಂಸ್ಥೆಗಳಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ತಾಲ್ಲೂಕು ನಾಗರಬೆಟ್ಟದಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಜೀನಿಯಸ್ ಸ್ಟೂಡೆಂಟ್ ಆವಾರ್ಡ್ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ
ಯಾವುದೇ ತಂದೆ ತಾಯಿಗಳು ತಮ್ಮ ಮಕ್ಕಳು ದಡ್ಡರಿರುವುದಿಲ್ಲವೆಂಬ ಭಾವನೆ ಇರುತ್ತದೆ. ಮನಸ್ಸು ಸದೃಢವಾಗಿದ್ದವರು ಏನೂ ಬೇಕಾದರೂ ಆಗಬಹುದು. ಅನವಶ್ಯಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳುತ್ತಾ ಕಾಲಹರಣ ಮಾಡಬಾರದು. ಒಳ್ಳೆಯವರಾಗಲು ಬಹಳ ಸಮಯ ಬೇಕು. ಆದರೆ ಕೆಟ್ಟವರಾಗಲು ಒಂದು ಕ್ಷಣ ಸಾಕು. ಕೆಎಎಸ್, ಐಎಎಸ್ ಅಧಿಕಾರಿಗಳಾಗಿ ಸಮಾಜದ ಸೇವೆ ಸಲ್ಲಿಸಿ. ಸಿನೇಮಾ ನಟ, ನಟಿಯರೆಲ್ಲಾ ನಿಮ್ಮ ಹಿರೋಗಳಲ್ಲ. ತಂದೆ ತಾಯಿ, ಶಿಕ್ಷಕರು ನಿಮ್ಮ ಹಿರೋಗಳು ಎಂದು ಹೇಳಿದರು.
ಮಾದರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್. ಎಲ್. ಪಾಟೀಲ್ ಮಾತನಾಡಿ, ಉನ್ನತ ವಿದ್ಯೆಯನ್ನು ಪಡೆದುಕೊಂಡು ವಿದೇಶದಲ್ಲಿ ಉದ್ಯೋಗದಲ್ಲಿರುವ ಮಕ್ಕಳು ತಮ್ಮ ತಂದೆ ತಾಯಿ ನಿಧನರಾದರೆ ಅವರ ಶವಸಂಸ್ಕಾರಕ್ಕೂ ಬಾರದಷ್ಟು ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಕುಟುಂಬದಲ್ಲಿನ ಭಾವನಾತ್ಮಕ ಸಂಸ್ಕೃತಿಯನ್ನು ಮರುಸ್ಥಾಪಿಸಬೇಕಾದ ಅಗತ್ಯತೆ ಇದೆ ಎಂದರು.
ವಿಜ್ಞಾನಿ ಚಂದ್ರಶೇಖರ ಬಿರಾದಾರ, ಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ, ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ, ಬಿಇಒ ಬಿ. ಎಸ್. ಸಾವಳಗಿ, ಫೌಂಡೇಶನ್ ಫಾರ್ ಎಕ್ಸಲೆನ್ಸ್ ಪ್ರತಿನಿಧಿ ಸಂಗಮೇಶ ಹೂಗಾರ ಮಾತನಾಡಿದರು. ಡಾ. ನಿಸರ್ಗ ಎನ್. ಕೆ, ಸಂಸ್ಥೆಯ ನಿರ್ದೇಶಕ ದರ್ಶನಗೌಡ ಪಾಟೀಲ, ನಾಲತವಾಡ ವೀರೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯ ಡಿ. ಆರ್. ಮಳಖೇಡ, ಇಸ್ಮಾಯಿಲ್ ಮನಿಯಾರ, ರೇವಣಸಿದ್ದ ಚಲವಾದಿ,ರಾಜಶೇಖರ ಹಿರೇಮಠ ಇದ್ದರು.
ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಪರೀಕ್ಷೆಯಲ್ಲಿ ಹುಕ್ಕೇರಿ ಎಸ್. ಕೆ. ಪಬ್ಲಿಕ್ ಸ್ಕೂಲ್ನ ಅಶ್ವಿನಿ ಬಡಮಲ್ಲಣ್ಣವರ ಜೀನಿಯಸ್ ಸ್ಟೂಡೆಂಟ್ ಆಗಿ ಹೊರ ಹೊಮ್ಮಿದಳು. ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಅಲ್ಲದೇ 2024ರಲ್ಲಿ 172 ಮೆಡಿಕಲ್ ಸೀಟು ಪಡೆದುಕೊಂಡ ವಿದ್ಯಾರ್ಥಿಗಳು, ಪಾಲಕರನ್ನು ಸನ್ಮಾನಿಸಲಾಯಿತು.
ಸ್ಪೂರ್ತಿತುಂಬಿದ ಅಪರ ಜಿಲ್ಲಾಧಿಕಾರಿ ಮಾತು :
ಮೂಲತಃ ದೇವರಗೆಣ್ಣೂರು ಗ್ರಾಮದವರಾದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ತಾವು ತಹಸೀಲ್ದಾರ್ ಹುದ್ದೆಗೆ ಏರುವುದಕ್ಕೆ ಕಾರಣವಾದ ಘಟನೆಯನ್ನು ನೆನೆಸಿಕೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ನನ್ನ ತಂದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಸ ಹೊಡೆಯುವ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು. ಆರು ತಿಂಗಳಿಂದ ಅವರಿಗೆ ಸಂಬಳ ಬಂದಿರಲಿಲ್ಲ. ಆಗ ಸಂಬಂಧಿಸಿದ ತಹಸೀಲ್ದಾರ್ ಸೇವೆಯಲ್ಲಿದ್ದವರನ್ನು ಭೇಟಿಯಾಗಿ ಅವರ ಕಾಲಿಗೆ ಅಡ್ಡಲಾಗಿ ಎರಗಿ ಪಗಾರ ಮಾಡುವಂತೆ ಗೋಗರೆದರು. ಆಗ ನನ್ನ ತಂದೆಯ ವೇಷಭೂಷಣ ನೋಡಿದ ತಹಸೀಲ್ದಾರ್ ಭಿಕ್ಷುಕನ್ಯಾರೋ ಬಂದಿದ್ದಾನೆ ಎಂದು ಕಚೇರಿಯಿಂದ ಹೊರಗೆ ಹಾಕಲು ತಿಳಿಸಿದರು. ಆ ಸನ್ನಿವೇಶವೇ ನನ್ನನ್ನು ತಹಸೀಲ್ದಾರ್ ಆಗಬೇಕು ಎಂಬ ಆಸೆಯನ್ನು ಮೂಡಿಸಿತು. ಅಂದೇ ನಿರ್ಧಾರ ಮಾಡಿ ತಹಸೀಲ್ದಾರ್ ಆಗಬೇಕಾದರೆ ಏನು ಓದಬೇಕು ಎಂದು ಕಷ್ಟಪಟ್ಟು ಓದಿ ತಹಸೀಲ್ದಾರನಾದೆ. ಆದರೆ ತಹಸೀಲ್ದಾರ್ ಖುರ್ಚಿಯಲ್ಲಿ ನಾನು ಕೂಡುವ ಹೊತ್ತಿಗೆ ನನ್ನ ತಂದೆ ಬದುಕಿರಲಿಲ್ಲ ಎಂದು ನೆನೆಸಿಕೊಂಡರು.