ಮುದ್ದೇಬಿಹಾಳ : ಯಾರು ರಂಜಾನ್ ಮಾಸದಲ್ಲಿ ಶ್ರದ್ಧೆಯಿಂದ ನಮಾಜ್, ರೋಜಾ, ಕುರಾನ್ ತಿಲಾವತ್ ಹಾಗೂ ಜಕಾತ್ನಂತಹ ಧಾರ್ಮಿಕ ವಿಧಿಗಳನ್ನು ಪೂರೈಸಿರುತ್ತಾರೋ, ಬಡವರಿಗೆ ದಾನ ಧರ್ಮಗಳನ್ನು ಮಾಡಿರುತ್ತಾರೋ, ಅಂತಹವರಿಗೆ ಮಾತ್ರ ಈದ್ಗಾಗೆ ಪ್ರವೇಶಿಸುವ ಮತ್ತು ರಂಜಾನ್ ಹಬ್ಬವನ್ನು ಆಚರಿಸುವ ನೈತಿಕ ಹಕ್ಕಿದೆ ಎಂದು ಜಾಮಿಯಾ ಮಸೀದಿಯ ಪೇಶ ಇಮಾಮ್ ಪ್ರತಿಪಾದಿಸಿದರು.
ಪಟ್ಟಣದ ತಾಳಿಕೋಟಿ ರಸ್ತೆಯ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಈದ್ ಅಲ್-ಫಿತರ್ ರಂಜಾನ್ ಸಾಮೂಹಿಕ ನಮಾಜಿನ ನಂತರ ನೆರೆದಿದ್ದ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಅವರು ಮಾತನಾಡಿದರು.
“ರಂಜಾನ್ ಕೇವಲ ಉಪವಾಸಕ್ಕೆ ಸೀಮಿತವಾಗಿಲ್ಲ. ಇದು ಆತ್ಮಾವಲೋಕನ ಮತ್ತು ದಾನದ ಮಾಸವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಸಿವನ್ನು ನೀಗಿಸುವ ‘ಜಕಾತ್’ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು ನಿಜವಾದ ಹಬ್ಬದ ಸಂಭ್ರಮಕ್ಕೆ ಅರ್ಹರು. ದೇವರ ಮೇಲಿನ ಭಕ್ತಿ ಹಾಗೂ ಬಡವರ ಮೇಲಿನ ಕರುಣೆ ಹೊಂದಿರುವವರು ಈ ಪವಿತ್ರ ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಸಾರ್ಥಕತೆ ಪಡೆಯುತ್ತಾರೆ” ಎಂದು ಅವರು ತಿಳಿಸಿದರು.
ನಗರದ ಎಲ್ಲಾ ಮಸೀದಿಗಳಿಂದ ಕಿಲ್ಲಾಗಲ್ಲಿಯ ಜುಮ್ಮಾ ಮಸೀದಿಯಲ್ಲಿ ಕೂಡಿದ ಜಮಾತಗಳನ್ನು ಸಾಮೂಹಿಕವಾಗಿ ತಕಬೀರ್ ಹೇಳುತ್ತಾ ಈದ್ಗಾ ಮೈದಾನಕ್ಕೆ ಆಗಮಿಸಿದರು.
ತಾಳಿಕೋಟಿ ರಸ್ತೆಯ ಈದ್ಗಾದಲ್ಲಿ ನಡೆದ ಈ ಸಾಮೂಹಿಕ ನಮಾಜಿನಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಸಿಪಿಐ ಮೊಹ್ಮದ ಫಸಿವುದ್ದೀನ,ಪಿಎಸ್ಐ ಸಂಜಯ ತಿಪರೆಡ್ಡಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.







