ಮುದ್ದೇಬಿಹಾಳ : ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ದುಂದುವೆಚ್ಚದಲ್ಲಿ ಮಾಡುವಬದಲು ಅದೇ ಖರ್ಚಿನಲ್ಲಿ ನೂರಾರು ಬಡವರ ಮಕ್ಕಳ ಮದುವೆಗಳನ್ನು ಮಾಡಿಕೊಟ್ಟರೆ ಸಮಾಜಕ್ಕೆ ಮಾದರಿಯಾಗಿರುತ್ತಾರೆ.ರಾಜಕಾರಣಿಗಳ ಬುದ್ಧಿ ಬದಲಾಗಬೇಕಿದೆ ಎಂದು ಬಸವನ ಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಶುಕ್ರವಾರ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಬ್ಬ ರಾಜಕಾರಣಿಯ ಮಗನ ಮದುವೆಯಲ್ಲಿ ಮಾಡುವ ಖರ್ಚು 500 ಮದುವೆಗಳನ್ನು ಮಾಡಿಕೊಡಬಹುದಾಗಿದೆ.ಮಠಗಳಲ್ಲಿ ಮದುವೆಗಳ ಸಂಖ್ಯೆ ಇಳಿಮುಖವಾಗಿದ್ದು ಇಂತಹ ದೇವಸ್ಥಾನಗಳಲ್ಲಿ ಮದುವೆ ಕಾರ್ಯಗಳು ಹೆಚ್ಚುತ್ತಾ ಸಾಗಿರುವುದು ಶ್ಲಾಘನೀಯ ಸಂಗತಿ ಎಂದರು.
ಕುAಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಮದುವೆಯ ಮುಂಚೆಯೇ ಫೋಟೋ ಶೂಟ್ಗೆಂದೆ 5-10 ಲಕ್ಷ ರೂ.ಖರ್ಚು ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು.ಸಮಾಜದಲ್ಲಿ ಮಾದರಿ ಮದುವೆಗಳಿಗೆ ಸಹಕಾರ ನೀಡಬೇಕು.ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಮಾತನಾಡಿ, ಮಂಗಳಮುಖಿಯರಿಗೆ ಶಿಕ್ಷಣ ಕೊಡುವ ಕಾರ್ಯ ಆಗಬೇಕು.ನಿಮ್ಮ ಮನೆಯಲ್ಲಿ ತೃತೀಯ ಲಿಂಗಿ ಜನಿಸಿದ್ದರೆ ಅವರನ್ನು ಕಡೆಗಣಿಸಬೇಡಿ.ಅವರಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಉತ್ತಮ ಆಸ್ತಿ ನಿಮಗೆ ಆಗುತ್ತಾರೆ.ಶಿಕ್ಷಣ ದೊರೆಯದ್ದಕ್ಕೆನೇ ಹೈವೆ ಪಕ್ಕದಲ್ಲಿ,ರೈಲು ,ಬಸ್ ನಿಲ್ದಾಣಗಳಲ್ಲಿ ಮತ್ತೊಬ್ಬರ ಎದುರಿಗೆ ಕೈ ಚಾಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಸರ್ಕಾರ ಸಮಾಜದ ಪ್ರಗತಿಪರ ಸಂಘಟನೆಗಳು ಮಂಗಳಮುಖಿಯರಿಗೆ ಅನುಕಂಪ ತೋರುವ ಬದಲು ಉದ್ಯೋಗವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯ ಭೂಮಿಕೆಗೆ ತರಬಹುದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಲ್ಕೆರೂರ ಬಿಲ್ವಾಶ್ರಮದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲ.ಭಾಗ್ಯವಂತರ ಮದುವೆಗಳಾಗಿವೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಸಹೋದರ ನಾಗರಾಜ ತಂಗಡಗಿ, ಕಾರ್ಯಕ್ರಮದ ನೇತೃತ್ವ ವಹಿಸಿದ್ದ ದೇವಿ ಆರಾಧಕ ಶಾಂತಪ್ಪ ಪೂಜಾರಿ,ತಂಗಡಗಿ ಹಡಪದ ಅಪ್ಪಣ್ಣ ಸಂಸ್ಥಾನ ಗುರುಪೀಠದ ಅನ್ನದಾನ ಭಾರತಿ ಅಪ್ಪಣ್ಣ ಶ್ರೀ,ಬಳವಾಟದ ಸೋಮಶೇಖರ ಶಿವಾಚಾರ್ಯರು,ದೇವಿ ಆರಾಧಕರಾದ ಮುತ್ತಪ್ಪ ಪೂಜಾರಿ,ಗ್ರಾಪಂ ಮಾಜಿ ಸದಸ್ಯ ಮಂಜು ಪೂಜಾರಿ, ಮುಖಂಡರಾದ ಸಂಗಣ್ಣ ಗುಳೇದಗುಡ್ಡ, ಸಂಗಣ್ಣ ದೇವರಮನಿ,ಚರಲಿಂಗಪ್ಪ ಹಾದಿಮನಿ,ರಾಮು ಲಿಂಗದಳ್ಳಿ, ಈಶ್ವರ ಗಡ್ಡಿ, ಎಂ.ಡಿ.ತಾರನಾಳ,ಸಿ.ಎಫ್.ನಾವಿ,ಸುರೇಶ ಹಾದಿಮನಿ ಮೊದಲಾದವರು ಇದ್ದರು.
26 ಜೋಡಿ ನವಜೀವನಕ್ಕೆ :
ತಂಗಡಗಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 26 ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು.ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿ ಸಿಬ್ಬಂದಿ ಬಾಲ್ಯವಿವಾಹ ಆಗದಂತೆ ನೋಡಿಕೊಂಡರು.ಪೊಲೀಸ್ ಇಲಾಖೆಯ ಸಿಬ್ಬಂದಿ ರಸ್ತೆ ಸಂಚಾರ ದಟ್ಟಣೆ ಆಗದಂತೆ ನೋಡಿಕೊಂಡರು.







