ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದಲ್ಲಿರುವ ಬಡವರ ಮಕ್ಕಳ ಶೈಕ್ಷಣಿಕ ಭವಿಷ್ಯ ಕಟ್ಟುತ್ತಿರುವ ಖಾಸಗಿ ಶಾಲೆಗಳನ್ನು ಬೆಂಬಲಿಸುವ ಕಾರ್ಯ ಸಮಾಜ,ಸಂಘಟನೆಗಳು ಮಾಡಬೇಕು ಎಂದು ಸಮಾಜ ಸೇವಕ,ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ವಿದ್ಯಾಸ್ಪೂರ್ತಿ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಕಾಲದ ಗುರುಕುಲ ಪದ್ಧತಿಯಲ್ಲಿ ಖಾಸಗಿ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ವಸತಿ ಕಲ್ಪಿಸಿ ಶಿಕ್ಷಣ ಕೊಡುವ ಕಾರ್ಯ ಮಾಡುತ್ತಿವೆ.ನೌಕರರ ಮಕ್ಕಳು,ಸ್ಥಿತಿವಂತರ ಮಕ್ಕಳು ಇಂತಹ ಸಣ್ಣಪುಟ್ಟ ಶಾಲೆಗಳಲ್ಲಿ ಓದುವುದಿಲ್ಲ.ಇಲ್ಲಿ ಓದುವ ಮಕ್ಕಳ ಪಾಲಕರಲ್ಲಿ ಬಹುತೇಕರು ಗೋವಾ,ಮಹರಾಷ್ಟçದ ರಾಜ್ಯಗಳಲ್ಲಿ ಗುಳೇ ಹೋಗಿ ದುಡಿಯುವವರು.ಅದನ್ನು ಲಕ್ಷö್ಯದಲ್ಲಿಟ್ಟುಕೊಂಡು ಮಕ್ಕಳ ಶೈಕ್ಷಣಿಕ ಭವಿಷ್ಯ ಕಟ್ಟಿಕೊಡಲು ಸಮಾಜ ಮುಂದಾಗಬೇಕೆ ಹೊರತು ಶಿಕ್ಷಣ ಸಂಸ್ಥೆಗಳ ಮೇಲೆ ರಾಜಕೀಯ ವ್ಯಕ್ತಿಗಳು ಕೈ ಆಡಿಸುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಹೇಳಿದರು.
ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಮಾತನಾಡಿ, ಗುಣಾತ್ಮಕ ಶಿಕ್ಷಣ ಕೊಡುತ್ತಿರುವ ಕಾರಣದಿಂದಲೇ ಶಿಕ್ಷಣ ಸಂಸ್ಥೆಯೊAದು ಬೆಳೆದು ನಿಲ್ಲಲು ಸಾಧ್ಯವಾಗುತ್ತದೆ.ಅಂತಹ ಗುಣಾತ್ಮಕ ಶಿಕ್ಷಣ ನೀಡುವ ಸಂಸ್ಥೆ ವಿದ್ಯಾಸ್ಪೂರ್ತಿ ಶಾಲೆಯಾಗಿದೆ.ಒಳ್ಳೆಯ ಸಂಸ್ಥೆಗಳು ಬೆಳೆಯುವ ಹಂತದಲ್ಲಿ ಕಾಡುವವರು ಬಹಳ ಜನ ಇದ್ದಾರೆ.ಅವರು ಕಾಡುತ್ತಿರುವುದಕ್ಕೆ ಕಾರಣ ಒಳ್ಳೆಯ ಫಲಿತಾಂಶ ಕಾರಣವಾಗಿದೆ. ಸಹದ್ಯೋಗಿ ಸಂಸ್ಥೆಗಳಲ್ಲಿರುವವರು ಅಸೂಯೆ ಭಾವನೆ ಬೆಳೆಯುವಂತೆ ಮಾಡಿ ಹೋರಾಟ ಮಾಡುತ್ತಿದ್ದಾರೆ.ಕಷ್ಟ ನಷ್ಟಗಳು ಬರಬಹುದು.ಅವುಗಳನ್ನು ಎದುರಿಸಬೇಕು.ಮಕ್ಕಳಿಗೆ ಅಕ್ಷರಜ್ಞಾನಕ್ಕಿಂತ ಸಂಸ್ಕಾರವನ್ನು ನೀಡಬೇಕು.ಒಳ್ಳೆಯದಿರುವಲ್ಲಿ ಸಮಾಜ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದರು.
ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಸಿದರೆಡ್ಡಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಶಾಲೆಯಿಂದ ನೂರಾರು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು ನವೋದಯ,ಸೈನಿಕ,ಮೊರಾರ್ಜಿ,ಕಿತ್ತೂರು ಚೆನ್ನಮ್ಮ,ಅಳಿಕೆ,ಆರ್.ಎಂ.ಎಸ್.ಎ ಶಾಲೆಯಂತಹ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ ಮಾತನಾಡಿ, ನಾವು ಹುಟ್ಟಿ ಬೆಳೆದಿದ್ದು ನಾಗರಬೆಟ್ಟದ ಗ್ರಾಮೀಣ ಭಾಗದಲ್ಲಿ.ನಮ್ಮ ಕುಟುಂಬದ ವೃತ್ತಿ ಮುಂಬಯಿನಲ್ಲಿತ್ತು.ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನ ಕೊಡಬೇಕು ಎಂಬ ಸದುದ್ದೇಶದಿಂದ ನಮ್ಮ ಆಸ್ತಿ ಮಾರಿ ಇಲ್ಲಿ ಶಾಲೆಗಳನ್ನು ಆರಂಭಿಸಿದ್ದೇವೆ.ಕೆಲವರು ನಮ್ಮ ಬೆಳವಣಿಗೆ ಸಹಿಸದೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.ಅದಕ್ಕೆ ನಮ್ಮ ಶಾಲೆಯಿಂದ ಮಕ್ಕಳಿಗೆ ದೊರೆಯುತ್ತಿರುವ ಗುಣಾತ್ಮಕ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಶಾಲೆಗಳಲ್ಲಿ ಆಯ್ಕೆಯಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯ ಉತ್ತರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪ್ರಗತಿಪರ ರೈತ ಯಂಕಪ್ಪಗೌಡ ಕೊಣ್ಣೂರ,
ಸಂಸ್ಥೆಯ ಉಪಾಧ್ಯಕ್ಷ ರಾಮನಗೌಡ ಸಿದರಡ್ಡಿ,ಮಲ್ಲಿಕಾರ್ಜುನ ಸಿದರೆಡ್ಡಿ, ಪಲ್ಲವಿ ಸಿದರೆಡ್ಡಿ,ಶಾಲೆಯ ಮುಖ್ಯಗುರು ಗುರುರಾಜ ಕನ್ನೂರ, ದಸ್ತಗೀರ್, ದಂಡಮ್ಮ, ಜಯಶ್ರೀ, ವಿಜಯಲಕ್ಷ್ಮಿ ಹಾಗೂ ರವಿ ಪತ್ತಾರ,ಚನ್ನಬಸು ಬಳವಾಟ ಪಾಲ್ಗೊಂಡಿದ್ದರು. ಸಾವಿತ್ರಿ ಬಿರಾದಾರ ನಿರೂಪಿಸಿದರು. ವಾಣಿ ಬಿರಾದಾರ ಸ್ವಾಗತಿಸಿದರು. ಪ್ರಿಯಾಂಕ ಮುದ್ದೇಬಿಹಾಳ ವಂದಿಸಿದರು.
ವಿದ್ಯಾಸ್ಪೂರ್ತಿ ಟಾಲೆಂಟ್ ಅವಾರ್ಡ್–2026 ಪರೀಕ್ಷೆಯಲ್ಲಿ ಹೂವಿನ ಹಿಪ್ಪರಗಿಯ ಆದ್ಯಾ ಶಿವಯೋಗಿ ಪ್ರಥಮ, ನಿಡಗುಂದಿಯ ಸಮನ್ವಿತಾ ಸಜ್ಜನ ದ್ವಿತೀಯ,ಢವಳಗಿಯ ಸ್ಮಿತಿಕಾ ಬಿರಾದಾರ ತೃತೀಯ ಬಹುಮಾನವನ್ನು ಪಡೆದರು. ಉತ್ತಮ ಸಾಧನೆಗೈದ 10 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.







