ಮುದ್ದೇಬಿಹಾಳ : ಸನ್ 2026 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮರು ಮೌಲ್ಯಮಾಪನದಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ ಮಠ್ಸ್ ಸಮೂಹ ಸಂಸ್ಥೆಯ ಎಸ್.ಡಿ.ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ಶೃತಿ ಶಿವನಗೌಡ ಪೀರಾಪೂರ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಈ ಮೊದಲು ಫಲಿತಾಂಶ ಪ್ರಕಟಗೊಂಡಾಗ ಶೃತಿಗೆ 617 ಅಂಕ ಪಡೆದುಕೊಂಡಿದ್ದಳು.ಶಾಲೆಯ ಆಡಳಿತ ಮಂಡಳಿ ಹಾಗೂ ಪಾಲಕರು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಮತ್ತೆ ಏಳು ಅಂಕಗಳು ಶೃತಿಗೆ ಲಭಿಸಿವೆ.ಆ ಮೂಲಕ ಶೃತಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದುಕೊಂಡು ಸಂಸ್ಥೆಯ,ಊರಿನ ಕೀರ್ತಿ ಹೆಚ್ಚಿಸಿದ್ದಾಳೆ.
ಆಂಗ್ಲ ಮಾಧ್ಯಮ ವಿಭಾಗದಲ್ಲಿ ಹರ್ಷಿತಾ ನಾಗೂರ ಈ ಮುಂಚೆ 620 ಅಂಕ ಪಡೆದುಕೊಂಡಿದ್ದು ಮರುಮೌಲ್ಯಪಾಲನದಲ್ಲಿ ಮತ್ತೆ ಎರಡು ಅಂಕ ಬಂದಿದ್ದು 622 ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾಳೆ.ಕನ್ನಡ ಮಾಧ್ಯಮದಲ್ಲಿ ಸವಿತಾ ಲೊಟಗೇರಿ ಮೊದಲು ಫಲಿತಾಂಶ ಪ್ರಕಟಗೊಂಡಾಗ 612 ಅಂಕ ಪಡೆದುಕೊಂಡಿದ್ದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ 10 ಅಂಕಗಳು ಬಂದಿದ್ದು ಒಟ್ಟು 622 ಅಂಕಗಳೊoದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾಳೆ. ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ. ಜಿ. ಮಠ, ಆಡಳಿತಾಧಿಕಾರಿ ಪ್ರಜ್ವಲ್ ಬಿ. ಮಠ, ಕಾರ್ಯದರ್ಶಿ ಸಿದ್ದಯ್ಯ ಮಠ,ಮುಖ್ಯಗುರು ಹೀರೂ ನಾಯಕ,ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನ ಪ್ರಾಚಾರ್ಯ ಇರ್ಫಾನ್ ಬಾಗವಾನ್,ಮಾರ್ಗದರ್ಶಕ ಎಂ.ಎ.ನದಾಫ ಅಭಿನಂದಿಸಿದ್ದಾರೆ.
ಮೌಲ್ಯಮಾಪಕರ ವಿರುದ್ಧ ಕ್ರಮ-ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್:
ಆಕ್ಸಫರ್ಡ್ ಮಠ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಇಬ್ಬರು ವಿದ್ಯಾರ್ಥಿಗಳಿಗೆ ಆರಕ್ಕಿಂತ ಹೆಚ್ಚು ಅಂಕ ಲಭಿಸಿದ್ದು ತಪ್ಪು ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಗೆ ದಂಡ ವಿಧಿಸಲು ಅವಕಾಶ ಇದೆ.ನಿಯಮದಂತೆ ಆರಕ್ಕಿಂತ ಹೆಚ್ಚು ಅಂಕ ವಿದ್ಯಾರ್ಥಿ ಪಡೆದರೆ ಆ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ತಪ್ಪಿತಸ್ಥ ಮೌಲ್ಯಮಾಪಕರಿಂದ ದಂಡ ವಸೂಲಿ ಮಾಡಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್ ಮಾಡಲಾಗುತ್ತದೆ ಎಂದು ಬಿಇಒ ಬಿ.ಎಸ್.ಸಾವಳಗಿ ತಿಳಿಸಿದ್ದಾರೆ.







