ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ ಟಿಸಿ ಒದಗಿಸುವಲ್ಲಿ ವಿಳಂಬ ಧೋರಣೆ ಖಂಡಿಸಿದ ರೈತರು ಸೋಮವಾರ ಇಲ್ಲಿನ ಹೆಸ್ಕಾಂ ಕಚೇರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಅನೇಕ ಗ್ರಾಮಗಳಿಂದ ಬಂದಿದ್ದ ರೈತರು ತಮ್ಮೂರುಗಳಲ್ಲಿ ಎದುರಿಸುತ್ತಿರುವ ವಿದ್ಯುತ್ ಸಂಬoಧಿ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ತಾಲ್ಲೂಕಿನಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದ್ದು, ರೈತರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ನಿಯಮಾನುಸಾರ ರೈತರ ಪಂಪ್ ಸೆಟ್ಗಳಿಗೆ ದಿನಕ್ಕೆ 7 ಗಂಟೆಗಳ ವಿದ್ಯುತ್ ಪೂರೈಕೆ ಆಗಬೇಕು.ಆದರೆ ಅದು ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ ಎಂದು ದೂರಿದರು.
ಮಿಂಚು ಹಾಗೂ ಇತರ ಕಾರಣಗಳಿಂದ ಅನೇಕ ರೈತರ ಟ್ರಾನ್ಸ್ಫಾರ್ಮರ್ಗಳು (ಟಿಸಿ) ಸುಟ್ಟು ಹೋಗಿದ್ದು, ಈ ಕುರಿತು ಸಂಬoಧಪಟ್ಟ ಲೈನ್ಮನ್, ಸೆಕ್ಷನ್ ಅಧಿಕಾರಿಗಳು, ಜೆ.ಇ. ಹಾಗೂ ಎ.ಇ.ಇ. ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ.ಸರ್ಕಾರವು ರೈತರಿಗೆ ಅನುಕೂಲವಾಗುವಂತೆ ಮುದ್ದೇಬಿಹಾಳದಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ಕೇಂದ್ರವನ್ನು ಸ್ಥಾಪಿಸಿದ್ದರೂ, ಅದನ್ನು ಸಮರ್ಪಕವಾಗಿ ಬಳಸದೇ ರೈತರು ತಮ್ಮ ಸ್ವಂತ ವಾಹನಗಳಲ್ಲಿ ಟ್ರಾನ್ಸ್ಫಾರ್ಮರಗಳನ್ನು ಬೇರೆಡೆಗೆ ಸಾಗಿಸಿ ದುರಸ್ತಿ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ನಿಯಮಾನುಸಾರ ಇಲಾಖೆಯೇ ಟ್ರಾನ್ಸ್ಫಾರ್ಮರ್ಗಳನ್ನು ಸಾಗಿಸಿ, ದುರಸ್ತಿ ಮಾಡಿ, ನಿಗದಿತ ಅವಧಿಯಲ್ಲಿ ಮರುಸ್ಥಾಪಿಸಬೇಕಾಗಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ ಎಂದು ಹರಿಹಾಯ್ದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ಲೈನಗಳು ಜೋತು ಬಿದ್ದಿವೆ. ಹಲವೆಡೆ ಇನ್ಸುಲೇಟರ್ಗಳು ಹಾಗೂ ಇತರೆ ಉಪಕರಣಗಳು ಹಾಳಾಗಿರುವುದರಿಂದ ಪದೇ ಪದೇ ಲೈನ್ ಫಾಲ್ಟ್ ಉಂಟಾಗಿ ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರು ಪೂರೈಸಲು ಸಾಧ್ಯವಾಗದೆ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರ ಸಮಸ್ಯೆಗಳನ್ನು ಸಾವಧಾನವಾಗಿ ಆಲಿಸಿದ ಹೆಸ್ಕಾಂ ಇಇ ಎಸ್.ಎಂ.ಬಿರಾದಾರ ಅವರು, ರೈತರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರಲ್ಲದೇ ಮುದ್ದೇಬಿಹಾಳದಲ್ಲಿಯೇ ಟಿಸಿ ದುರಸ್ತಿ ಕೇಂದ್ರ ಆರಂಭಗೊoಡಿದೆ ಎಂದು ರೈತರಿಗೆ ಮಾಹಿತಿ ನೀಡಿದರು.ಟಿಸಿ ನೀಡಲು,ಕೂಡಿಸಲು ಹಣ ಕೇಳಿದರೆ ನೇರವಾಗಿ ತಮ್ಮನ್ನು ಸಂಪರ್ಕಿಸಿ ದೂರು ನೀಡುವಂತೆ ಅವರು ರೈತರಿಗೆ ಮನವಿ ಮಾಡಿದರು.ಇದೇ ವೇಳೆ ರೈತರು ವಿವಿಧ ಬೇಡಿಕೆಯುಳ್ಳ ಮನವಿ ಪತ್ರವನ್ನು ಅಧಿಕಾರಿ ಬಿರಾದಾರ ಅವರಿಗೆ ಸಲ್ಲಿಸಿದರು.ಹೆಸ್ಕಾಮ್ ಎಇಇ ಆರ್.ಎನ್.ಹಾದಿಮನಿ, ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ,ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಮುಖಂಡ ಹುಲಗಪ್ಪ ನಾಯಕಮಕ್ಕಳ,ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಬಂದಿದ್ದ ರೈತರು,ಬ.ಬಾಗೇವಾಡಿ.ನಿಡಗುಂದಿ ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಲೈನಮನ್ಗಳು ಲೈನ್ ಬದಲಾಯಿಸಿಕೊಡಲು ಹಣಕ್ಕೆ ಬೇಡಿಕೆ ಇಡುತ್ತಾರೆ.ರೈತರು ಮೊದಲೇ ಬೇಸಿಗೆ ಸಮಯವಾಗಿ ಒಣಗುತ್ತಿರುವ ಬೆಳೆಗೆ ಹೇಗೋ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಬೇಕೆಂದರೆ ಅಧಿಕಾರಿಗಳಿಗೆ ಒಂದಿಷ್ಟು,ಲೈನಮನ್ಗಳಿಗೆ ಒಂದಿಷ್ಟು ಲಂಚ ಕೊಡುವುದು ಅನಿವಾರ್ಯ ಎಂಬAತಾಗಿದೆ ಎಂದು ರೈತರು ದೂರಿದ್ದು ಕಂಡು ಬಂದಿತು.







