ಮುದ್ದೇಬಿಹಾಳ : ಜನೌಷಧಿ ಕೇಂದ್ರಗಳು, ಉಚಿತ ಅಕ್ಕಿ ಕೊಡುವ ಯೋಜನೆ, ಆಯುಷ್ಮಾನ್ ಆರೋಗ್ಯ ಕಾರ್ಡ ಇಂತಹ ನೂರಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಬಿಜೆಪಿ ಸರ್ಕಾರ ಕೇಂದ್ರದಲ್ಲಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಐದು ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆ ಕಲ್ಪಿಸುವ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳೆಂಬ ಅಗ್ಗದ ಯೋಜನೆಗಳನ್ನು ಕೊಟ್ಟು ಜನರನ್ನು ಕಾಂಗ್ರೆಸ್ ಸರ್ಕಾರ ಮರಳು ಮಾಡಲು ಮುಂದಾಗಿದೆ ಎಂದು ಆರೋಪಿಸಿದರು. 35 ವ್ಯಾಟ್ ಇದ್ದದ್ದು 75 ವ್ಯಾಟ್ ವಿದ್ಯುತ್ನ್ನು ಉಚಿತವಾಗಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದರು.
ಮುಖಂಡ ಗಂಗಾಧರ ನಾಡಗೌಡ ಮಾತನಾಡಿ, ಬಿಜೆಪಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಕಲು ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡರಾದ ಪ್ರಭು ಕಡಿ, ಕೆಂಚಪ್ಪ ಬಿರಾದಾರ, ಮಧುಸ್ವಾಮಿ, ಸಂಜೀವ ಬಾಗೇವಾಡಿ, ಗಿರೀಶ ಪಾಟೀಲ, ಸಿದ್ದು ಹಿರೇಮಠ, ಅಶೋಕ ರಾಠೋಡ, ನಾಗೇಶ ಕವಡಿಮಟ್ಟಿ, ಗೌರಮ್ಮ ಹುನಗುಂದ ಮೊದಲಾದವರು ಇದ್ದರು.